ಬೆಂಗಳೂರು : ಗಿರಿನಗರದ ಶ್ರೀರಾಮಾಶ್ರಮದಲ್ಲಿ ಮಾರ್ಚ್ 20, 2016 ಭಾನುವಾರದಂದು ಮಧ್ಯಾಹ್ನ 12.30 ಗಂಟೆಗೆ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ದಿವ್ಯಸಾನ್ನಿಧ್ಯದಲ್ಲಿ ಹಿಂದುಳಿದ ಪರಿಶಿಷ್ಠ ಜಾತಿಗೆ ಸೇರಿದ ಮುಕ್ರಿ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.
ಮುಕ್ರಿ ಸಮಾಜವು ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಮುಖವಾಗಿ ವಾಸವಾಗಿರುವ ಅತ್ಯಂತ ಹಿಂದುಳಿದ ಸಮಾಜವಾಗಿದ್ದು, ಮುಕ್ರಿ ಸಮಾಜದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಿ, ಆ ಮೂಲಕ ಅವರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುವ ದಿಶೆಯಲ್ಲಿ ಶ್ರೀ ರಾಮಚಂದ್ರಾಪುರ ಮಠದ ವಿದ್ಯಾ ವಿಭಾಗದಿಂದ ಈ ವಿದ್ಯಾರ್ಥಿ ವೇತನವನ್ನು ವಿತರಿಸಲಾಗುತ್ತಿದ್ದು, ಈ ವರ್ಷ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಬಿ.ಎ., ಬಿ.ಕಾಂ., ಐ.ಟಿ.ಐ., ನರ್ಸಿಂಗ್, ಎಮ್.ಕಾಮ್, ಎಮ್.ಎ ವ್ಯಾಸಂಗ ಮಾಡುತ್ತಿರುವ ಮುಕ್ರಿ ಸಮಾಜದ 63 ವಿದ್ಯಾರ್ಥಿಗಳಿಗೆ ಒಟ್ಟು ರೂ. 2,75,000/- ರೂಗಳ ವಿದ್ಯಾರ್ಥಿ ವೇತನವನ್ನು ವಿತರಿಸಲಾಗುತ್ತಿದೆ.
ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಶ್ರೀ ರಾಮಚಂದ್ರಾಪುರ ಮಠವು ಶತಮಾನಗಳಿಂದಲೂ ಜ್ಞಾನದಾನವನ್ನು ಮಾಡುತ್ತಿದೆ. ಶ್ರೀಮಠದ ಉಚಿತ ವೇದಪಾಠಶಾಲೆಗಳಲ್ಲಿ ಸಾವಿರಾರು ಜನ ಕಲಿತಿದ್ದು, ಹೊಸನಗರದ ಶ್ರೀಭಾರತೀ ಗುರುಕುಲದಲ್ಲಿ ವೇದ, ಸಂಸ್ಕೃತ ಮತ್ತು ಆಧುನಿಕ ವಿದ್ಯಾಭ್ಯಾಸವನ್ನು ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿ ನೀಡುತ್ತಿದೆ.
ಶ್ರೀ ರಾಮಚಂದ್ರಾಪುರ ಮಠದ ವತಿಯಿಂದ ಇಮಾಮಿ ಫೌಂಡೇಷನ್ ಮುಂತಾದ ಸ್ವಯಂಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಯಾವುದೇ ಜಾತಿ ಧರ್ಮಗಳ ತಾರತಮ್ಯವಿಲ್ಲದೇ ಗೋಕರ್ಣ ಸುತ್ತಮುತ್ತಲಿನ ಬಡ ವಿದ್ಯಾರ್ಥಿಗಳಿಗೆ 'ಸಾರ್ವಭೌಮ ವಿದ್ಯಾರ್ಥಿವೇತನ' ವನ್ನು ವಿತರಿಸಲಾಗುತ್ತಿದ್ದು, 2014-15 ರಲ್ಲಿ ಗೋಕರ್ಣ ಸುತ್ತಮುತ್ತಲಿನ 5 ಹಳ್ಳಿಗಳ ಎಲ್ಲಾ ಸಮಾಜದ 247 ವಿದ್ಯಾರ್ಥಿಗಳಿಗೆ ರೂ. 14,50,000/- ಗಳನ್ನು, 2015-16 ಸಾಲಿನಲ್ಲಿ ಗೋಕರ್ಣ ಸುತ್ತಲಿನ 8 ಹಳ್ಳಿಗಳ ಎಲ್ಲಾ ಸಮಾಜದ 649 ವಿದ್ಯಾರ್ಥಿಗಳಿಗೆ ರೂ. 19,41,000/- ರೂಗಳ ಸಾರ್ವಭೌಮ ವಿದ್ಯಾರ್ಥಿವೇತನ ವಿತರಿಸಿರುವುದನ್ನು ನಾವಿಲ್ಲಿ ಸ್ಮರಿಸಬಹುದು.
ಶ್ರೀರಾಮಚಂದ್ರಾಪುರಮಠವು ಹಳ್ಳಿಯ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ನೀಡುತ್ತಿದ್ದು, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಶ್ರೀಮಠದ ಶಾಲೆಗಳಲ್ಲಿ ಸೆಟಲೈಟ್ ಶಿಕ್ಷಣ, ಕಂಪೂಟರ್ ಶಿಕ್ಷಣ, ಆಂಗ್ಲಭಾಷಾ ಶಿಕ್ಷಣ, ಪರಿಸರ ಜಾಗೃತಿ, ಸಂಸ್ಕೃತಿ ಸಂಸ್ಕಾರದ ಜೊತೆಗಿರುವ ಶಿಕ್ಷಣವನ್ನು ಒದಗಿಸುತ್ತಿದೆ.