ಗೋಕರ್ಣ : ಪುರಾಣ ಪ್ರಸಿದ್ದ ಶ್ರೀಕ್ಷೇತ್ರ ಗೋಕರ್ಣದ ಸಾರ್ವಭೌಮ ಮಹಾಬಲೇಶ್ವರ ದೇವಾಲಯದಲ್ಲಿ ಶಿವರಾತ್ರಿ ಮಹೋತ್ಸವದ ಪ್ರಯುಕ್ತ ಶ್ರೀ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರಭಾರತೀ ಸ್ವಾಮೀಜಿ ಅವರ ದಿವ್ಯ ಮಾರ್ಗದರ್ಶನದಲ್ಲಿ ಮಾರ್ಚ್ 2 ರಿಂದ ರಿಂದ ಮಾರ್ಚ್ 09ರ ವರೆಗೆ ಹಲವಾರು ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ತಳಿಲು ತೋರಣ - ವಿದ್ಯುದ್ದೀಪಾಲಂಕಾರಗಳಿಂದ ದೇವಾಲಯದ ಪರಿಸರವನ್ನು ಶೃಂಗರಿಸಲಾಗಿದೆ.ಮಾರ್ಚ್, 7 ರಂದು ಸೋಮವಾರ ಶಿವರಾತ್ರಿಯ ಶಿವಯೋಗದ ಶುಭಪರ್ವದಂದು ವಿಶೇಷ ಕಾರ್ಯಕ್ರಮಗಳು ನೆಡೆಯಲಿವೆ ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.
ದಕ್ಷಿಣ ಕಾಶಿ ಎಂದೇ ಪ್ರಸಿದ್ದವಾಗಿರುವ ಗೋಕರ್ಣದ ಮಹಾಬಲೇಶ್ವರನ ಆತ್ಮಲಿಂಗ ದರ್ಶನಕ್ಕೆ ಶಿವರಾತ್ರಿಯಂದು ರಾಜ್ಯ-ಹೊರರಾಜ್ಯಗಳಿಂದ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕೆ ದೇವಾಲಯದ ಆಡಳಿತ ವ್ಯವಸ್ಥೆ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಶಿವರಾತ್ರಿ ದಿನ ಇಪ್ಪತ್ತನಾಲ್ಕು ಗಂಟೆಯೂ ಆತ್ಮಲಿಂಗಕ್ಕೆ ಭಕ್ತರು ಸ್ವತಃ ಜಲಾಭಿಷೇಕ-ಬಿಲ್ವಾರ್ಚನೆ ಹಾಗೂ ಇತರ ವಿಶೇಷ ಪೂಜೆಗಳನ್ನು ನೆರವೇರಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಶಿವರಾತ್ರಿಯಂದು ದೇವಾಲಯದ ಪರಿಸರದಲ್ಲಿ ರುದ್ರಹವನ, ಮಹಾಕುಂಭಾಭಿಷೇಕ ಪೂರ್ವಕ ಮಹಾಪೂಜೆ, ಪುಷ್ಪರಥೋತ್ಸವ, ಜಲಯಾನೋತ್ಸವ, ದೀಪೋತ್ಸವಾದಿಗಳು ವಿಶೇಷವಾಗಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಶಿವರಾತ್ರಿ ಮಹೋತ್ಸವದ ಪ್ರಯುಕ್ತ ಮಾರ್ಚ್ 2 ರಿಂದಲೇ ಧಾರ್ಮಿಕ ವಿಧಿ ವಿಧಾನಗಳು ಸಂಪನ್ನವಾಗುತ್ತಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶ್ರಾಂತ ನ್ಯಾಯಮೂರ್ತಿ ರಾಮಾಜೋಯ್ಸ್ ಅವರಿಂದ ಉದ್ಘಾಟನೆಗೊಂಡಿದ್ದು, ಕಡಲತೀರದ ಮಹರ್ಷಿ ದೈವರಾತ ವೇದಿಕೆಯಲ್ಲಿ ಹಲವು ಪ್ರಕಾರದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಯಾತ್ರಾರ್ತಿಗಳನ್ನು ಆಕರ್ಷಿಸುತ್ತಿದೆ.
ದೇಶದ ನಾನಾಭಾಗಗಳಿಂದ ಆಗಮಿಸುವ ಯಾತ್ರಾರ್ತಿಗಳ ಅನುಕೂಲಕ್ಕೆ ಹಲವಾರು ವ್ಯವಸ್ಥೆಗಳನ್ನು, ಮುನ್ನೆಚ್ಚರಿಕಾ ಕ್ರಮಗಳನ್ನು ದೇವಾಲಯದ ಆಡಳಿತ ವ್ಯವಸ್ಥೆ ಕೈಗೊಂಡಿದೆ. ಎಂದಿನಂತೆ ಅಮೃತಾನ್ನ ಪ್ರಸಾದ ಭೋಜನವನ್ನು ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ಕಲ್ಪಿಸಲು ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದ್ದು, ಯಾತ್ರಿಕರಿಗೆ ಅನುಕೂಲವಾಗುವಂತೆ ಇತರ ವ್ಯವಸ್ಥೆಗಳನ್ನೂ ಕೈಗೊಳ್ಳಲಾಗಿದೆ.
ಪರಂಪರೆಯಿಂದ ಶ್ರೀರಾಮಚಂದ್ರಾಪುರ ಮಠಕ್ಕೆ ಸೇರಿದ್ದ ದೇವಾಲಯದ ಆಡಳಿತವನ್ನು 2008ರಲ್ಲಿ ಸರ್ಕಾರ ಪುನಃ ಶ್ರೀಮಠಕ್ಕೆ ವಹಿಸಿಕೊಟ್ಟ ನಂತರ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ಎರಡು ಹೊತ್ತು ಅಮೃತಾನ್ನ ಪ್ರಸಾದ ಭೋಜನ, ಶುದ್ದ ಕುಡಿಯುವ ನೀರಿನ ವ್ಯವಸ್ಥೇ, ಯಾವುದೇ ಶುಲ್ಕವಿಲ್ಲದೇ, ಯಾವುದೇ ಬೇಧವಿಲ್ಲದೇ ಆತ್ಮಲಿಂಗದ ಅರ್ಚನೆಗೆ ಅವಕಾಶ, ನಿಂತುಹೋಗಿದ್ದ ಹಲವಾರು ಪೂಜಾ ವಿಧಿ ವಿಧಾನಗಳ ಪುನರಾರಂಭ, ಗೋಕರ್ಣದ ಸುತ್ತಮುತ್ತಲಿನ ಎಲ್ಲಾ ಸಮುದಾಯದ ಬಡವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಸ್ವಚ್ಚತೆ ಹಾಗೂ ಗೋಕರ್ಣದ ಸರ್ವತೋಮುಖ ಅಭಿವೃದ್ಧಿದೆ ಯೋಜನೆಗಳು ಸೇರಿದಂತೆ ಹಲವಾರು ಧನಾತ್ಮಕ ಬದಲಾವಣೆಗಳನ್ನು ದೇವಾಲಯದ ಆಡಳಿತ ವ್ಯವಸ್ಥೆ ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರಭಾರತೀ ಸ್ವಾಮೀಜಿ ಅವರ ದಿವ್ಯ ಮಾರ್ಗದರ್ಶನದಲ್ಲಿ ಸಾಧಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು.