ನವದೆಹಲಿ : ಸೋಮವಾರ ಮುಂದಿನ ವರ್ಷದ ಬಜೆಟ್ ಮಂಡಿಸಿದಾಗ, 125 ಕೋಟಿ ಜನರು ತಮ್ಮನ್ನು ಪರೀಕ್ಷೆ ಮಾಡಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ಭಾನುವಾರ, ತಮ್ಮ ತಿಂಗಳ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ನಾವು ಪರೀಕ್ಷೆಯ ಸಂದರ್ಭದಲ್ಲಿ ಯಾವುದೇ ಒತ್ತಡಕ್ಕೊಳಗಾಗದೆ, ಒತ್ತಡ ಮುಕ್ತರಾಗಿರಬೇಕು. ಧನಾತ್ಮಕವಾಗಿ ಯೋಚಿಸಬೇಕೆಂದು ಹೇಳಿ ಈ ಮಾತನ್ನಾಡಿದರು.
ನಾಳೆ ನನಗೆ ಪರೀಕ್ಷೆ ಇದೆ. ನಾಳೆ ಮುಂಗಡ ಪತ್ರವನ್ನು ಮಂಡಿಸಿದಾಗ, 125 ಕೋಟಿ ಜನತೆ ನನ್ನನ್ನು ಪರೀಕ್ಷೆ ಮಾಡಲಿದ್ದಾರೆ. ಆದರೆ ನನಗೆ ವಿಶ್ವಾಸವಿದೆ, ನಿಮಗೂ ಶುಭಾ ಹಾರೈಸುತ್ತೇನೆ ಎಂದು ಪ್ರಧಾನಿ ಮೋದಿ ನುಡಿದರು.
ಕಾರ್ಯಕ್ರಮದಲ್ಲಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಚೆಸ್ ಚಾಂಪಿಯನ್ ವಿಶ್ವನಾಥ ಆನಂದ್ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಎದುರಿಸುವ ಬಗ್ಗೆ ತಮ್ಮ ಸಂದೇಶ ನೀಡಿದರು.
ನಿಮ್ಮ ಆಲೋಚನಾ ಕ್ರಮ ಧನಾತ್ಮಕವಾಗಿರಲಿ, ಆಗ ನಿಮಗೆ ಧನಾತ್ಮಕ ಫಲಿತಾಂಶವೇ ಖಂಡಿತಾ ಬರುತ್ತದೆ. ನೀವೆ ಒಂದು ಗುರಿಯನ್ನು ನಿಗದಿಪಡಿಸಿಕೊಂಡು ಅದನ್ನು ಸಾಧಿಸಲು ಪ್ರಯತ್ನಿಸಬೇಕೆಂದು ಎಂದು ಸಚ್ಚಿನ್ ತೆಂಡೂಲ್ಕರ್ ತಿಳಿಸಿದರು.
ಬೋರ್ಡ್ ಪರೀಕ್ಷೆಯ ಸವಾಲುಗಳು, ನಾವು ಮುಂದೆ ಜೀವನದಲ್ಲಿ ಎದುರಿಸುವ ಸವಾಲುಗಳಂತೆ. ಪ್ರಮುಖವಾದ ಅಂಶವೆಂದರೆ ನಾವು ಯಾವಾಗಲೂ ಶಾಂತವಾಗಿರಬೇಕು. ಇದು ಚೆಸ್ ಆಟದಂತೆಯೇ. ಯಾವಾಗಲೂ ಶಾಂತವಾಗಿರಿ. ಅತೀಯಾದ ವಿಶ್ವಾಸ ಬೇಡ ಅದರೆ ನಿರಾಶವಾದಿ ಕೂಡ ಆಗಬೇಡಿ ಎಂದು ಚೆಸ್ ಚಾಂಪಿಯನ್ ವಿಶ್ವನಾಥ ಆನಂದ್ ಹೇಳಿದರು.
ವಿದ್ಯಾರ್ಥಿ ಜೀವನದಲ್ಲಿ ಶಿಸ್ತಿನ ಅಗತ್ಯತೆ ಬಗ್ಗೆ ಕೂಡ ಪ್ರಧಾನಿ ವಿವರಿಸಿದರು. ಮನಸ್ಸು ಶಾಂತವಾಗಿದ್ದರೆ ಪರೀಕ್ಷೆ ಸುಲಭಾವಾಗುತ್ತದೆ ಎಂದರು.
ಈ ದೇಶದಲ್ಲಿ ಹಲವಾರು ಅವಕಾಶಗಳಿವೆ. ನಿಮ್ಮ ಜೀವನದಲ್ಲಿ ನಿಮಗೆ ಏನು ಬೇಕು, ಏನಾಗಬೇಕೆಂಬ ಬಗ್ಗೆ ನೀವೇ ನಿರ್ಧರಿಸಬೇಕು. ಅಲ್ಲದೇ ನೀವು ಅದನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡಬಾರದು ಎಂದು ಕಾರ್ಯಕ್ರಮದಲ್ಲಿ ಜೊತೆಯಾದ ವಿಜ್ಞಾನಿ ಸಿ ಎನ್ ಆರ್ ರಾವ್ ಸಲಹೆ ನೀಡಿದರು.