February 27, 2016
ಅರಿವು, ಭಾವ ಹಾಗೂ ಸಾಹಸಕ್ಕೆ ಶ್ರೀ ರಾಮಚಂದ್ರಾಪುರ ಮಠದ ಸನ್ಮಾನ
ರಾಮಾಯಣ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿರು ಫಾತಿಮತ್ ಅವರಿಗೆ ಸನ್ಮಾನ
ಬೆಂಗಳೂರು : ನಮ್ಮ ಕಣ್ಣ ಮುಂದೆ ಅನ್ಯಾಯವಾಗುತ್ತಿದ್ದಾಗ ಸುಮ್ಮನೇ ಇರಬಾರದು, ಅನ್ಯಾಯವನ್ನು ತಡೆಯಬೇಕು. ಈ ದಿಶೆಯಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಗೋವುಗಳನ್ನು ದಿಟ್ಟತನದಿಂದ ಸಂರಕ್ಷಿಸಿದ ರೀತಿ ಕಾಳ ಹೋರಾಟ ಸಮಾಜಕ್ಕೆ ಮಾದರಿ. ಹಾಗೆಯೇ ನಮ್ಮ ಸಂಸ್ಕತಿಯನ್ನು ಮರೆಯುತ್ತಿರುವ ಕಾಲಗಟ್ಟದಲ್ಲಿ ಇಸ್ಲಾಂ ಮತದ ಫಾತಿಮತ್ ರಾಮಾಯಣ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿರುವುದು ನಿಜಕ್ಕೂ ಶ್ಲಾಘನೀಯ. ನಮ್ಮ ಧರ್ಮವನ್ನು ಬಿಡದೇ ಇನ್ನೊಂದು ಧರ್ಮವನ್ನು ಹೇಗೆ ಗೌರವಿಸಬೇಕು ಎನ್ನುವುದಕ್ಕೆ ಇದು ಉದಾಹರಣೆ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು.
ಪ್ರಾಣದ ಹಂಗು ತೊರೆದು ಅಕ್ರಮವಾಗಿ ಸಾಗಾಟವಾಗುತ್ತಿದ್ದ ಗೋವುಗಳನ್ನು ರಕ್ಷಿಸಿದ ರಿತಿಕಾ ಗೋಯಲ್, ರಾಜ್ಯಮಟ್ಟದ ರಾಮಾಯಣ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಫಾತಿಮತ್ ರಾಹಿಲ್ ಹಾಗೂ ಚಿತ್ರಕ್ಕೆ ಶೀರ್ಷಿಕೆ ಕೊಡುವ ಸ್ಪರ್ಧೆಯಲ್ಲಿ ವಿಜೇತರಾದ ರಘು ವೆಂಕಟಾಚಲಯ್ಯ ಅವರುಗಳನ್ನು ಶನಿವಾರ ಶ್ರೀರಾಮಶ್ರಮದಲ್ಲಿ ನೆಡೆದ ಕಾರ್ಯಕ್ರಮದಲ್ಲಿ ಆಶೀರ್ವಾದ ಪೂರ್ವಕವಾಗಿ ಸನ್ಮಾನಿಸಿ ಮಾತನಾಡಿದ ಶ್ರೀಗಳು ಇದು ಅರಿವು, ಭಾವ ಹಾಗೂ ಸಾಹಸಕ್ಕೆ ಶ್ರೀರಾಮಚಂದ್ರಾಪುರಮಠದ ಸನ್ಮಾನ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಿತಿಕಾ ಗೋಯಲ್ ಅವರು, ಪ್ರಾಣಿ ದಯಾ ಕಾನೂನುಗಳು ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನವಾಗಬೇಕು. ನಾನೊಬ್ಬ ಹೆಣ್ಣಾಗಿ ಇದನ್ನು ಎದುರಿಸಿ ತಡೆದೆನೆಂದರೆ, ಯಾರಾದರೂ ಜಾನುವಾರು ಕಳ್ಳ ಸಾಗಣೆಯನ್ನು ತಡೆಯಬಹುದು. ಮೂಕ ಪ್ರಾಣಿಗಳ ಮೂಕವೇದನೆಗೆ ಧ್ವನಿಯಾಗಿ ನಿಂತಿರುವ ತೃಪ್ತಿ ತುಂಬಾ ದೊಡ್ಡದು ಮತ್ತು ಅದಕ್ಕೆ ಶ್ರೀರಾಮಚಂದ್ರಾಪುರ ಮಠ ಪ್ರೋತ್ಸಾಹಿಸಿರುವುದು ಧೈರ್ಯ ಮತ್ತು ಉತ್ಸಾಹವನ್ನು ಕೊಟ್ಟಿದೆ ಎಂದರು.
ಗೋವುಗಳ ಅಕ್ರಮ ಸಾಗಣೆ ತಡೆದ ರಿತಿಕಾ ಗೋಯಲ್ ಅವರಿಗೆ ಸನ್ಮಾನ
ರಿತಿಕಾ ಗೋಯಲ್ ಅವರು ಕಳೆದ ಶನಿವಾರ ಅಕ್ರಮವಾಗಿ ಸಾಗಣೇಯಾಗುತ್ತಿದ್ದ ಗೋವನ್ನು ತಡೆದು, ಅಕ್ರಮ ಸಾಗಣೇ ಮಾಡುತ್ತಿದ ಕಡೆಯವರು ಬೆದರಿಕೆ ಹಾಕುವ ಪ್ರಯತ್ನ ಮಾಡಿದಾಗ, ಅದರಿಂದ ವಿಚಲಿತಗೊಳ್ಳದ ರಿತಿಕಾ, ನೇರವಾಗಿ ಪೋಲೀಸರ ಬಳಿ ಚರ್ಚಿಸಿ, ಎಫ್.ಐ.ಆರ್ ದಾಖಲಿಸಿ,
ಗೋವುಗಳು ಗೋ ಶಾಲೆಗೆ ಸುರಕ್ಷಿತವಾಗಿ ತಲುಪುವಂತೆ ನೋಡಿಕೊಂಡಿದ್ದರು.
ರಾಜ್ಯ ಮಟ್ಟದ
ರಾಮಾಯಣ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ
ಫಾತಿಮತ್ ರಾಹಿಲ್ ಶ್ರೀಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಎಲ್ಲ
ಧರ್ಮದ ಗ್ರಂಥಗಳ ಮೂಲ ಅಂಶ ಒಂದೇ. ಅದು ಜಗತ್ತಿಗೆ ಒಳಿತಾಗಬೇಕು ಎಂಬುದು. ಹೀಗಾಗಿ ಎಲ್ಲ
ಧರ್ಮದ ಗ್ರಂಥಗಳನ್ನು ಗೌರವಿಸಬೇಕು. ನನಗೆ ಮೊದಲಿನಿಂದಲೇ ರಾಮಾಯಣದಲ್ಲಿ ಆಸಕ್ತಿ ಇತ್ತು. ಯಾವಾಗ ಶಾಲೆಯಲ್ಲಿ ಶಿಕ್ಷಕರು ಇಂಥದ್ದೊಂದು ಪರೀಕ್ಷೆ ಇದೆ ಅಂದಾಗ, ನಾನು ಈ ಪರೀಕ್ಷೆ ತೆಗೆದುಕೊಳ್ಳಲು ನಿರ್ಧರಿಸಿದೆ. ಶಾಲೆಯಲ್ಲಿ ಎಳೆಯರ ರಾಮಾಯಣ ಎಂಬ ಪುಸ್ತಕವನ್ನು ಶಾಲೆಯಿಂದ ಕೊಡಲಾಗಿತ್ತು. ಬಿಡುವಿನ ಸಮಯದಲ್ಲಿ ಓದುತ್ತಿದ್ದೆ. ಮನೆಯಲ್ಲಿ ತಂದೆ ತಾಯಿಯ ಪ್ರೋತ್ಸಾಹ ಅತ್ಯುತ್ತಮವಾಗಿತ್ತು. ರಾಮಾಯಣ ಓದಿಗೆ ನನ್ನ
ಧರ್ಮ ಅಡ್ಡ ಬರಲಿಲ್ಲ ಎಂದು ಹೇಳಿದರು.
ಶ್ರೀಗಳ ಅಧಿಕೃತ ಜಾಲಪುಟದಲ್ಲಿ
ಗೋವು ಹಾಗೂ ಕರುವಿನ ಚಿತ್ರಕ್ಕೆ ಉತ್ತಮ ಶೀರ್ಷಿಕೆ ಕೊಡುವ ಸ್ಪರ್ಧೆಯಲ್ಲಿ, 'ಮಾನವ ಕಟ್ಟಿದ ಗೋಡೆ ಅದ್ಯಾವ ಮಹಾ ಎತ್ತರ, ಗೋ ಸಂತತಿ ನಿರಂತರ!! ಬಾ ಹತ್ತಿರ!!!' ಎಂಬ ಶೀರ್ಷಿಕೆ ಕೊಟ್ಟಿದ್ದ ರಘು ವೆಂಕಟಾಚಲಯ್ಯ ಅವರನ್ನು ಶ್ರೀಗಳು ಆಶೀರ್ವದಿಸಿದರು. ಗೌರವ ಸ್ವೀಕರಿಸಿದ ರಘು ಅವರು ಮಾತನಾಡುತ್ತಾ- ಮಾನವ ಎಷ್ಟೇ ದೊಡ್ಡ ಗೋಡೆ ಕಟ್ಟಿದರೂ ಅದು ಸಣ್ಣದಾಗಿ ಬಿಡುತ್ತದೆ. ಯಾಕಂದ್ರೇ
ಗೋವುಗಳು ಅಷ್ಟು ಎತ್ತರ. ಶ್ರೀಗಳು ಗೋವಿನ ಕುರಿತು ಮಾಡಿದ ಕೆಲಸಗಳ ಬಗ್ಗೆ ತಿಳಿದಿದೆ. ಹೊಸನಗರ ಗೋಶಾಲೆ-ಮಠಕ್ಕೆ ಆಗಾಗ ಭೇಟಿ ಕೊಡುತ್ತಿರುತ್ತೇನೆ. ಗೋವಿನ ವಿಷಯವಾಗಿ ಇಂತಹ ಕಾರ್ಯಕ್ರಮಗಳು ನಡೆಯುತ್ತಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ. ಇದರಿಂದ ಸಮಾಜದಲ್ಲಿ ಗೋವಿನ ಕುರಿತಾದ ಅರಿವು ಮೂಡುತ್ತದೆ. ಸ್ಪರ್ಧೆಯ ದೃಷ್ಟಿಯಿಂದ ಬರೆಯಲಿಲ್ಲವಾದರೂ, ಅದನ್ನು ಸ್ವಾಮೀಜಿಗಳು ಗುರುತಿಸಿ ಆಶೀರ್ವದಿಸಿದ್ದು ತುಂಬ ಸಂತೋಷವಾಗಿದೆ ಎಂದು ಹೇಳಿದರು.