BW News Bureau : ಕನ್ನಡ ಸಾಹಿತ್ಯ ಲೋಕದಲ್ಲಿ ಭಾವಗೀತೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ವಿದ್ವಾಂಸ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಹೇಳಿದರು.
ಮಂಗಳೂರಿನ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ, ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ರಘು ಮುಳಿಯ ಅವರ ‘ಹಾಡಾಯಿತು ಹಕ್ಕಿ’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇತ್ತೀಚೆಗಿನ ಕವಿಗಳು ಭಾವಗೀತೆಗಳನ್ನು ರಚಿಸಲು ಗಮನ ಕೊಡುತ್ತಿಲ್ಲ. ಭಾವಗೀತೆ ಸ್ಪರ್ಧೆಳಲ್ಲಿ ಕೆಲವೇ ಕೆಲವು ಹಾಡುಗಳನ್ನು ಕೇಳುವಂತಹ ಪರಿಸ್ಥಿತಿ ಈಗ ಇದೆ’ ಎಂದರು.
‘ಕುವೆಂಪು, ಬೇಂದ್ರೆ, ಜಿ.ಎಸ್. ಶಿವರುದ್ರಪ್ಪ, ಎಚ್.ಎಸ್. ವೆಂಕಟೇಶ ಮೂರ್ತಿ ಅವರ ನಂತರ ಈ ಪರಂಪರೆ (ಭಾವಗೀತೆ ರಚನೆ) ಮುಂದುವರೆದಿಲ್ಲ. ಉದಯೋನ್ಮುಖ ಕವಿಗಳು ಭಾವಗೀತೆ ರಚನೆಗೆ ಹೆಚ್ಚು ಗಮನ ನೀಡಬೇಕು’ ಎಂದು ಸಲಹೆ ನೀಡಿದರು.
‘ನಮ್ಮಲ್ಲಿ ಛಂದಸ್ಸನ್ನು ವಿರೋಧಿಸುವವರಿದ್ದಾರೆ. ನಿಜ ಹೇಳಬೇಕೆಂದರೆ, ಛಂದಸ್ಸು ಎನ್ನುವುದು ಯಾವುದೇ ಸಾಹಿತ್ಯದ ಮಾಪಕ. ಕೇವಲ ಗದ್ಯದಿಂದ ಸಾಹಿತ್ಯವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಛಂದಸ್ಸು ಬೇಕು’ ಎಂದರು.
ಒಂದು ಸಾಹಿತ್ಯಕ್ಕೆ ನಾದ ಶಕ್ತಿಯೇ ಜೀವಾಳ. ನಾದ ಎಂದರೆ ಲಯಬದ್ಧ ಮತ್ತು ಕ್ರಮಬದ್ಧವಾಗಿ ಓದುವುದು. ಆದರೆ, ನಮ್ಮ ಸಾರಸ್ವತ ಲೋಕದಲ್ಲಿ ನಾದ ಶಕ್ತಿ ಮರೆಯಾಗಿದೆ. ಛಂದಸ್ಸು ಮತ್ತು ನಾದ ಬೆರೆತಾಗ ಸಾಹಿತ್ಯದ ಭಾವಾರ್ಥವನ್ನು ಗ್ರಹಿಸಬಹುದು’ ಎಂದು ಹೇಳಿದರು.
ಕೃತಿ ಬಿಡುಗಡೆ ಮಾಡಿ ಮಾತನಾಡಿದ ಲೇಖಕ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ‘ಕಾವ್ಯದಲ್ಲಿ ವಿಜ್ಞಾನ ಹುಡುಕಬಾರದು. ಅಲಂಕಾರಗಳನ್ನು ಬೆರೆಸುವುದರಿಂದ ಉತ್ತಮ ಕಾವ್ಯವಾಗಿ ರೂಪುಗೊಳ್ಳಲು ಸಾಧ್ಯ. ವೇದ ಕಾಲದಿಂದಲೂ ಛಂದಸ್ಸಿಗೆ ಪರಂಪರೆಯಿದೆ. ಛಂದಸ್ಸು ಹೃದಯವನ್ನು ಸೆಳೆಯುವ ಅಂಶವಾಗಿದೆ. ಈ ಕೃತಿಯಲ್ಲಿ ರಘು ಮುಳಿಯರು ಭಾವಕ್ಕಿಂತ ತತ್ವಕ್ಕೆ ಆದ್ಯತೆ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಅವರು ಭಾವಗೀತೆಗಳನ್ನು ರಚಿಸಲಿ’ ಎಂದು ಹಾರೈಸಿದರು.
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಟ್ರಸ್ಟಿ ತೆಕ್ಕುಂಜ ಕುಮಾರಸ್ವಾಮಿ ಅವರು ಕವನ ಸಂಕಲನದ ಕುರಿತಾಗಿ ಮಾತನಾಡಿದರು.