ಬೆಂಗಳೂರು : ಐತಿಹಾಸಿಕವಾದ ಬೃಹತ್ ಸಹಸ್ರ ಸಂತ ಸಂಗಮಕ್ಕೆ ಸಮರೋಪಾದಿಯಲ್ಲಿ ತಯಾರಿಗಳು ನೆಡೆಯುತ್ತಿದ್ದು, ನಾಡಿನ ನಾನಾ ಮೂಲೆಗಳಿಂದ ಸಂತರು ಈಗಾಗಲೇ ಆಗಮಿಸುತ್ತಿದ್ದಾರೆ. ನಾಳಿನ ಬೃಹತ್ ಸಂತ ಸಂಗಮಕ್ಕೆ ಕೋರಮಂಗಲದಲ್ಲಿರುವ ಒಳಾಂಗಣ ಕ್ರೀಡಾಂಗಣವನ್ನು ವಿಶಿಷ್ಟವಾಗಿ ಸಜ್ಜುಗೊಳಿಸಲಾಗಿದೆ.
ಭಾರತೀಯ ಸಂಸ್ಕೃತಿಯ ಮೂಲಾಧಾರವಾಗಿರುವ ಸಂತ ಪರಂಪರೆಯ ಮೇಲೆ, ಭಾರತೀಯ ಸಂಸ್ಕೃತಿಯ ಮೇಲೆ ನೆಡೆಯುತ್ತಿರುವ ನಿರಂತರವಾದ ದಾಳಿಯನ್ನು ಎದುರಿಸಲು ಸಂತರೆಲ್ಲಾ ಒಟ್ಟಾಗಬೇಕು, ಸಂತರು ಒಟ್ಟಾಗಿ ಸಮಾಜದಲ್ಲಿ ಜಾಗೃತಿಯನ್ನು ಉಂಟುಮಾಡಬೇಕು ಎಂಬ ಸದಾಶಯದೊಂದಿಗೆ ಈ ಐತಿಹಾಸಿಕ ಸಹಸ್ರ ಸಂತ ಸಂಗಮ ನೆಡೆಯುತ್ತಿದೆ.
ಈ ಬೃಹತ್ ಸಂತ ಸಂಗಮ ಕಾರ್ಯಕ್ರಮಕ್ಕೆ ನಾಡಿನ ವಿವಿಧ ಪರಂಪರೆಯ, ಹಲವು ಮತ - ಪಂಥಗಳ ಸಂತ ಶ್ರೇಷ್ಠರು ಆಗಮಿಸುತ್ತಿದ್ದು, ಬೆಂಗಳೂರು ನಗರದ ಹೊರಭಾಗದಲ್ಲಿಯೇ ಸಂತರನ್ನು ಗೌರವ ಪೂರ್ವಕವಾಗಿ ಸ್ವಾಗತಿಸಿ ಕರೆತರಲಾಗುತ್ತಿದೆ, ವಿವಿಧ ಮತ- ಪಂಥದ ಸಂಪ್ರದಾಯ, ನಿಯಮಗಳಿಗೆ ಸೂಕ್ತವಾಗಿ ಸಂತರ ವಸತಿ, ಪೂಜಾ ವ್ಯವಸ್ಥೆ ಹಾಗೂ ಆಹಾರದ ವ್ಯವಸ್ಥೆಗಳನ್ನು ಮಾಡಲಾಗಿದೆ. ಐತಿಹಾಸಿಕ ಕಾರ್ಯಕ್ರಮದ ತಯಾರಿಯಲ್ಲಿ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಕಾರ್ಯನಿರತರಾಗಿದ್ದಾರೆ.
ನಾಳೆ ಬೆಳಗ್ಗೆ ೧೦ ಗಂಟೆಗೆ ವಿಶೇಷ ರೀತಿಯಲ್ಲಿ ಸಹಸ್ರ ಸಂತ ಸಂಗಮಕ್ಕೆ ಚಾಲನೆ ದೊರಯಲಿದ್ದು, ಸಂತರು ದಿವ್ಯಸಂದೇಶವನ್ನು ಕೊಡಮಾಡಲಿದ್ದಾರೆ.