ಬೆಂಗಳೂರು : ಮೊಟ್ಟಮೊದಲ ಬಾರಿಗೆ ಸಂತ ಪರಂಪರೆಯ ಇತಿಹಾಸದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿರುವ 'ಸಹಸ್ರ ಸಂತ ಸಂಗಮ' ಶುಕ್ರವಾರ, ಫೆ. 5 ರಂದು ಬೆಂಗಳೂರಿನ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸಂತ ಸೇವಕ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕದ ಎಲ್ಲೆಡೆಯಿಂದ ಮತ್ತು ಹೊರರಾಜ್ಯಗಳಿಂದ ಒಂದು ಸಾವಿರಕ್ಕೂ ಅಧಿಕ ಸಂತರು ಒಂದೆಡೆ ಸೇರಲಿದ್ದಾರೆ. ಸಂತ ಸೇವಕ ಸಮಿತಿ ಆಯೋಜಿಸುತ್ತಿರುವ ಈ ಕಾರ್ಯಕ್ರಮದಲ್ಲಿ ವಿವಿಧ ಸಿದ್ದಾಂತ, ವಿವಿಧ ಪ್ರದೇಶದ ಸಂತರು ಒಂದೆಡೆಯಲ್ಲಿ ಸೇರುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಭಾರತೀಯ ಪರಂಪರೆ ಸಂತರನ್ನು ಆಧರಿಸಿ ನಿಂತಿದೆ. ಸಂತರು ಧರ್ಮದ ಆಧಾರ ಸ್ತಂಭಗಳು. ಸಹಸ್ರಾರು ವರ್ಷಗಳಿಂದ ಸಮಾಜವನ್ನು, ವ್ಯಕ್ತಿಗಳನ್ನು ಸನ್ಮಾರ್ಗದಲ್ಲಿ ನಡೆಸಿದವರು. ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಸಂತರ ಮಾರ್ಗದರ್ಶನ ಅತ್ಯಗತ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಸಂತರನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ. ಸಂತರ ಚಾರಿತ್ರ್ಯ ಹರಣ, ತೇಜೋವಧೆ ನಡೆಯುತ್ತಿದೆ. ಈ ಎಲ್ಲಾ ಕಾರಣಗಳಿಂದ ಸಂತರೆಲ್ಲಾ ಸಂಘಟಿತವಾಗಬೇಕಾಗಿದೆ. ಆದ್ದರಿಂದ ಒಂದೇ ವೇದಿಕೆಯಲ್ಲಿ ನಿಂತು ತಮ್ಮೆಲ್ಲಾ ಶಿಷ್ಯರಿಗೆ ಭಾವೈಕ್ಯದ ಸಂದೇಶ ಸಾರುವ ಉದ್ದೇಶದಿಂದ ಸಹಸ್ರ ಸಂತ ಸಂಗಮ ಏರ್ಪಡಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಶುಕ್ರವಾರ, ಫೆ. 5 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಈ ಕಾರ್ಯಕ್ರಮ ನಡೆಯಲಿದೆ.