ಬೆಂಗಳೂರು : ಸಂಗೀತಾ ಹಾಗೂ ಜ್ಯೋತಿಷ್ಯ ಇವೆರಡೂ ಭಾರತೀಯ ಪರಂಪರೆಯಲ್ಲಿನ ಮಹಾನ್ ವಿದ್ಯೆಗಳು, ಇಂದು ಈ ಎರಡು ಮಹಾನ್ ವಿದ್ಯೆಗಳ ಉಪಾಸನೆ ಇಲ್ಲಿ ನಡೆದಿದೆ, ನಾವು ಆಧುನಿಕತೆಗೆ ಶರಣಾಗದೇ ವೈಜ್ಞಾನಿಕವಾದ ನಮ್ಮ ಭಾರತೀಯ ವಿದ್ಯೆಗಳಿಗೆ ಬೆಲೆ ಕೊಡಬೇಕು ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಆಶಿಸಿದರು.
ಗಿರಿನಗರದ ಶ್ರೀರಾಮಾಶ್ರಮದಲ್ಲಿ ದುರ್ಮುಖ ನಾಮ ಸಂವತ್ಸರದ ಧಾರ್ಮಿಕ ಪಂಚಾಂಗ ಲೋಕಾರ್ಪಣೆ ಹಾಗೂ ತ್ಯಾಗರಾಜರ ಆರಾಧನೆಯ ನಿಮಿತ್ತ ನೆಡೆದ ಸಂಗೀತ ಕಾರ್ಯಕ್ರಮದಲ್ಲಿ ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಇಂದು ಸಂಗೀತಕ್ಕೆ ಪಾಪ್ ಮ್ಯೂಸಿಕ್ ನ ಗ್ರಹಣ ಹಿಡಿದರೆ ಜ್ಯೋತಿಷ್ಯಕ್ಕೆ ಕ್ಯಾಲೆಂಡರ್ ನ ಗ್ರಹಣ ಆವರಿಸಿದೆ. ಅವುಗಳ ಜೊತೆಗೆ ನಮ್ಮೊಳಗಿನ ಅಭಿಪ್ರಾಯಭೇದಗಳೂ ಇದಕ್ಕೆ ಕಾರಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಯಾವುದು ನಮ್ಮದೋ ಅದೇ ನಮ್ಮದು ಮತ್ತು ಅದು ಸರ್ವಶ್ರೇಷ್ಠವಾದದ್ದು. ಅದು ಮೂಲಭೂತವಾದ ಜ್ಞಾನದಿಂದ ಬಂದಿರುವಂಥದ್ದು. ಆಧುನಿಕತೆಗೆ ನಾವು ಶರಣಾಗದೇ ಸನಾತವಾದ ಭಾರತೀಯ ವಿದ್ಯೆಗಳಿಗೆ ಕಾಲಕಾಲಕ್ಕೆ ಬೇಕಾದ ಸಂಸ್ಕಾರವನ್ನು ಕೊಟ್ಟು, ಪರಿಶ್ರಮವನ್ನು ಹಾಕಿ ನಮ್ಮ ವಿದ್ಯೆಗಳನ್ನು ಉಳಿಸಿ ಬೆಳೆಸಬೇಕು ಎಂದು ಆಶಿಸಿದರು.
'ಸಿದ್ಧಾಂತ ಮತ್ತು ಪಂಚಾಂಗದ ಮಹತ್ವ' ಎನ್ನುವ ವಿಷಯದ ಕುರಿತಾಗಿ ಉಪನ್ಯಾಸ ನೀಡಿದ ಡಾ||ಕೆ.ಎಲ್.ಶಂಕರನಾರಾಯಣ ಜೋಯ್ಸ್ ಅವರು, ಜ್ಯೋತಿಷ್ಯವನ್ನು ಅರಿತು ವಿಮರ್ಶಿಸಿ, ಅಧ್ಯಯನ ಮಾಡದೇ ವಿಮರ್ಶಿಸಿ ಜನರ ದಿಕ್ಕುತಪ್ಪಿಸುವ ಕೆಲಸ ಆಗಬಾರದು. ಪ್ರಯೋಗಕ್ಕೆ ಒಳಪಡಿಸಿ ಸತ್ಯಾಸತ್ಯತೆಯ ನಿರ್ಣಯವನ್ನು ಮಾಡಿ ಎಂದು ಕರೆನೀಡಿದರು. ಸೂರ್ಯ ಸಿದ್ಧಾಂತವು ನಾಡಿವಿಜ್ಜಾನಕ್ಕೆ ಹತ್ತಿರವಾಗಿದ್ದು, ನಮ್ಮ ಮುಖವನ್ನು ಹೇಗೆ ನಾವು ಕನ್ನಡಿಯ ಮೂಲಕ ನೋಡುತ್ತೇವೋ ಹಾಗೆಯೇ ನಮ್ಮ ದೇಹದೊಳಗೆ ಏನೇನು ನಡೆಯುತ್ತದೆ ಎಂಬುದನ್ನು ಖಗೋಳ ಪ್ರಕ್ರಿಯೆ ನೋಡಿ ತಿಳಿದುಕೊಳ್ಳಬಹುದು. ಖಗೋಳ ಗಣಿತದ ಮೂಲಕ ಖಗೋಳದಲ್ಲಿನ ಗ್ರಹಗಳ ಗತಿಯನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ವಿಜ್ಞಾನ, ಪ್ರಯೋಗ ಎಂಬ ಪದಗಳು ಇತ್ತೀಚಿನ ಪದಗಳಲ್ಲ. ಅವು ಸಹಸ್ರಾರು ವರ್ಷಗಳ ಹಿಂದೆಯೇ ಭಾರತದ ಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ನಾವು ಪ್ರಯೋಗಾಲಯದಲ್ಲಿ ಯಾವುದೇ ಒಬ್ಬ ವಿದೇಶೀಯ ವಿಜ್ಞಾನಿ ಹೇಳಿದ್ದನ್ನು ಸುಲಭವಾಗಿ ಒಪ್ಪಿಕೊಂಡುಬಿಡುತ್ತೇವೆ, ಅದೇ ಭಾರತೀಯ ವಿಜ್ಞಾನಿ ಹೇಳಿದ್ದು ಎಂದಾದರೆ ಅದನ್ನು ಉಪೇಕ್ಷಿಸುತ್ತೇವೆ. ನಾವು ನಮ್ಮ ತನವನ್ನು ಗೌರವಿಸಬೇಕು ಎಂದರು.
ಹಾಗೆಯೇ, ಪಂಚಾಂಗ ಕರ್ತೃಗಳೆಲ್ಲ ಒಂದಾಗಿ ಚರ್ಚಿಸಿ ಏಕಾಭಿಪ್ರಾಯವನ್ನು ಪಡೆದುಕೊಂಡು, ಏಕರೂಪ ಪಂಚಾಂಗವನ್ನು ಹೊರತರುವತ್ತ ಗಮನಹರಿಸಬೇಕು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಧಾರ್ಮಿಕ ಪಂಚಾಂಗ ಲೋಕಾರ್ಪಣೆ ಕಾರ್ಯಕ್ರಮದ ಸಭಾಪೂಜೆಯನ್ನು ಕೇಶವ ಭಟ್ಟ ಮಿತ್ತೂರು ಇವರು ನೆರವೇರಿಸಿದರು. ಧಾರ್ಮಿಕ ಪಂಚಾಗ ಸಮಿತಿಯು ಹೊರತಂದಿರುವ ದುರ್ಮುಖನಾಮ ಸಂವತ್ಸರದ(2016-17) ಧಾರ್ಮಿಕ ಪಂಚಾಂಗವನ್ನು ಶ್ರೀರಾಘವೇಶ್ವರಭಾರತೀ ಸ್ವಾಮೀಜಿಯವರು ಲೋಕಾರ್ಪಗೊಣೆಗೊಳಿಸಿದರು.
ಇದರೊಂದಿಗೆ ಶ್ರೀಗಳ ಅಧಿಕೃತ ಜಾಲತಾಣ ಪುಟದಲ್ಲಿ ಚಿತ್ರಕ್ಕೆ ಆಕರ್ಷಕ ಶೀರ್ಷಿಕೆ ಕೊಡುವ ಸ್ಪರ್ಧೆಯಲ್ಲಿ ಉತ್ತಮವಾದ ಶೀರ್ಷಿಕೆಯನ್ನು ನೀಡಿದ ಸತ್ಯಶಂಕರ ಮರಕಿಣಿ ಇವರನ್ನು ಶ್ರೀಗಳು ಸಭೆಯಲ್ಲಿ ಅನುಗ್ರಹಿಸಿ ಆಶೀರ್ವದಿಸಿದರು.
ಇದಕ್ಕೂ ಮೊದಲೂ, ಬೆಳಗ್ಗೆ ಶ್ರೀಕರಾರ್ಚಿತ ಪೂಜೆಯ ನಂತರ ತ್ಯಾಗರಾಜರ ಆರಾಧನೆಯ ಪ್ರಯುಕ್ತ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಹಲವಾರು ಖ್ಯಾತ ಸಂಗೀತ ವಿದ್ವಾಂಸರು, ವಿವಿಧ ಸಂಗೀತ ಶಾಲೆಗಳಿಂದ ಆಗಮಿಸಿದ್ದ ಗುರು-ಶಿಷ್ಯರು, ಸಂಗೀತ ಕಲಾವಿದರು ತ್ಯಾಗರಾಜರ ಪಂಚರತ್ನ ಮಾಲಿಕೆ ಹಾಗೂ ತ್ಯಾಗರಾಜರ ಕೀರ್ತನೆಗಳನ್ನು ಸುಮಧುರವಾಗಿ ಹಾಡುವ ಮೂಲಕ ತ್ಯಾಗರಾಜರನ್ನು ನೆನಸಿಕೊಂಡರು. ಧಾರ್ಮಿಕ ಪಂಚಾಗ ಸಮಿತಿಯ ವಿದ್ವಾಂಸರು, ಶ್ರೀಮಠದ ವಿವಿಧ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿರತರಿದ್ದರು.