ನವದೆಹಲಿ : ಸೇನಾಧಿಕಾರಿಗಳನ್ನುದ್ದೇಶಿಸಿ ಸೋಮವಾರ ಮಾತನಾಡಿದ ಮಾತನಾಡಿದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಭಾರತಕ್ಕೆ ನೋವುಂಟುಮಾಡಿದವರು ಖಂಡಿತಾ ನೋವು ಅನುಭವಿಸುತ್ತಾರೆ ಎಂದು ಪಠಾಣ್ ಕೋಟ್ ದಾಳಿಯ ಕುರಿತು ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ನೀಡಿದರು.
68ನೇ ಆರ್ಮಿ ದಿನದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಪರಿಕ್ಕರ್, ದಾಳಿಕೋರರಿಗೆ ಪ್ರತಿ ಉತ್ತರ ಕೊಡುವುದರ ಬಗ್ಗೆ ಪ್ರಸ್ತಾಪಿಸಿ, 'ಸಮಯ ಮತ್ತು ಸ್ಥಳ ನಮ್ಮ ಆಯ್ಕೆ' ಎಂದು ಹೇಳಿದರು.
'ಯಾರಾದರೂ ಈ ದೇಶಕ್ಕೆ ಹಾನಿ ಮಾಡಿದರೆ, ಆ ವ್ಯಕ್ತಿ ಅಥವಾ ಆ ಸಂಸ್ಥೆ ಅದೇ ರೀತಿಯ ನೋವನ್ನು ಅನುಭವಿಸಬೇಕು. ಅವರು ನೋವು ಅನುಭವಿಸುವವರೆಗೂ ಅವರು ನಮಗೆ ನೋವು ಕೊಡುವುದರಲ್ಲಿ ಸಂತೋಷಪಡುತ್ತಾರೆ' ಎಂದು ಹೇಳಿದರು.
ಈ ಕುರಿತು ಸ್ಪಷ್ಟನೆ ಕೇಳಿದ ಪತ್ರಕರ್ತರಿಗೆ, ಬೇರೆಯವರಿಗೆ ನೋವುಂಟು ಮಾಡಿದವರು ಆ ನೋವಿನ ದುಃಖವನ್ನು ಖುದ್ದಾಗಿ ಅರಿಯುವ ತನಕ ಅವರು ಬದಲಾಗುವುದಿಲ್ಲ ಎಂಬ ಸತ್ಯವನ್ನು ಇತಿಹಾಸವು ನಮಗೆ ತಿಳಿಸುತ್ತದೆ ಎಂದು ಉತ್ತರಿಸಿದರು.
ಜನವರಿ 2ರ ನಸುಕಿನ 3 ಗಂಟೆಯ ವೇಳೆಗೆ ಪಂಜಾಬಿನ ಪಠಾಣ್ಕೋಟ್ ವಾಯು ನೆಲೆಯ ಮೇಲೆ ಆರು ಮಂದಿ ಪಾಕ್ ಉಗ್ರರು ನಡೆಸಿದ್ದ ಭಯೋತ್ಪಾದಕ ದಾಳಿಯನ್ನು ನಿಗ್ರಹಿಸುವಲ್ಲಿ ಏಳು ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು ಮತ್ತು ಇತರ ಸುಮಾರು 20 ಯೋಧರು ಗಾಯಗೊಂಡಿದ್ದರು.
ಈ ಉಗ್ರ ದಾಳಿಯನ್ನು ಪಾಕ್ ಮೂಲದ ಜೈಶ್ ಎ ಮೊಹಮ್ಮದ್ ಸಂಘಟನೆಯೇ ನಡೆಸಿದೆ ಎಂದು ಸಾಕ್ಷ್ಯಾಧಾರ ಸಹಿತವಾಗಿ ಭಾರತ ಪಾಕಿಸ್ತಾನಕ್ಕೆ ತಿಳಿಸಿ ಈ ಸಂಘಟನೆಯ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದೆ.