ಬೆಂಗಳೂರು : ರಾಜ್ಯದಲ್ಲಿ ದ್ವಿಚಕ್ರ ವಾಹನದಲ್ಲಿ ಓಡಾಡಬೇಕಾದರೆ ಹೆಲ್ಮೆಟ್ ಧರಿಸುವುದು ಕಡ್ಡಾಯ. ದ್ವಿಚಕ್ರ ವಾಹನ ಹಿಂಬದಿ ಸವಾರರಿಗೂ ಸೇರಿ ಹೆಲ್ಮೆಟ್ ಕಡ್ಡಾಯ ನೀತಿ ರಾಜ್ಯಾದ್ಯಂತ ಜಾರಿಗೆ ಬಂದಿದೆ. ಆದರೆ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶವೂ ವ್ಯಕ್ತವಾಗಿದೆ.
ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಮಾಡಲಾಗಿದ್ದರೂ ಇದನ್ನು ಮೂರು ತಿಂಗಳ ಕಟ್ಟುನಿಟ್ಟಾಗಿ ಜಾರಿಗೆ ತರದಿರಲು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ. ಸಾರ್ವಜನಿಕರಿಗೆ ಅನಾನುಕೂಲ ಆಗುವುದನ್ನು ತಪ್ಪಿಸಲು ಮಾರ್ಚ್ ಅಂತ್ಯದವರೆಗೆ ಕಾಲಾವಕಾಶ ನೀಡುವ ಬಗ್ಗೆ ಚಿಂತನೆ ನಡೆದಿದೆ.
ರಾಜ್ಯಾದ್ಯಂತ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿ 2015ರ ಡಿ.31ರಂದು ಆದೇಶ ಹೊರಡಿಸಿದ್ದ ಸರ್ಕಾರ, ಗೆಜೆಟ್ ಅಧಿಸೂಚನೆ ಪ್ರಕಟವಾದ ಕ್ಷಣದಿಂದ ಅದು ಜಾರಿಗೆ ಬರುತ್ತದೆ ಎಂದು ಹೇಳಿತ್ತು. ಸೋಮವಾರ ಸಂಜೆಯ ವೇಳೆಗೆ ಗೆಜೆಟ್ ಅಧಿಸೂಚನೆಯೂ ಹೊರಬಿದ್ದಿದ್ದು, ಹೆಲ್ಮೆಟ್ ಕಡ್ಡಾಯ ಇದೀಗ ಅಧಿಕೃತವಾಗಿದೆ.
ಸರ್ಕಾರ ಇದೀಗ ಹೊರಡಿಸಿರುವ ಗೆಜೆಟ್ ಅಧಿಸೂಚನೆ ಪ್ರಕಾರ, ದ್ವಿಚಕ್ರ ವಾಹನ ಓಡಿಸುವವರು ಹಾಗೂ ಹಿಂಬದಿ ಸವಾರರು ಸೇರಿದಂತೆ ಮೋಟರ್ ಸೈಕಲ್, ಸ್ಕೂಟರ್, ಮೊಪೆಡ್ ಸೇರಿದಂತೆ ಅಶ್ವಶಕ್ತಿ ಹೊಂದಿರುವ ದ್ವಿಚಕ್ರ ವಾಹನದಲ್ಲಿ ರಾಜ್ಯದಲ್ಲಿ ಸಂಚರಿಸುವ ವಾಹನ ಚಾಲಕ ಹಾಗೂ ಹಿಂಬದಿ ಸವಾರರೂ ಹೆಲ್ಮೆಟ್ ಧರಿಸುವುದು ಕಡ್ಡಾಯ.
ದ್ವಿಚಕ್ರ ವಾಹಗಳು ಹೆಚ್ಚಾಗಿ ಅಪಘಾತಕ್ಕೊಳಗಾಗಿ ಸವಾರರು ಮೃತಪಡುತ್ತಿರುವ ಹಿನ್ನೆಲೆಯಲ್ಲಿ ನ್ಯಾ. ಕೆ.ಎಸ್.ರಾಧಾಕೃಷ್ಣನ್ ಅವರ ನೇತೃತ್ವದಲ್ಲಿ ಸುಪ್ರೀಂಕೋರ್ಟ್ ರಸ್ತೆ ಸುರಕ್ಷತಾ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿಯು ಅಪಘಾತದಲ್ಲಿ ಪ್ರಾಣಹಾನಿ ತಪ್ಪಿಸಲು ದ್ವಿಚಕ್ರ ವಾಹನ ಸವಾರರಿಗೆ (ಹಿಂಬದಿ ಸವಾರರೂ ಸೇರಿ) ಹೆಲ್ಮೆಟ್ ಕಡ್ಡಾಯಗೊಳಿಸಬೇಕು ಎಂದು ಹೇಳಿತ್ತು. ಅದರಂತೆ, ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸುವ ಜವಾಬ್ದಾರಿಯನ್ನು ಸುಪ್ರೀಂಕೋರ್ಟ್ ಈ ಸಮಿತಿಗೆ ವಹಿಸಿತ್ತು.
ಅದರಂತೆ ಈ ಸಮಿತಿಯು ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿ, 2016ರ ಜ.1ರೊಳಗೆ ದ್ವಿಚಕ್ರ ವಾಹನ ಓಡಿಸುವವರು ಮತ್ತು ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸುವಂತೆ ತಿಳಿಸಿತ್ತು. ಅದರಂತೆ ಸರ್ಕಾರ ಈ ಆದೇಶ ಹೊರಡಿಸಿದೆ.