ಪಂಜಾಬ್ : ಸೋಮವಾರ ಸಹ ಪಠಾಣ್ ಕೋಟ್ ನ ವಾಯುನೆಲೆಯಲ್ಲಿ ಭಾರೀ ಗುಂಡಿನ ಸದ್ದು ಕೇಳಿದ್ದು, ಕಾರ್ಯಾಚರಣೆ 3 ನೇ ದಿನಕ್ಕೆ ಕಾಲಿಟ್ಟಿದೆ. ಇಲ್ಲಿಯವರೆಗೆ 5 ಉಗ್ರರನ್ನು ಹೊಡೆದುರುಳಿಸಲಾಗಿದ್ದು, ಎನ್ಎಸ್ಜಿ ಕಮಾಂಡೋ ಲೆ| ಕ| ನಿರಂಜನ ಕುಮಾರ್ ಸೇರಿದಂತೆ 7 ಯೋಧರು ವೀರಮರಣವನ್ನಪ್ಪಿದ್ದಾರೆ.
ಹಗಲು ರಾತಿ ಗುಂಡಿನ ಚಕಮಕಿ ಮುಂದುವರಿದಿದ್ದು, ಉಗ್ರರು 2 ತಂಡಗಳಲ್ಲಿ ವಾಯುನೆಲೆಯನ್ನು ಪ್ರವೇಶಿಸಿರಬಹುದೆಂದು ತನಿಖೆಯಿಂದ ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿವೆ. ಪಂಜಾಬ್ ಪೊಲೀಸ್ ಅಧಿಕಾರಿಯ ಕಾರನ್ನು ಅಪಹರಿಸಿ ವಾಯುನೆಲೆಗೆ ಪ್ರವೇಶಿಸಿದ ತಂಡ ಒಂದಾದರೆ, 5 ಜನಕ್ಕೂ ಹೆಚ್ಚು ಉಗ್ರರಿರುವುದರಿಂದ, ಇನ್ನೊಂದು ತಂಡ ಇದೆ ಎನ್ನುವುದನ್ನು ತಿಳಿಸುತ್ತದೆ ಎಮ್ದು ಮೂಲಗಳು ತಿಳಿಸಿವೆ.
ಪಾಲಕ್ಕಾಡ್ ಜಿಲ್ಲೆಯ ಮುನ್ನರಾರ್ ಕಾಡ್ ಮೂಲದವರಾದ, ಬೆಂಗಳೂರಿನಲ್ಲಿ ಹುಟ್ಟಿ, ಬೆಳೆದಿದ್ದ ಎನ್ಎಸ್ಜಿ ಕಮಾಂಡೋ ಲೆ| ಕ| ನಿರಂಜನ ಕುಮಾರ್ ಅವರು ಈ ದಾಳಿಯಲ್ಲಿ ಹುತಾತ್ಮರಾಗಿದ್ದು, ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗಿದೆ. ಶಾಲಾ ಮಕ್ಕಳು ಮತ್ತು ಸ್ಥಳೀಯರು ನಿರಂಜನ್ ಅವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿದ್ದಾರೆ. ಬೆಮಲ್ ಮೈದಾನದಲ್ಲಿಡಲಾದ ನಿರಂಜನ್ ಅವರ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಗೌರವ ಸಲ್ಲಿಸಿದ್ದಾರೆ. ಕೇರಳದ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಅವರ ಕುಟುಂಬದ ಮೂಲಗಳು ಹೇಳಿವೆ.
English Summary : 7 soldiers and 5 terrorist were killed so far in terror attack on airbase at Pathankot. Fresh gunshots were heard Monday morning also.