ಇಂಫಾಲ್ : ಸೋಮವಾರ ಬೆಳಗಿನ ಜಾವ ಈಶಾನ್ಯ ಭಾರತ, ಮಯನ್ಮಾರ್, ಬಾಂಗ್ಲಾದೇಶ ಮತ್ತು ಭೂತಾನ್ ನಲ್ಲಿ ಉಂಟಾದ ಪ್ರಬಲ ಭೂಕಂಪನಕ್ಕೆ 5 ಜನ ಸಾವನ್ನಪ್ಪಿದ್ದು 40 ಜನರಿಗೆ ಗಾಯಗಳಾಗಿವೆ. ರಿಕ್ಟರ್ ಮಾಪನದಲ್ಲಿ 6.7 ತೀವ್ರ ದಾಖಲಾಗಿದ್ದು, ಈ ಭೂಕಂಪದ ಕೇಂದ್ರ ಇಂಫಾಲ್ ನ ಪಶ್ಚಿಮಕ್ಕೆ 19 ಕಿ.ಮೀ ದೂರದಲ್ಲಿ ಎಂದು ಯುಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
ಇಂಫಾಲ್ ನಲ್ಲಿ ಕೆಲವು ಕಟ್ಟಡದ ಗೋಡೆ, ಮೆಟ್ಟಿಲುಗಳು ಮತ್ತು ಮೇಲ್ಛಾವಣಿ ಹಾನಿಗೊಳಗಾಗಿದೆ ಎಂದು ಪೊಲೀಸ್ ಮತ್ತು ವಿಪತ್ತಿನ ಪ್ರತಿಕ್ರಿಯೆ ತಂಡಗಳು ತಿಳಿಸಿವೆ.
ಪಶ್ಚಿಮ ಬಂಗಾಳ ಮತ್ತು ಒಡಿಸ್ಸಾದ ಕೆಲವು ಭಾಗಗಳಲ್ಲಿ ಸಹ ಕಂಪನದ ಅನುಭವವಾಗಿದೆ.
ಈ ಕುರಿತು ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಸಧ್ಯ ಅಸ್ಸಾಂನಲ್ಲಿರುವ ಗೃಹ ಸಚಿವ ರಾಜನಾಥ ಸಿಂಗ್ ಜೊತೆ ಮಾತನಾಡಿ, ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುವಂತೆ ಹೇಳಿದ್ದೇನೆ ಎಂದು ಹೇಳಿದ್ದಾರೆ.
ಹಾಗೆ, ಅಸ್ಸಾಂ ಮುಖ್ಯಮಂತ್ರಿ, ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಮತ್ತು ಮಣಿಪುರದ ಮುಖ್ಯಮಂತ್ರಿಗಳೊಡನೆ ಮಾತನಾಡಿದ್ದೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.