ಪಂಜಾಬ್ : ಶನಿವಾರ ಬೆಳಗಿನ ಜಾವ ಯೋಧರ ಸಮವಸ್ತ್ರವನ್ನು ಧರಿಸಿದ ಭಯೋತ್ಪಾದಕರ ಗುಂಪೊಂದು ಪಂಜಾಬ್ ನ ಪಠಾನ್ ಕೋಟ್ ಜಿಲ್ಲೆಯ ವಾಯುನೆಲೆಗೆ ನುಗ್ಗಿ ಭಾರತೀಯ ಯೋಧರ ಮೇಲೆ ದಾಳಿ ನಡೆಸಿದೆ. ಆರೇಳು ಗಂಟೆಗಳ ಕಾಲ ನಡೆದ ನಿರಂತರ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಕಾರ್ಯಾಚರಣೆಯಲ್ಲಿ ಇಬ್ಬರು ಯೋಧರು ಸಾವನ್ನಪ್ಪಿದ್ದು, ನಾಲ್ಕಾರು ಯೋಧರಿಗೆ ಗಂಭೀರ ಗಾಯಗಳಾಗಿವೆ.
ವಾಯುನೆಲೆಯ ವಾಹನವನ್ನೇ ಬಳಸಿಕೊಂಡು ಒಳ ಪ್ರವೇಶಿಸಿರುವ ಉಗ್ರರು ಬೆಳಗಿನಜಾವ 3.30ರ ಸುಮಾರಿಗೆ ಗುಂಡಿನ ದಾಳಿ ನಡೆಸಿದ್ದಾರೆ. ತಕ್ಷಣ ಯೋಧರು ಪ್ರತಿದಾಳಿ ನಡೆಸಿ ಬೆಳಗ್ಗೆ 7 ಗಂಟೆ ಸುಮಾರಿಗೆ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದರು. ಬಳಿಕ ಕಾರ್ಯಾಚರಣೆ ಇನ್ನಷ್ಟು ಚುರುಕುಗೊಳಿಸಿ ಅಡಗಿರುವ ಇನ್ನಿಬ್ಬರು ಉಗ್ರರನ್ನು ಗುಂಡಿಟ್ಟು ಕೊಲ್ಲಲಾಗಿದೆ.
ಮೂಲಗಳ ಪ್ರಕಾರ ಶುಕ್ರವಾರ ಬೆಳಗ್ಗೆಯೇ ವಾಯುನೆಲೆ ಠಾಣಾ ವ್ಯಾಪ್ತಿಯ ಎಸ್ಪಿ ಅವರ ವಾಹನವನ್ನು ಈ ಪ್ರದೇಶದಿಂದಲೇ ಅಪಹರಿಸಲಾಗಿತ್ತು. ಇದೇ ವಾಹನ ಉಪಯೋಗಿಸಿಕೊಂಡು ವಾಯುನೆಲೆ ಪ್ರವೇಶಿಸಿದ್ದಾರೆ ಎಂದು ಹೇಳಲಾಗಿದೆ.
ಉಗ್ರರು ವಾಯುನೆಲೆಯೊಳಗಿನ ತಾಂತ್ರಿಕ ವಿಭಾಗದಲ್ಲಿ ಸ್ಪೋಟಕ್ಕೆ ಸಂಚು ರೂಪಿಸಿದ್ದರು. ಆದರೆ ಇಲ್ಲಿ ತಲುಪುವಷ್ಟರಲ್ಲೇ ಯೋಧರ ನಡುವೆ ಗುಂಡಿನ ಚಕಮಕಿ ನಡೆಸಬೇಕಾಗಿ ಬಂದಿದ್ದರಿಂದ ಈ ಪ್ರದೇಶ ತಲುಪಲು ಸಾಧ್ಯವಾಗಿಲ್ಲ.
ತಾಂತ್ರಿಕ ವಿಭಾಗದಲ್ಲಿ ನಿಲ್ಲಿಸಲಾಗಿದ್ದ ಯುದ್ಧ ವಿಮಾನ ಮಿಗ್ 29 ಮತ್ತು ಹೆಲಿಕಾಪ್ಟರ್ಗೆ ಯಾವುದೇ ಹಾನಿಯಾಗಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಗುಪ್ತಚರ ಇಲಾಖೆ ಶುಕ್ರವಾರ ಸಾಯಂಕಾಲವೇ ಉಗ್ರರ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಎಚ್ಚರಿಸಿತ್ತು.
ಪಾಕಿಸ್ತಾನದಿಂದ ಗಡಿಯಲ್ಲಿ ಎರಡು ದಿನದ ಹಿಂದೆಯೇ ನುಸುಳಿ ಬಂದಿದ್ದರೆನ್ನಲಾಗಿದೆ.