ಕಲಬುರ್ಗಿ : ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಗಳ ಮೇಲಿನ ಮಿಥ್ಯಾರೋಪ ಖಂಡಿಸಿ, ನಕಲಿ ಅಶ್ಲೀಲ ಸಿಡಿ ಪ್ರಕರಣವನ್ನು ಸರ್ಕಾರ ಹಿಂಪಡೆಯಲು ನಿರ್ದೇಶಿಸಿರುವುದನ್ನು ವಿರೋಧಿಸಿ ಕುಲಬುರ್ಗಿಯಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು.
ಶ್ರೀರಾಮಕಥಾ ಸಮಿತಿ ಆಯೋಜಿಸಿದ್ದ ಈ ಪ್ರತಿಭಟನೆಯು ಸೂಪರ್ ಮಾರ್ಕೆಟ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೃಹತ್ ಜಾಥಾ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ನಂತರ ಬೃಹತ್ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
ಪ್ರತಿಭಟನಾ ಸಭೆಯಲ್ಲಿ ಸಾನ್ನಿಧ್ಯ ವಹಿಸಿದ್ದ ಶ್ರೀರಾಮಸೇನೆಯ ಗೌರವಾಧ್ಯಕ್ಷರಾದ ಶ್ರೀಸಿದ್ದಲಿಂಗ ಸ್ವಾಮೀಜಿಗಳು, ಸರ್ವಸಮಾಜದ ಹಿತಕ್ಕಾಗಿ ಶ್ರಮಿಸುತ್ತಿರುವ ಶ್ರೀರಾಘವೇಶ್ವರಭಾರತೀ ಸ್ವಾಮಿಗಳ ಮೇಲೆ ಕೆಲವು ವರ್ಷಗಳಿಂದ ಆಕ್ರಮಣಗಳು ನಡೆಯುತ್ತಿದೆ. ಶ್ರೀಗಳ ಮೇಲೆ ನಡೆಯುತ್ತಿರುವ ಷಡ್ಯಂತ್ರದಲ್ಲಿ ದೊಡ್ಡ ದೊಡ್ದ ವ್ಯಕ್ತಿಗಳು ಭಾಗಿಯಾಗಿರುವ ಶಂಕೆಯಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಬೇಕು; ಶ್ರೀಗಳ ಮೇಲೆ ನಡೆಯುತ್ತಿರುವ ಷಡ್ಯಂತ್ರಕ್ಕೆ ಪುರಾವೆಯಂತಿರುವ ನಕಲಿ ಅಶ್ಲೀಲ ಸಿಡಿ ಪ್ರಕರಣವನ್ನು ಯಾವುದೇ ಕಾರಣಕ್ಕೂ ಹಿಂಪಡೆಯಬಾರದು ಎಂದು ಆಗ್ರಹಿಸಿದರು.
ಗಂಹ್ಹಾರದ ತ್ರಿವಿಕ್ರಮಾನಂದ ಮಠದ ಶ್ರೀ ಸೋಪಾನನಾಥರು ಮಾತನಾಡಿ, ಶ್ರೀಗಳನ್ನು ನಾವು ಹಲವಾರು ವರ್ಷಗಳಿಂದ ತುಂಬಾ ಹತ್ತಿರದಿಂದ ಬಲ್ಲೆವು. ಸಮಾಜಮುಖೀ ಕಾರ್ಯಗಳ ಮೂಲಕ ವಿಶ್ವ ಪ್ರಸಿದ್ದರಾಗಿರುವ ರಾಘವೇಶ್ವರ ಶ್ರೀಗಳ ಘನತೆಗೆ ಕುಂದು ತರಲು ಇಂತಹ ಮಿಥ್ಯಾರೋಪದ ಆಕ್ರಮಣಗಳನ್ನು ಮಾಡಲಾಗುತ್ತಿದೆ ಎಂದರು.
ರಾಮಕಥಾ ಸಮಿತಿಯ ಅಧ್ಯಕ್ಷರು ಹಾಗೂ ರಾಜ್ಯ ಲೇವಾದೇವಿ ಒಕ್ಕೂಟಗಳ ಉಪಾಧ್ಯಕ್ಷರಾದ ಸುಭಾಶ್ ಕಮಲಾಪುರ ಅವರು ಮಾತನಾಡಿ, ರಾಮಕಥಾ ಇತ್ಯಾದಿಗಳ ಮೂಲಕ ಜನರಲ್ಲಿ ಧರ್ಮಜಾಗೃತಿ ಮೂಡಿಸುತ್ತಿರುವ, ಸಾಮಾಜಿಕ ಕಳಕಳಿ ಇರುವ ರಾಘವೇಶ್ವರ ಶ್ರೀಗಳ ಕುರಿತಾದ ಇಂತಹ ಸುಳ್ಳು ಆರೋಪಗಳನ್ನು ನಾವು ಖಂಡಿಸುತ್ತೇವೆ; ಶ್ರೀಗಳ ಚಾರಿತ್ರ್ಯವಧೆಗಾಗಿ ಸೃಷ್ಟಿಸಿದ್ದ ನಕಲಿ ಅಶ್ಲೀಲ ಸಿಡಿ ಪ್ರಕರಣವನ್ನು ಹಿಂಪಡೆಯುವ ನಿರ್ಧಾರ ಸಾಧುವಲ್ಲ; ರಾಘವೇಶ್ವರ ಶ್ರೀಗಳ ಮೇಲಾಗುತ್ತಿರುವ ಆಕ್ರಮಣಗಳ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ರಾಜ್ಯಪಾಲರನ್ನು ಒತ್ತಾಯಿಸಿದರು. ಹಾಗೂ, ಸಂತರ ಮೇಲಾಗುತ್ತಿರುವ ಆಕ್ರಮಣಗಳನ್ನು ತಡೆಯಲು ಸಮಸ್ತ ಹಿಂದೂ ಸಮಾಜ ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು.
ಶ್ರೀಗಳ ಮೇಲಾಗುತ್ತಿರುವ ಆಕ್ರಮಣಗಳು ಕುರಿತು ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಸೂಕ್ತ ನ್ಯಾಯ ಒದಗಿಸದಿದ್ದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕುಲಬುರ್ಗಿಯ ಶಾಸಕರಾದ ದತ್ತಾತ್ರೆಯ ಪಾಟೀಲ್ ಅವರು ಎಚ್ಚರಿಸಿದರು.
ಪ್ರತಿಭಟನಾ ಸಭೆಯಲ್ಲಿ ಶ್ರೀ ಪಾಂಡುರಂಗ ಜೋಷಿ ಮಹರಾಜ್ ಸೇರಿದಂತೆ ವಿವಿಧ ಸಮಾಜದ ಸಂತ - ಶರಣರು ಭಾಗವಹಿಸಿದ್ದರು. ಹೈದ್ರಾಬಾದ್ ಕರ್ನಾಟಕ ವಾಣಿಜ್ಯ ಸಂಘದ ರಾಧಾಕೃಷ್ಣ ರಘೂಜಿ, ರಾಮಕಥಾ ಸಮಿತಿಯ ಸಂಯೋಜಕ ಹಾಗೂ ಗುಲ್ಬರ್ಗಾ ವಿ.ವಿ ಸಿಂಡಿಕೇಟ್ ಸದಸ್ಯರಾದ ರಾಘವೇಂದ್ರ ಕುಲಕರಣಿ, ಪಾಂಡುರಂಗ ದೇಶಮುಖ್ ಮತ್ತಿತರರು ಉಪಸ್ಥಿತರಿದ್ದರು. ಬ್ರಾಹ್ಮಣ ಸಂಘ ಸೇರಿದಂತೆ ಹಲವಾರು ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದವು.
ಬಿಸಿಲಿನ ಝಳದ ನಡುವೆಯೂ ಸುಮಾರು 2 ಸಾವಿರ ಜನರು ಭಾಗವಹಿಸಿದ್ದು ಕಲಬುರ್ಗಿಯ ಜನತೆಗೆ ಶ್ರೀಗಳ ಮೇಲಿರುವ ಅಭಿಮಾನವನ್ನು ಎತ್ತಿ ತೋರಿಸಿತು.