ಬೆಂಗಳೂರು : ಪ್ರಕೃತಿ ನಾಶದಿಂದ ಸಮಸ್ತ ಪ್ರಪಂಚಕ್ಕೆ ತೊಂದರೆಯಾಗುತ್ತದೆ. ಗಿಡ ಮರ ಪರಮಾತ್ಮನ ಮಂದಹಾಸವಿದ್ದಂತೆ. ಪ್ರಪಂಚವೇ ಪ್ರಕೃತಿಯ ವಿಷಯದಲ್ಲಿ ತಪ್ಪು ಹೆಜ್ಜೆ ಇಡುತ್ತಿದೆ. ಇದೀಗ ಆತ್ಮಾವಲೋಕನ ಮಾಡಿಕೊಂಡು,ಎಚ್ಚೆತ್ತುಕೊಳ್ಳದಿದ್ದಲ್ಲಿ ಭವಿಷ್ಯದಲ್ಲಿ ಭಾರೀ ಬೆಲೆ ತೆರಬೇಕಾದೀತು ಎಂದು ಶ್ರೀ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದ್ದಾರೆ. ಗಿರಿನಗರದ ರಾಮಾಶ್ರಮದಲ್ಲಿ ಶನಿವಾರ ನಡೆದ ಶ್ರೀಮಠದ ಭಾರತೀ ಪ್ರಕಾಶನದ 'ಪ್ರಕಾಶನೋತ್ಸವ' ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡುತ್ತಿದ್ದರು.
ಮರಗಳನ್ನು ದೇವಾಲಯ ಕಟ್ಟುವ ಹಿನ್ನೆಲೆಯಲ್ಲಿ ಕಡಿದರೆ ಅದು ಅಮರವಾಗುತ್ತದೆ. ಆದರೆ ಆಸೆಗಾಗಿ,ದುರಾಸೆಗಾಗಿ ಗಿಡ-ಮರ ನಾಶಮಾಡಿದರೆ ಅದು ಪಶ್ಚಾತ್ತಾಪಕ್ಕೆ ಕಾರಣವಾಗುತ್ತದೆ. ಇಂದು ಬೆಳಕು ಬೀರುವ, ಕೊಳಕು ಹರಡುವ ಎರಡೂ ರೀತಿಯ ಪ್ರಕಟಣೆಗಳನ್ನು ಕಾಣುತ್ತೇವೆ. ಆದರೆ ಭಾರತೀ ಪ್ರಕಾಶನದಿಂದ ಅತಿ ಉತ್ತಮ ಕೃತಿಗಳು ಬೆಳಕು ಕಾಣುತ್ತಿವೆ. ರಾಮರಾಜ್ಯ ಸ್ಥಾಪನೆಯಾಗಲು ರಾವಣನ ಹಾಗೂ ರಾಕ್ಷಸರ ಹತ್ಯೆ ಆಗಲೇ ಬೇಕಾಯಿತು. ಅಂತೆಯೇ ಕೆಟ್ಟದ್ದನ್ನು ತೊಡೆದು ಉತ್ತಮ ಬೋಧನೆಯ ಸಾಹಿತ್ಯವನ್ನು ಬೆಂಬಲಿಸಲು ಮುಂದಾಗಬೇಕು ಎಂದು ಶ್ರೀಗಳು ಆಶಯ ವ್ಯಕ್ತಪಡಿಸಿದರು. ವಿದ್ಯಾಮಾಧವ ಪಂಡಿತರಂತಹ ಘನ ವಿದ್ವಾಂಸರ ಸಾಹಿತ್ಯ ಹಸ್ತಪ್ರತಿಗಳಲ್ಲಿಯೇ ಇರುವುದು ಸರಿಯಲ್ಲ. ಅಂತಹ ಕೃತಿಗಳನ್ನು ಪ್ರಕಟಿಸುವಲ್ಲಿ ಶ್ರೀಮಠದ ಸಂಪೂರ್ಣ ಆಶೀರ್ವಾದವಿದೆ ಎಂದು ಶ್ರೀಗಳು ತಿಳಿಸಿದರು.
ಈ ಸಂದರ್ಭದಲ್ಲಿ ಭಾರತೀ ಪ್ರಕಾಶನದ ಲೋಗೋ, ವಿ. ಹಿತ್ಲಳ್ಳಿ ಸೂರ್ಯನಾರಾಯಣ ಭಟ್ ಅವರು ಸಂಗ್ರಹಿಸಿ ಅನುವಾದಿಸಿದ ಭಾರತೀ ಪ್ರಕಾಶನದ ೨೦೦ ನೇ ಹೆಮ್ಮೆಯ ಕೃತಿ "ಶ್ರೀ ಸೂಕ್ತ ಭಾಷ್ಯ","ಮಂಗಳದ ಮುಂಬೆಳಕು", "ಪತ್ರ ಮಹಾಭಾರತ", ಶ್ರೀಮಠದ ದಿನದರ್ಶಿಕೆ, "ನಾನೇಕೆ ಹೀಗೆ" ಸಿಡಿಯ ಎರಡನೇ ಭಾಗ ಇವುಗಳನ್ನು ಶ್ರೀಗಳು ಬಿಡುಗಡೆಗೊಳಿಸಿ, ಮಹಾಮಂಡಲ ವ್ಯಾಪ್ತಿಯಲ್ಲಿ ಸಾಧನೆ ಮಾಡಿದ ಪದಾಧಿಕಾರಿಗಳನ್ನು,ಲೇಖಕರನ್ನು, ಗೌರವಿಸಿ ಸಕಲರಿಗೂ ಒಳಿತಾಗಲೆಂದು ಹಾರೈಸಿದರು. ಪ್ರಕಾಶನದ ಕಾರ್ಯದಿಂದ ಪೇಪರ್ ಬಳಸುವ ಮೂಲಕ ಪ್ರಕೃತಿಗೆ ಹಾನಿಯಾಗದಿರಲೆಂಬ ಉದ್ದೇಶದಿಂದ "ಪ್ರಕಾಶನ ಪ್ರಾಯಶ್ಚಿತ್ತ" ನಿಮಿತ್ತ ಕನಿಷ್ಟ ಸಾವಿರ ಗಿಡಗಳನ್ನು ಸಿದ್ದಾಪುರ ಭಾನ್ಕುಳಿಮಠದ ಆವಾರದಲ್ಲಿ ಹಾಗೂ ಇತರೆಡೆಗಳಲ್ಲಿ ನೆಟ್ಟು ಬೆಳೆಸಬೇಕೆಂದು ತಿಳಿಸಿದ ಶ್ರೀಗಳು ಸಾಂಕೇತಿಕವಾಗಿ ನೂರಾರು ವಿವಿಧ ರೀತಿಯ ಫಲ-ಪುಷ್ಪಗಳ ಗಿಡಗಳನ್ನು ಅನುಗ್ರಹಿಸಿದರು.
ಉಪಸ್ಥಿತರಿದ್ದ ಸಾಹಿತಿ,ವಿದ್ವಾಂಸ ಡಾ||ಸೂರ್ಯನಾರಾಯಣ ಭಟ್ ಹಿತ್ಲಳ್ಳಿ ಅವರು ಮಾತನಾಡಿ ಶ್ರೀ ರಾಘವೇಶ್ವರ ಭಾರತೀ ಶ್ರೀಗಳವರ ಅನುಗ್ರಹದಿಂದ "ಶ್ರೀಸೂಕ್ತ ಭಾಷ್ಯ" ಬರೆದಿರುವೆ. ಇದರ ಮೂಲ ಪ್ರತಿ ಅರ್ಧ ಭಾಗ ನಾಶವಾಗಿದ್ದರೂ ಸಾಕಷ್ಟು ಸೂಕ್ಷ್ಮವಾಗಿ ಗಮನಿಸಿ ಕೃತಿ ಹೊರತರಲಾಗಿದೆ. ಪ್ರಪಂಚದಲ್ಲಿ ಹುಟ್ಟಿದ್ದಕ್ಕೆ ಒಳ್ಳೆಯ ಕೆಲಸ ಮಾಡಲೇ ಬೇಕು. ಭಾರತೀ ಪ್ರಕಾಶನ ಹೊರತಂದ ಪುಸ್ತಕಗಳಲ್ಲಿ ತಪ್ಪು ಕಂಡುಬರಲು ಸಾಧ್ಯವೇ ಇಲ್ಲದಷ್ಟು ಪರಿಪೂರ್ಣವಾಗಿರುತ್ತದೆ ಎಂದರು. ಶ್ರೀಗಳವರ ಆಶೀರ್ವಾದವಿದ್ದಲ್ಲಿ ಮುಂಬರುವ ದಿವಸಗಳಲ್ಲಿ ವಿದ್ಯಾಮಾಧವ ಪಂಡಿತರ ಇತರ ಕೃತಿಗಳನ್ನು ಪ್ರಕಟಿಸುವಲ್ಲಿ ಅನುವು ಮಾಡಿಕೊಡುವುದಾಗಿ ಅವರು ತಿಳಿಸಿದರು. ಖ್ಯಾತ ಗಾಯಕ ಗರ್ತಿಕೆರೆ ರಾಘಣ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದು ಸಾಂದರ್ಭಿಕವಾಗಿ ಮಾತನಾಡಿ " ಮಣ್ಣಿನ ಮಕ್ಕಳೆ ಮನನ ಮಾಡಿ ಗಿಡವ ನೆಡಿ" ಹಾಗೂ ಶ್ರೀನಿವಾಸ ಉಡುಪ ಅವರ "ಬೆಳಕು ಬರಲಿ ಮೊದಲು ಗೆಳೆಯ ಕದವ ತೆರೆದಿಡು" ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು. ಶ್ರೀಮಠದ ಸಮ್ಮುಖ ಸರ್ವಾಧಿಕಾರಿ ಟಿ.ಮಡಿಯಾಳ, ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಭಟ್, ಗ್ರಾಮರಾಜ್ಯ ಪ್ರಧಾನ ಆರ್.ಎಸ್.ಹೆಗಡೆ ಹರಗಿ ಮುಂತಾದ ಗಣ್ಯರು ಪಾಲ್ಗೊಂಡಿದ್ದರು.
ಶಂಖನಾದ,ಗುರುವಂದನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಪ್ರಸಾರ ಪ್ರಧಾನ ರಮೇಶ ಗುಂಡೂಮನೆ ಸಭಾಪೂಜೆ ನೆರವೇರಿಸಿದರು. ಡಾ|| ಗಜಾನನ ಶರ್ಮಾ ಪ್ರಕಾಶನದ ಉದ್ದೇಶ ಕುರಿತು ವಿವರಿಸಿದರು. ಪ್ರಕಾಶನದ ಕೃಷ್ಣಪ್ರಸಾದ ನಿರ್ವಹಿಸಿದರು. ಪ್ರಕಾಶನದ ಪ್ರಮುಖ ವಿ. ಜಗದೀಶ ಶರ್ಮಾ ಅವಲೋಕನ ನಡೆಸಿಕೊಟ್ಟರು. ಮಹಾಮಂಡಲದ ವಿವಿಧ ಭಾಗಗಳಿಂದ ಆಗಮಿಸಿದ್ದ ಶಿಷ್ಯ-ಬಕ್ತರಿಗೆ ಶ್ರೀಗಳು ಫಲ ಮಂತ್ರಾಕ್ಷತೆ ಅನುಗ್ರಹಿಸಿದರು.