ಬೆಂಗಳೂರು : ರಾಮ ಎಂಬುದೇ ಎಲ್ಲ ಪ್ರಶ್ನೆಗೂ ಉತ್ತರವಾಗಿದೆ. ರಾಮ ಎಂದರೇ ಸತ್ಯ. ಕಾಲ ಬದಲಾದಂತೆ ಜೀವನಕ್ರಮಗಳು ಬದಲಾದರೂ ಮೌಲ್ಯಗಳು ಬದಲಾಗುವುದಿಲ್ಲ. ಕಾಲಕ್ಕೆ ತಕ್ಕಂತೆ ರೂಪ ಬದಲಾದರೂ ಸತ್ಯ ಬದಲಾಗುವುದಿಲ್ಲ. ಸತ್ಯದ ಮೌಲ್ಯ ಎಲ್ಲಿಯೂ ವ್ಯತ್ಯಾಸವಾಗುವುದಿಲ್ಲ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ನುಡಿದರು.
ಬೆಂಗಳೂರಿನ ಗಿರಿನಗರದ ಶ್ರೀ ರಾಮಾಶ್ರಮದಲ್ಲಿ ಭಾನುವಾರ, ನ.6ರಂದು ನೇರವೇರಿದ ರಾಮತಾರಕ ಹವನ ಹಾಗೂ 'ಗುರುಪದ' android app ಲೋಕಾರ್ಪಣೆ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ರಾಘವೇಶ್ವರ ಶ್ರೀಗಳು ಆಶೀರ್ವಚನ ನೀಡಿದರು.
'ರಾಮ' ಎಂಬ ಶಬ್ದದಿಂದ ಎಂತೆಂತಹ ಪರಿವರ್ತನೆಗಳು ನಡೆದು ಹೋಗಿವೆ. ಬೇಡನಾಗಿದ್ದ ವಾಲ್ಮೀಕಿ ರಾಮ ಶಬ್ದೋಚ್ಚಾರಣೆಯಿಂದ ರಾಮಾಯಣವನ್ನು ರಚಿಸುವ ಶಕ್ತಿಪಡೆದ; ಕಲ್ಲಾಗಿದ್ದ ಅಹಲ್ಯೆ ರಾಮನಿಂದ ಶಾಪಮುಕ್ತಳಾದಳು. ಅಂತೆಯೇ ಕೇವಲ ರಾಮ ಎಂಬ ಎರಡಕ್ಷರದ ಸ್ತುತಿಯಿಂದ ಎಲ್ಲ ಪಾಪ, ಶಾಪಗಳ ನಿವಾರಣೆಯಾಗುತ್ತದೆ; ಮತ್ತೊಮ್ಮೆ ಭಾವದಲದಲ್ಲಿ ಪುನೀತರಾಗುವಷ್ಟು ಶಕ್ತಿ ಇದೆ ರಾಮ ಶಬ್ದದಲ್ಲಿ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
"ಶ್ರೀ ರಾಮ ಜಯ ರಾಮ ಜಯ ಜಯ ರಾಮ" ಕೇವಲ ಇಷ್ಟರಲ್ಲಿ ಪೂರ್ತಿ ರಾಮಾಯಣ ಅಡಗಿದೆ. ಶ್ರೀ ಎಂದರೆ ಸೀತೆ, ಸೀತೆಗಾಗಿ ನಡೆದ ಮಹಾಯುದ್ಧದಲ್ಲಿ ರಾಮನ ಜಯವಾಯಿತು, ರಾಮನಿಗೆ, ಅಂದರೆ ಸತ್ಯಕ್ಕೆ ಯಾವತ್ತೂ ಜಯವಾಗಲಿದೆ.
ರಾಮ ತಾರಕದ ಮೂಲಕ ಸಮಾಜಕ್ಕೆ ಮಂಗಲವಾಗಲಿ, ತಾರಕ ಶಬ್ದಕ್ಕೆ ದಾಟಿಸು ಎಂಬ ಅರ್ಥ ಇದೆ. ರಾಮ ನಾಮ ತಾರಕವು ಸಮಾಜವನ್ನು ಕಷ್ಟಗಳಿಂದ ದಾಟಿಸಲಿ ಎಂದು ಹಾರೈಸಿದರು.
ಶ್ರೀಗಳ ನುಡಿಮುತ್ತುಗಳ (ಅಕ್ಷರ - ವೀಡಿಯೋ) ಸಂಗ್ರಹದ "ಗುರುಪದ" ಎಂಬ Android application( https://goo.gl/53KtsH) ಅನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು, ಶ್ರೀಮಠದ ನೂರಾರು ಶಿಷ್ಯ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.