ಚೆನ್ನೈ : ಚೆನ್ನೈನಲ್ಲಿ ಮೂರು ದಿನದಿಂದ ಸುರಿದ ಮಳೆ ಗುರುವಾರ ತನ್ನ ಆರ್ಭಟ ಕಡಿಮೆ ಮಾಡಿದೆ. ಆದರೆ ಬುಧವಾರ ರಾತ್ರಿ ಚೆಂಬರಂಬಕ್ಕಂ ಕೆರೆಯಿಂದ ಹೆಚ್ಚು ನೀರು ಹೊರಬಂದಿದರಿಂದ ಹೊಸ ಸ್ಥಳಗಳು ಜಲಪ್ರವಾಹದಿಂದ ಸುತ್ತುವರೆದಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ.
ಬುಧವಾರ ರಾತ್ರಿಯಿಂದ ಮಳೆ ಸುರಿಯದೇ ಇದ್ದರೂ, ಚೆಂಬರಂಬಕ್ಕಂ ಕೆರೆಯಿಂದ ೩೦೦೦೦ ಕ್ಯೂಸೆಕ್ಸ್ ನೀರು ಹೊರ ಬಂದಿದ್ದರಿಂದ ನಗರ ಮಧ್ಯ ಇರುವ ಕೋಡಂಬಾಕ್ಕಮ್, ಟಿ ನಗರ್, ಅಶೋಕ್ ನಗರ ಪ್ರದೇಶಗಳು ಪ್ರವಾಹದಲ್ಲಿ ಸಿಲುಕಿವೆ. ಕೆರೆಗೆ ಒಳಹರಿವು ಹೆಚ್ಚಾಗಿದ್ದರಿಂದ ಪ್ರವಾಹ ಉಂಟಾಗಿದೆ. ಇನ್ನೂ ಮೂರು ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎನ್ನುವ ಹವಾಮಾನ ವರದಿ ಜನರನ್ನು ಚಿಂತೆಗೀಡುಮಾಡಿದೆ.
ಗುರುವಾರ ಮುಖ್ಯಮಂತ್ರಿ ಜಯಲಲಿತಾ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ವೈಮಾನಿಕ ಸಮೀಕ್ಷೆ ನಡೆಸಿಲಿದ್ದಾರೆ.
ಈಗಾಗಲೆ ಹಾಲು, ತರಕಾರಿ ಇನ್ನಿತರ ಅಗತ್ಯ ವಸ್ತುಗಳ ಪೂರೈಕೆ ಪ್ರಮಾಣ ಇಳಿಮುಖವಾಗಿದೆ. ಕೆಲವು ಪ್ರದೇಶಗಳಲ್ಲಿ ಜನರಿ ಅರ್ಧ ಲೀ. ಹಾಲಿಗೆ ೫೦ ರೂ ಕೊಟ್ಟು ಖರೀದಿಸುತ್ತಿದ್ದಾರೆ.
ಚೆನ್ನೈ, ಕಾಂಚಿಪುರಂ, ತಿರುವಳ್ಳೂರು, ಕಡಲೂರು ಮತ್ತು ವಿಲ್ಲುಪುರಂ ತಿರುನಲ್ಲಿ ಕರಾವಳಿ ಪಡೆ, ಸೇನೆ, ನೌಕಾಪಡೆ, ರಾಷ್ಟ್ರೀಯ ವಿಪತ್ತು ನಿಗ್ರಹ ಪಡೆಗಳನ್ನು ಬುಧವಾರ ನಿಯೋಜಿಸಲಾಗಿದೆ. ಇವು ಅನೇಕ ಪ್ರದೇಶಗಳಲ್ಲಿ ಪ್ರವಾಹದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯದಲ್ಲಿ ತೊಡಗಿವೆ.