ಕೌಲಲಾಂಪುರ : ಭಯೋತ್ಪಾದನೆಯನ್ನು ಎದುರಿಸಲು ಜಾಗತಿಕವಾಗಿ ಒಂದಾಗಬೇಕು. ವಿಶ್ವದ ಎಲ್ಲಾ ದೇಶಗಳೂ ತಾವು ಯಾವುದೇ ರೀತಿ ಭಯೋತ್ಪಾದನೆಗೆ ಸಹಕಾರ ನೀಡುವುದಿಲ್ಲ ಎನ್ನುವುದನ್ನು ಖಚಿತಪಡಿಸಬೇಕು ಎಂದು ಭಾನುವಾರ ಕೌಲಲಾಂಪುರದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ವಿಶ್ವಕ್ಕೆ ಭಯೋತ್ಪಾದನೆ ದೊಡ್ಡ ಸಮಸ್ಯೆ. ಇದಕ್ಕೆ ಗಡಿಗಳಿಲ್ಲ. ಪ್ರಪಂಚದ ಎಲ್ಲಾ ದೇಶಗಳೂ ಇದನ್ನು ಎದುರಿಸಲು ಒಂದಾಗಬೇಕೆಂದು ನಾನು ಹೇಳಿದರೆ ಕೇವಲ ರಕ್ಷಣೆಯ ವಿಷಯದಲ್ಲಿ ಮಾತ್ರವಲ್ಲ. ಯಾವುದೇ ದೇಶ ಭಯೋತ್ಪಾದನೆಗೆ ಹಣಕಾಸಿನ, ಶಸ್ತ್ರಾಸ್ತ್ರ ಪೂರೈಕೆ ಅಥವಾ ಯಾವುದೇ ವಿಷಯದಲ್ಲಿ ಸಹಕಾರ ನೀಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಈಗ ಎರಡು ಬಹುರಾಷ್ಟ್ರೀಯ ಪ್ರಾದೇಶಿಕ ಶೃಂಗಸಭೆಯಲ್ಲಿ ಭಾಗವಹಿಸುವ ಜೊತೆ ಮೂರು ದಿನಗಳ ಮಲ್ಯೇಷಿಯಾ ಪ್ರವಾಸದಲ್ಲಿದ್ದಾರೆ. ಭಾರತೀಯ ಸಮುದಾಯವನ್ನುದೇಶಿಸಿ ಮಾತನಾಡುತ್ತ ಪ್ರಧಾನಿ ಅವರು ಭಾರತ ಮತ್ತು ಮಲ್ಯೇಷಿಯಾ ನಡುವಿನ ಶತಮಾನಗಳ ಸಂಬಂಧವನ್ನು ವಿವರಿಸಿದರು.
ಮಲ್ಯೇಷಿಯಾದಲ್ಲಿ ಬಹುಸಂಖ್ಯೆಯಲ್ಲಿ ನೆರದಿದ್ದ ತಮಿಳರನ್ನು ಮನಸ್ಸಿನಲ್ಲಿರಿಸಿಕೊಂಡು ತಮ್ಮ ಭಾಷಣವನ್ನು 'ಒಣಕ್ಕಂ' ಎಂದು ಪ್ರಾರಂಭಿಸಿದರು. ಜೊತೆಗೆ ತಮಿಳಿನ ಕವಿ-ಸಂತ ತಿರುವಳ್ಳುವರ್ ಅವರ ತಿರುಕ್ಕುರಳ್ ನ ಪದ್ಯಗಳನ್ನೂ ಹೇಳಿದರು.
ಎರಡು ಜಾಗತಿಕ ಯುದ್ಧದಲ್ಲಿ ಮಲ್ಯೇಷಿಯಾ ನೆಲದಲ್ಲಿ ಹುತಾತ್ಮರಾದ ಭಾರತೀಯರನ್ನು ನೆನಪು ಮಾಡಿಕೊಂಡರು. ಮಲ್ಯೇಷಿಯಾ ನೆಲದಲ್ಲಿರುವ ಅವರ ರಕ್ತದಿಂದ ಇಂದು ಎರಡು ದೇಶಗಳ ಸಂಬಂಧ ಗಟ್ಟಿಯಾಗಿದೆ. ಇದನ್ನು ಯಾರೂ ಅಳಿಸಲು ಸಾಧ್ಯವಿಲ್ಲ ಎಂದು ನುಡಿದರು. ನಾವು ಮಲ್ಯೇಷಿಯಾ ಸರ್ಕಾರದ ಜೊತೆ ಸೇರಿ ಪೆರಕ್ ನ ಕೆಂಪಾರ್ ಯುದ್ಧಭೂಮಿಯಲ್ಲಿ ಯೋಧರ ಸ್ಮಾರಕ ನಿರ್ಮಿಸಲು ಸಿದ್ಧರಿದ್ದೇವೆ ಎಂದು ನೆರೆದಿದ್ದ ಜನರಿಗೆ ತಿಳಿಸಿದರು.
ಇದರ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಎದುರಿರುವ ಸವಾಲುಗಳನ್ನು ಎದುರಿಸಲು ತಮ್ಮ ಸರ್ಕಾರ ಕೈಗೊಂಡ ಕ್ರಮಗಳ ಕುರಿತೂ ಸಹ ವಿವರಿಸಿದರು. ತಮ್ಮ ಸರ್ಕಾರ ಭೃಷ್ಟಾಚಾರ ನಿರ್ಮೂಲನೆ ಮತ್ತು ಬಡತನ ಸಮಸ್ಯೆಗಳನ್ನು ನಿಭಾಯಿಸಲು ಕ್ರಮಗಳನ್ನು ತೆಗೆದುಕೊಂಡಿದೆ ಎಂದರು.