ಪ್ಯಾರಿಸ್ : ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ಶುಕ್ರವಾರ ಉಗ್ರರು ನಡೆಸಿದ ದಾಳಿಗೆ 120ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. 'ಅಲ್ಲಾಹು ಅಕ್ಬರ್' ಎಂದು ಕೂಗುತ್ತಾ ಉಗ್ರರು ಅಮಾಯಕ ಜನರ ಮೇಲೆ ಗುಂಡಿನ ಮಳೆಗೈದರು ಮತ್ತು ಬಾಂಬ್ ದಾಳಿ ನಡೆಸಿದರು.
ಫ್ರಾನ್ಸ್ ಮತ್ತು ಜರ್ಮನಿಗಳ ಮಧ್ಯೆ ಸೌಹಾರ್ಧ ಪಂದ್ಯ ನಡೆಯುತ್ತಿದ್ದಾಗ ಮೈದಾನದ ಹೊರಗೆ ಆತ್ಮಾಹುತಿ ದಾಳಿ ನಡೆಸಿದ ಉಗ್ರರು ಇನ್ನಿತರ ಕಡೆ ಊಟಕ್ಕೆ ಹೋಗುತ್ತಿದ್ದ ಹಾಗೂ ಸಂಗೀತ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ಜನರ ಮೇಲೆ ಎಕೆ-47 ರೈಫಲ್ ಗಳಿಂದ ಗುಂಡಿನ ಸುರಿಮಳೆಗೈದು ಮಾರಣಹೋಮ ನಡೆಸಿದರು.
ಕಪ್ಪು ವಸ್ತ್ರದಿಂದ ಮುಖ ಮುಚ್ಚಿಕೊಂಡು ಆತ್ಮಾಹುತಿ ಕವಚ ಧರಿಸಿದ್ದ ನಾಲ್ವರು ಉಗ್ರರು ಎಕೆ-47 ಗನ್ ಹಿಡಿದುಕೊಂಡು ಪೂರ್ವ ಪ್ಯಾರಿಸ್ ನ ಬಟಾಕ್ಲಾನ್ ಎಂಬ ಸಭಾಂಗಣದಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ನೂರಾರು ಜನರ ಮೇಲೆ ನಿರಂತರವಾಗಿ ಹಾಗೂ ವ್ಯವಸ್ಥಿತವಾಗಿ ಗುಂಡಿನ ಸುರಿಮಳೆಗೈದರು.
ಕನಿಷ್ಟ ಆರು ವಿವಿಧ ಸ್ಥಳಗಳಲ್ಲಿ ನಡೆದ ದಾಳಿಗಳಲ್ಲಿ 120ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದು, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕಳೆದ ಜನವರಿಯಲ್ಲಿ ಪ್ಯಾರಿಸ್ ನಲ್ಲಿ ನಡೆದ ಜಿಹಾದಿ ದಾಳಿಯಿಂದ ಫ್ರಾನ್ಸ್ ಚೇತರಿಸಿಕೊೞುತ್ತಿರುವಾಗಲೇ ಈ ಭೀಕರ ಘಟನೆ ನಡೆದಿದೆ.
ಉಗ್ರರ ದಾಳಿಗೆ ಪ್ರತಿಯಾಗಿ ಪೊಲೀಸ್ ಹಾಗೂ ರಕ್ಷಣಾ ಪಡೆಗಳು ನಡೆಸಿದ ಪ್ರತಿ ದಾಳಿಯಲ್ಲಿ ಕನಿಷ್ಠ 8 ಉಗ್ರರು ಹತ್ಯೆಯಾಗಿದ್ದಾರೆ. 2004ರಲ್ಲಿ ಮ್ಯಾಡ್ರಿಡ್ ನಲ್ಲಿ ನಡೆದ ರೈಲು ಬಾಂಬ್ ದಾಳಿಯ ನಂತರ ನಡೆದ ಅತ್ಯಂತ ಭೀಕರ ಘಟನೆ ಇದು ಎಂದು ಹೇಳಲಾಗುತ್ತಿದೆ.
ಬಟಾಕ್ಲಾನ್ ನಲ್ಲಿ ನಡೆಸಿದ ದಾಳಿಯ ಸಮಯದಲ್ಲಿ ಉಗ್ರರು 'ಅಲಾಹು ಅಕ್ಬರ್' ಎಂದು ಕೂಗುತ್ತಾ ಸಿರಿಯಾದಲ್ಲಿ ಫ್ರಾನ್ಸ್ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯನ್ನು ಖಂಡಿಸುತ್ತ ಪ್ರೇಕ್ಷಕರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದರು. ಆ ಸಮಯದಲ್ಲಿ ಅಲ್ಲಿ ಅಮೆರಿಕದ ರಾಕ್ ಬ್ಯಾಂಡ್ ಈಗಲ್ಸ್ ಆಫ್ ಡೆತ್ ಮೆಟಲ್ ತಂಡ ನಡೆಸಿಕೊಡುತ್ತಿದ್ದ ಸಂಗೀತ ಕಾರ್ಯಕ್ರಮಕ್ಕೆ ಪ್ರೇಕ್ಷಕರು ನೆರೆದಿದ್ದರು.
ಪೊಲೀಸರು ಸಭಾಂಗಣ ತಲಪುತ್ತಿದ್ದಂತೆ ಮೂವರು ಉಗ್ರರು ತಮ್ಮ ಸ್ಪೋಟಕ ಕವಚಗಳನ್ನು ಉಡಾಯಿಸಿ ಆತ್ಮಾಹುತಿ ಮಾಡಿಕೊಂಡರು. ಈ ದಾಳಿಯಲ್ಲಿ ಕನಿಷ್ಟ 100 ಮಂದಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸ್ ವರದಿ ತಿಳಿಸಿದೆ.
ಕಳೆದ ಜನವರಿಯಲ್ಲಿ ಚಾರ್ಲೀ ಹೆಬ್ಡೋ ಪತ್ರಿಕೆಯ ಕಚೇರಿಯಲ್ಲಿ ನಡೆದ ಉಗ್ರರ ದಾಳಿ ಇನ್ನೂ ಹಸಿರಾಗಿದ್ದು ಈ ಕಚೇರಿಯಿಂದ ಬಟಾಕ್ಲಾನ್ ಸಭಾಂಗಣ ಕೇವಲ 200ಮೀಟರ್ ದೂರದಲ್ಲಿದೆ. ನಾಲ್ಕನೇ ಉಗ್ರ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.
ಅಲ್ಲದೆ ಉಗ್ರರು ಸಮೀಪದ ಉಪಹಾರ ಮಂದಿರಗಳ ಮೇಲೆ ಸಹ ದಾಳಿ ನಡೆಸಿದರು. ಅವುಗಳಲ್ಲಿ ಕಾಂಬೋಡಿಯಾ ಮತ್ತು ಜಪಾನ್ ದೇಶಗಳ ರೆಷ್ಟಾರಂಟ್ ಗಳು ಸೇರಿದ್ದವು. ಈ ದಾಳಿಯಲ್ಲಿ ಹಲವರು ಹತ್ಯೆಯಾಗಿದ್ದಾರೆ.
ಉತ್ತರ ಪ್ಯಾರಿಸ್ ನಲ್ಲಿರುವ ಸ್ಟೇಡ್-ಡಿ-ಫ್ರಾನ್ಸ್ ಕ್ರೀಡಾಂಗಣದಲ್ಲಿ ಫ್ರಾನ್ಸ್ ಮತ್ತು ಜರ್ಮನಿ ನಡುವೆ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯ ನಡೆಯುತ್ತಿದ್ದ ವೇಳೆ ಕ್ರೀಡಾಂಗಣದ ಹೊರಗೆ ಮೂವರು ಉಗ್ರರು ಆತ್ಮಾಹುತಿ ದಾಳಿ ನಡೆಸಿದರು.
ಈ ಪಂದ್ಯವನ್ನು ವೀಕ್ಷಿಸಲು ಫ್ರಾನ್ಸ್ ನ ರಾಷ್ಠ್ರಪತಿ ಫ್ರಾಂಕೋಯಿಸ್ ಹೊಲ್ಲಾಂಡೆ ಬಂದಿದ್ದರು. ಅವರನ್ನು ಸುರಕ್ಷಿತವಾಗಿ ಅಲ್ಲಿಂದ ಹೊರ ತರಲಾಯಿತು.
ಟಿವಿ ಮಾಧ್ಯಮದ ಮೂಲಕ ನೀಡಿದ ಸಂದೇಶದಲ್ಲಿ ರಾಷ್ಟ್ರಪತಿ ಹೊಲ್ಲಾಂಡೆ, 'ಹಿಂದೆಂದೂ ನಡೆಯದ ರೀತಿಯಲ್ಲಿ ಉಗ್ರರು ಪ್ಯಾರಿಸ್ ನಾದ್ಯಂತ ದಾಳಿ ನಡೆಸುತ್ತಿದ್ದಾರೆ, ಇದು ಭೀಕರ' ಎಂದು ಹೇಳಿದರು.
ದೇಶಾದ್ಯಂತ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ರಾಷ್ಟ್ರಪತಿ ಟರ್ಕಿಯಲ್ಲಿ ನಡೆಯುವ ಜಿ-೨೦ ಶಿಖರ ಸಮ್ಮೇಳನಕ್ಕೆ ತಮ್ಮ ಭೇಟಿಯನ್ನು ರದ್ದುಗೊಳಿಸಿದ್ದಾರೆ.