ನವದೆಹಲಿ : ತೊಗರಿ, ಉದ್ದಿನಂಥ ಬೇಳೆಕಾಳುಗಳು 200 ರೂ. ಗಡಿ ದಾಟಿ ಬೆಲೆ ಗಗನಕ್ಕೇರಿರುವಂತೆಯೇ, ಅಕ್ರಮ ದಾಸ್ತಾನುಗಾರರ ಮೇಲೆ ಸರ್ಕಾರಗಳು ತೀವ್ರ ದಾಳಿ ನಡೆಸಿವೆ. 10 ರಾಜ್ಯಗಳಲ್ಲಿ 36 ಸಾವಿರ ಟನ್ ಬೇಳೆಕಾಳು ಅಕ್ರಮ ದಾಸ್ತಾನನ್ನು ವಶಪಡಿಸಿಕೊಂಡಿವೆ. ಅಲ್ಲದೆ, ವಿದೇಶಗಳಿಂದ 5 ಸಾವಿರ ಟನ್ ಬೇಳೆಕಾಳು ತರಿಸಿಕೊಂಡು ತಕ್ಷಣವೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
ಅಕ್ರಮ ದಾಸ್ತಾನು ಮೇಲಿನ ಕ್ರಮದ ಹಿನ್ನೆಲೆಯಲ್ಲಿ ತೊಗರಿ ಬೇಳೆ ಬೆಲೆ 210 ರೂ.ಗಳಿಂದ 205 ರೂ.ಗೆ ಇಳಿಕೆಯಾಗಿದೆ. ಹೆಸರುಕಾಳು ಪ್ರತಿ ಕೇಜಿಗೆ 130 ರೂ.ಗಳಿಗೆ, ಕಡಲೆ 82 ರೂ.ಗೆ ಇಳಿದಿದೆ ಎಂದು ಹೇಳಲಾಗಿದೆ. ಆದರೆ, ಉದ್ದಿನಬೇಳೆಯ ದರ 198 ರೂ.ನಲ್ಲಿಯೇ ಮುಂದುವರಿದಿದೆ.
ಈ ನಡುವೆ, ದೇಶದ ವ್ಯಾಪಾರಿಗಳು ವಿದೇಶಗಳಿಂದ 25 ಲಕ್ಷ ಟನ್ನಷ್ಟು ಬೇಳೆಕಾಳುಗಳನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಮುಂದಿನ 15 ದಿನಗಳಲ್ಲಿ ಬೇಳೆಕಾಳುಗಳ ಬೆಲೆ ತುಸು ಕಡಿಮೆಯಾಗುವ ನಿರೀಕ್ಷೆ ಇದೆ, ಎಂದು ಭಾರತೀಯ ಬೇಳೆಕಾಳು ಹಾಗೂ ಆಹಾರಧಾನ್ಯಗಳ ಸಂಘ ತಿಳಿಸಿದೆ.
ಬೇಳೆಕಾಳುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅಂತರ್ ಸಚಿವಾಲಯ ಸಮಿತಿಯೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು. ಬೇಳೆಕಾಳುಗಳ ಬೆಲೆ ತಹಬದಿಗೆ ತರಲು ಸುಮಾರು 5 ಸಾವಿರ ಟನ್ಗಳಷ್ಟು ಆಮದು ಮಾಡಲಾಗಿದೆ. ಹೆಚ್ಚುವರಿಯಾಗಿ 3 ಸಾವಿರ ಟನ್ ಆವಕವಾಗಲಿದೆ. 2 ದಿನದಲ್ಲಿ 10 ರಾಜ್ಯಗಳ 36 ಸಾವಿರ ಟನ್ ಅಕ್ರಮ ಬೇಳೆಕಾಳು ದಾಸ್ತಾನು ವಶಪಡಿಸಿಕೊಳ್ಳಲಾಗಿದೆ' ಎಂದು ಜೇಟಿÉ ತಿಳಿಸಿದರು. ಇದೇ ವೇಳೆ ಅಕ್ರಮ ದಾಸ್ತಾನು ಇಡುವವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಿದರು.
ಸದ್ಯ ವಶಪಡಿಸಿಕೊಂಡಿರುವ ಬೇಳುಕಾಳುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದು ಮತ್ತು ಹೆಚ್ಚಿನ ಆಮದು ಸರಕುಗಳನ್ನು ಬಿಡುಗಡೆ ಮಾಡಿದಾಗ, ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಬೇಳೆಕಾಳುಗಳ ಬೆಲೆ ತಹಬದಿಗೆ ಬರಲಿದೆ. ಸಗಟು ಮಾರುಕಟ್ಟೆಯಲ್ಲಿ ಬೇಳೆಕಾಳುಗಳ ದರಗಳು ಇಳಿಕೆ ಕಾಣುತ್ತಿದ್ದು, ನಿಧಾನವಾಗಿ ಚಿಲ್ಲರೆ ಮಾರುಕಟ್ಟೆಯಲ್ಲಿನ ದರಗಳೂ ಇಳಿಕೆ ಕಾಣಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.
ಬೇಳೆಕಾಳುಗಳ ಬೆಲೆ ಏರುತ್ತಿದ್ದರೂ, ರಾಜ್ಯಗಳು ತಮ್ಮ ಹೊಣೆಯನ್ನು ನಿಭಾಯಿಸುತ್ತಿಲ್ಲ. ಅಕ್ರಮ ದಾಸ್ತಾನುಗಾರರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜೇಟಿÉ ದೂರಿದರು. ಕಳೆದ ಮೂರ್ನಾಲ್ಕು ದಿನಗಳಿಂದ ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ನಿರಂತರ ಒತ್ತಡ ಹೇರುತ್ತಿದೆ. ಬಳಿಕ ರಾಜ್ಯಗಳು ಎಚ್ಚೆತ್ತಿವೆ ಎಂದು ಅವರು ಆಪಾದಿಸಿದರು