ಬೆಂಗಳೂರು : ಕರ್ನಾಟಕ ರಾಜ್ಯ ಸರ್ಕಾರ ಬಿಜೆಪಿ ಸರ್ಕಾರ ಸಮಯದಲ್ಲಿ ರಚನೆಯಾಗಿದ್ದ ಗೋಸೇವಾ ಆಯೋಗವನ್ನು ವಿಸರ್ಜನೆ ಮಾಡಿ, ಅದರ ಅಧಿಕಾರವನ್ನು ಪ್ರಾಣಿ ಸಂರಕ್ಷಣಾ ಸಮಿತಿಗೆ ವರ್ಗಾಯಿಸಿ, ಜಾನುವಾರು ರಕ್ಷಿಸುವ ಹೊಣೆಗಾರಿಕೆಯನ್ನು ವಹಿಸಲು ನಿರ್ಧರಿಸಿದೆ.
ಸಂಪುಟ ಸಭೇಯಲ್ಲಿ ಗೋಸೇವಾ ಆಯೋಗವನ್ನು ವಿಸರ್ಜನೆ ಮಾಡಿ ಅದರ ಅಧಿಕಾರವನ್ನು ಈಗಿರುವ ಪ್ರಾಣಿ ಸಂರಕ್ಷಣಾ ಸಮಿತಿಯಲ್ಲಿ ಸೇರಿಸಲು ತೀರ್ಮಾನಿಸಲಾಯಿತು ಎಂದು ಕಾನೂನು ಸಚಿವ ಟಿ ಬಿ ಜಯಚಂದ್ರ ತಿಳಿಸಿದ್ದಾರೆ.
ಕರ್ನಾಟಕ ಗೋಹತ್ಯಾ ತಡೆಗಟ್ಟುವಿಕೆ ನಿಯಮ 2012 ರಲ್ಲಿ ಇಲ್ಲದಿದ್ದರೂ ಹಿಂದಿನ ಬಿಜೆಪಿ ಸರ್ಕಾರ ಗೋಸೇವಾ ಆಯೋಗವನ್ನು ರಚನೆ ಮಾಡಿತ್ತು. ಅವರ ಅಧಿಕಾರವೆನು? ಅವರು ಏನು ಮಾಡುತ್ತಿದ್ದರು ಎಂದು ನಮಗೆ ಗೊತ್ತಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಅವರನ್ನು ತೆಗೆದುಹಾಕಿದ್ದೇವೆ ಎಂದು ಜಯಚಂದ್ರ ಹೇಳಿದರು.
ಪ್ರಾಣಿ ರಕ್ಷಣೆಗಾಗಿ ಹಲವು ಕಾನೂನುಗಳು ಇರುವುದರಿಂದ ಗೋಸೇವಾ ಆಯೋಗದ ಅವಶ್ಯಕತೆ ಇಲ್ಲ ಎಂದು ಜಯಚಂದ್ರ ಹೇಳಿದ್ದಾರೆ.
ಬಿಜೆಪಿಯ 2009 ರ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ಗೋಹತ್ಯೆ ತಡೆಯಲು ಈ ಆಯೋಗವನ್ನು ರಚನೆ ಮಾಡಲಾಗಿತ್ತು.