ಬೆಂಗಳೂರು : ಮಂಗಳವಾರ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯಪಾಲ ವಜುಭಾಯಿ ವಾಲಾ, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಬೆಂಗಳೂರು ಮೇಯರ್ ಮಂಜುನಾಥ್ ರೆಡ್ಡಿ, ಬಿಜೆಪಿ ರಾಜ್ಯಾಧ್ಯಕ್ಷ ಪ್ರಲ್ಲಾದ್ ಜೋಷಿ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಸೇರಿದಂತೆ ಅನೇಕ ನಾಯಕರು ಭವ್ಯ ಸ್ವಾಗತ ಕೋರಿದರು.
ನಂತರ ಪ್ರಧಾನಿ ಮೋದಿ ಅವರು ಆಡುಗೋಡಿಯಲ್ಲಿರುವ ರಾಬರ್ಟ್ ಬಾಷ್ ಕಂಪನಿಗೆ ತೆರಳಿ, ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ ಜೊತೆ ಕಂಪನಿಯ ಮಹತ್ವದ ನವೀನ ಯೋಜನೆಗಳ ಪ್ರದರ್ಶನ ವೀಕ್ಷಿಸಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ ಬೆಂಗಳೂರಿನಲ್ಲಿ ಮಂಗಳವಾರ ನಡೆದ ಭಾರತ-ಜರ್ಮನಿ ಶೃಂಗಸಭೆಯಲ್ಲಿ ಭಾಗವಹಿಸಿ ಸರ್ಕಾರದ ಮೇಕ್ ಇನ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾ ಯೋಜನೆಗಳಲ್ಲಿ ತಂತ್ರಜ್ಞಾನ, ಉತ್ಪಾದನಾ ಕೈಗಾರಿಕೆಗಳಲ್ಲಿನ ಪಾತ್ರಗಳ ಬಗ್ಗೆ ಚರ್ಚೆ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಭಾಷಣದ ಪ್ರಮುಖ ಅಂಶಗಳುಃ
* ನಾವು ಭಾರತವನ್ನು ಮುಖ್ಯ ಜಾಗತಿಕ ಉತ್ಪಾದನೆಯ ಕೇಂದ್ರವನ್ನಗಿ ಮಾಡುವ ಹಾದಿಯಲ್ಲಿ ಇದ್ದೇವೆ.
* ಭಾರತ- ಜರ್ಮನಿ ಆರ್ಥಿಕ ಸಂಬಂಧದಲ್ಲಿ ಪ್ರಚಂಡ ಬಲವಿದೆ.
* ಭಾರತ-ಜರ್ಮನಿ ಆರ್ಥಿಕ ಸಂಬಂಧ ತನ್ನ ಸಾಮರ್ಥ್ಯಕ್ಕಿಂತ ಕೆಳಗಿದೆ. ನಾವು ವ್ಯಾಪಾರಿಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡಲು ಶ್ರಮಿಸುತ್ತಿದ್ದೇವೆ.
* ಕಳೆದ 15 ತಿಂಗಳುಗಳಲ್ಲಿ ನಾವು, ಭಾರತವನ್ನು ವ್ಯಾಪಾರ ಸ್ಥಾಪಿಸಲು ಅನುಕೂಲಕರ ಸ್ಥಳವನ್ನಾಗಿ ಮಾಡಲು ಸಾಕಷ್ಟು ಕಷ್ಟಪಟ್ಟು ಕೆಲಸ ಮಾಡಿದ್ದೇವೆ.
* ಜಾಗತಿಕ ಕುಸಿತದ ಸಂದರ್ಭದಲ್ಲಿ ಭಾರತ ಹೂಡಿಕೆಗೆ ಅವಕಾಶ ನೀಡುತ್ತಿದೆ.
* ನಾವು ಉತ್ಪಾದನಾ ಕೈಗಾರಿಕೆಗಳಿಗೆ ಹೆಚ್ಚು ಒತ್ತು ಕೊಡಬೇಕು. ಆದ್ದರಿಂದಲೇ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಜಾರಿಗೆ ತಂದಿದ್ದೇವೆ.
* ಕೈಗಾರಿಕೆ ಹಾಗೂ ಮೂಲಸೌಕರ್ಯಗಳಿಗೆ ಶೀಘ್ರವಾಗಿ ಪರವಾನಿಗೆ ನೀಡುವ ವ್ಯವಸ್ಥೆ ನಮ್ಮಲಿದೆ.
* ಹೂಡಿಕೆದಾರರ ದೀರ್ಘ ಕಾಲದಿಂದ ಬಾಕಿ ಇದ್ದ ಬೇಡಿಕೆಗಳನ್ನು ಈಡೇರಿಸಲು ಹಲವು ನಿರ್ಣಾಯಗಳನ್ನು ತೆಗೆದುಕೊಂಡಿದ್ದೇವೆ.
* ನಾವು ರಕ್ಷಣೆ ಮತ್ತು ಪರಿಸರ ಸೇರಿದಂತೆ ಹಲವು ನಿಯಂತ್ರಕ ಪರವಾನಗಿಗಳನ್ನು ಚುರುಕುಗೊಳಿಸಿದ್ದೇವೆ.
* ಎಲ್ಲಾ ಕೈಗಾರಿಕಾ ಪರವಾನಿಗೆಯ ಅವಧಿಯನ್ನು ಹೆಚ್ಚಿಸಿದ್ದೇವೆ.
* ೨೦೧೬ ರಿಂದ ಜಿ ಎಸ್ ಟಿ ಜಾರಿಯಾಗುತ್ತದೆ ಎನ್ನುವ ಭರವಸೆ ಇದೆ.
* ಭಾರತ ಎಲ್ಲಾ ಉದ್ಯಮಿಗಳ ಬೌದ್ಧಿಕ ಆಸ್ತಿ ಹಕ್ಕುಗಳನ್ನು ರಕ್ಷಿಸಲು ಬದ್ಧವಾಗಿದೆ.
* ಇದಕ್ಕೂ ಮೊದಲು ಭಾರತ ವಿದೇಶಗಳಿಂದ ಪ್ರತಿಭೆ , ತಂತ್ರಜ್ಞಾನ ಹಾಗೂ ಬಂಡವಾಳವನ್ನು ಆಕರ್ಷಿಸಲು ತಯಾರಾಗಿರಲಿಲ್ಲ.
* ಭಾರತ ಒಂದು ದೊಡ್ಡ ತಂತ್ರಜ್ಞಾನ ಕ್ರಾಂತಿಯ ಹೊಸ್ತಿಲಲ್ಲಿದೆ.