ಬೆಂಗಳೂರು : ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ ಭಾನುವಾರ ರಾತ್ರಿ ದೆಹಲಿಗೆ ಆಗಮಿಸಿದ್ದು, ಸೋಮವಾರ ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ಅವರನ್ನು ಸ್ವಾಗತ ಕೋರಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉಪಸ್ಥಿತರಿದ್ದರು.
ತಮ್ಮ ಮೂರು ದಿನದ ಭಾರತ ಪ್ರವಾಸದ ಸಂದರ್ಭದಲ್ಲಿ ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ ಸೋಮವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಆಯೋಜಿಸಿರುವ ಮೂರನೇ ಭಾರತ-ಜರ್ಮನಿ ಆಂತರಿಕ ಸರ್ಕಾರದ ಸಮಾಲೋಚನೆಗಳ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಂಗಳವಾರ ಅವರು ಜರ್ಮನ್ ಮೂಲದ ಪ್ರಮುಖ ಎಂಜಿನಿಯರಿಂಗ್ ಕಂಪನಿ ರಾಬರ್ಟ್ ಬಾಷ್ ಗೆ ಭೇಟಿ ನೀಡಲಿದ್ದಾರೆ. ಆ ಸಂದರ್ಭದಲ್ಲಿ ಕಂಪನಿ ತನ್ನ ಮಹತ್ವದ ನವೀನ ಯೋಜನೆಗಳನ್ನು ಮತ್ತು ದೇಶದಲ್ಲಿ ಕೌಶಲ್ಯ ಅಭಿವೃದ್ಧಿಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ಈ ಕಾರ್ಯಕ್ರಮದಲ್ಲಿ ಚಾನ್ಸಲರ್ ಜೊತೆ ಭಾಗವಹಿಸಲಿದ್ದಾರೆ. ನಂತರ ಹೋಟೆಲ್ ಲೀಲಾ ಪ್ಯಾಲೇಸ್ ನಲ್ಲಿ ನಡೆಯಲಿರುವ ನಾಸ್ಕಾಮ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಉಭಯ ನಾಯಕರು ಕೌಶಲ್ಯ ಅಭಿವೃದ್ಧಿ, ವೃತ್ತಿಪರ ತರಬೇತಿ, ಮೇಕ್ ಇನ್ ಇಂಡಿಯಾ ಕುರಿತು ಮಾತುಕತೆ ನಡೆಸುವ ನಿರೀಕ್ಷೆಯಿದೆ. ನಂತರ ಭಾರತ ಮತ್ತು ಜರ್ಮನಿ ಬಿಸಿನೆಸ್ ಮುಖಂಡರ ಜೊತೆ ಭೋಜನ ಕೂಟದಲ್ಲಿ ಭಾಗವಹಿಸಲಿದ್ದಾರೆ.
ಭಾರತ ಮತ್ತು ಜರ್ಮನಿ ಆಯಕಟ್ಟಿನ ಪಾಲುದಾರಿಕೆ ಹೊಂದಿದ್ದು, ಇದರಿಂದ ವ್ಯಾಪಾರ ಮತ್ತು ಆರ್ಥಿಕ ಕೊಂಡಿಗಳು ಪ್ರಬಲವಾಗಿವೆ. ಜರ್ಮನಿ ಐರೋಪ್ಯ ಒಕ್ಕೂಟದಲ್ಲಿರುವ ಭಾರತದ ಪ್ರಮುಖ ವ್ಯಾಪಾರಿ ಪಾಲುದಾರ ಮತ್ತು ಜಾಗತಿಕವಾಗಿ ಭಾರತದ ಆರನೇ ಪ್ರಮುಖ ವ್ಯಾಪಾರ ಪಾಲುದಾರ.
ಭಾರತದಲ್ಲಿ ಸುಮಾರು 1265 ಜರ್ಮನ್ ಕಂಪನಿಗಳಿವೆ. ಅದರಲ್ಲಿ ಸುಮಾರು 35 ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳಾಗಿದ್ದು ವಿನ್ಯಾಸ ಮತ್ತು ತಂತ್ರಜ್ನಾನವನ್ನು ಅಟೋಮೊಬೈಲ್, ಏರೋಸ್ಪೇಸ್, ಹೆಲ್ತ್ ಕೇರ್, ಬ್ಯಾಂಕಿಂಗ್ ಮುಂತಾದ ಕ್ಷೇತ್ರಗಳಿಗೆ ವಿಸ್ತರಿಸಿವೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನ್ ಚಾನ್ಸಲರ್ ಅವರ ಭೇಟಿಯ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿ ಪೊಲೀಸ್ ಆಯುಕ್ತರು, ಡಿಸಿಪಿಗಳು ಸೇರಿ ಎಲ್ಲ ಸಿವಿಲ್ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಗಣ್ಯರು ಸಂಚಾರ ನಡೆಸುವ ಮಾರ್ಗದಲ್ಲಿ ಸಾರ್ವಜನಿಕ ವಾಹನಗಳ ಸಂಚಾರ ಮತ್ತು ಪಾರ್ಕಿಂಗ್ ವ್ಯವಸ್ಥೆಯನ್ನು ನಿಷೇಧಿಸಲಾಗಿದೆ .