ನ್ಯೂಯಾರ್ಕ್ : ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವ ದೇಶಗಳು ಭಾರಿ ಬೆಲೆ ತೆರೆಯುವಂತೆ ಮಾಡಬೇಕು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿಶ್ವಸಂಸ್ಥೆಯಲ್ಲಿ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸಮುದಾಯದ ಎದುರು ನೇರವಾಗಿ ಪಾಕಿಸ್ತಾನದ ಮೇಲೆ ವಾಗ್ದಾಳಿ ನಡೆಸಿದ ಸಚಿವೆ ಸುಷ್ಮಾ ಸ್ವರಾಜ್, ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಪಾಕಿಸ್ತಾನದಲ್ಲಿ ನಿರಾತಂಕವಾಗಿ ಓಡಾಡುತ್ತಿದ್ದಾನೆ ಎಂದರು.
ನಾವು ಇಂದು ಎದುರಿಸುತ್ತಿರುವ ಆತಂಕವಾದಕ್ಕೆ ಹೇಗೆ ಉತ್ತರ ಕೊಡುತ್ತೇವೆ ಎನ್ನುವುದರ ಮೇಲೆ ಅಂತಾರಾಷ್ಟ್ರೀಯ ಸಮುದಾಯದ ಭವಿಷ್ಯ ಅವಲಂಬಿಸಿದೆ ಎಂದು ಹೇಳಿದರು. ನಿರಂತರವಾಗಿ ಹೊಸ ದಾಳಿ ಆಗುತ್ತಾ ಇದೆ. ಇತ್ತೀಚಿಗೆ ಪಾಕಿಸ್ತಾನದ ಇಬ್ಬರು ಭಯೋತ್ಪಾದಕರನ್ನು ಜೀವಂತವಾಗಿ ಹಿಡಿದಿದ್ದೇವೆ. ಈ ದಾಳಿ ಭಾರತವನ್ನು ಅಸ್ಥಿರಗೊಳಿಸುವ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ ಭಾಗಗಳನ್ನು ನ್ಯಾಯಸಮ್ಮತವಾಗಿ ತಮ್ಮದಾಗಿಸಿಕೊೞುವುದಾಗಿದೆ ಎಂದು ಸಚಿವೆ ವಾಗ್ದಾಳಿ ನಡೆಸಿದರು.
ನಮ್ಮಲ್ಲಿ 4 ಅಂಶಗಳಿಲ್ಲ ಇರುವುದು ಒಂದೇ ಅಂಶ,ಭಯೋತ್ಪಾದನೆಯನ್ನು ಕೈಬಿಡಿ, ಕುಳಿತು ಮಾತನಾಡೋಣ ಎಂದು ಸುಷ್ಮಾ ಸ್ವರಾಜ್ ವಿಶ್ವಸಂಸ್ಥೆಯಲ್ಲಿ ಭಯೋತ್ಪಾದನೆ ವಿರುದ್ಧ ೪ ಅಂಶಗಳನ್ನು ಹೇಳಿದ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರಿಗೆ ತಿರುಗೇಟು ನೀಡಿದರು.
ಸುಷ್ಮಾ ಸ್ವರಾಜ್ ಅವರ ವಿಶ್ವಸಂಸ್ಥೆಯ ಭಾಷಣಕ್ಕೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಸುಷಮಾ ಅವರಿಗೆ ಕರೆ ಮಾಡಿ ಅಭಿನಂದನೆ ತಿಳಿಸಿದ್ದಾರೆ.