ನವದೆಹಲಿ : ಸ್ಮಾರ್ಟ್ ಸಿಟಿ ಯೋಜನೆಗೆ ಚಾಲನೆ ನೀಡಿರುವ ಕೇಂದ್ರ ಸರ್ಕಾರ ಇದೀಗ ಹಳ್ಳಿಗಳನ್ನೂ ಸ್ಮಾರ್ಟ್ ಮಾಡಲು ಹೊಸ ಯೋಜನೆ ಜಾರಿಗೊಳಿಸಲು ಮುಂದಾಗಿದೆ.
300 ಗ್ರಾಮಗಳನ್ನು 2019-20ರ ವೇಳೆಗೆ ಸ್ಮಾರ್ಟ್ ವಿಲೇಜ್ ಆಗಿ ಅಭಿವೃದ್ಧಿಪಡಿಸುವ ಯೋಜನೆಗೆ ಇತ್ತೀಚಿಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಶ್ಯಾಮ ಪ್ರಸಾದ್ ಮುಖರ್ಜಿ ರುರ್ಬನ್ ಮಿಷನ್ ಎಂಬ ಯೋಜನೆಗೆ 5142.08 ಕೋಟಿ ರೂ. ವ್ಯಯಿಸಲು ಸರ್ಕಾರ ನಿರ್ಧರಿಸಿದೆ. ಗ್ರಾಮೀಣ ಪ್ರದೇಶದಲ್ಲಿನ ಆರ್ಥಿಕ, ಸಾಮಾಜಿಕ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಉತ್ತೇಜನ ನೀಡುವುದು ಯೋಜನೆಯ ಉದ್ದೇಶ.
ನಗರಗಳಲ್ಲಿ ಸಿಗುವ ಸೌಲಭ್ಯಗಳನ್ನು ಹಳ್ಳಿಗಳಿಗೂ ನೀಡುವ ಯೋಜನೆ ಇದು. ಹಳ್ಳಿಗಳ ನಡುವೆ ರಸ್ತೆ ಸಂಪರ್ಕ, ಸಾರಿಗೆ ವ್ಯವಸ್ಥೆ, ಗ್ಯಾಸ್ ಸಂಪರ್ಕ, ಕೃಷಿ ಉತ್ಪನ್ನ ಸಂಸ್ಕರಣೆ, ದಾಸ್ತಾನು, ಉಗ್ರಾಣ ನಿರ್ಮಾಣ, ಒಳಚರಂಡಿ ವ್ಯವಸ್ಥೆ, ನೀರು ಪೂರೈಕೆ, ತ್ಯಾಜ್ಯ ನಿರ್ವಹಣೆ, ಶಿಕ್ಷಣ ಸಂಸ್ಥೆಗಳ ಉನ್ನತೀಕರಣ, ಡಿಜಿಟಲ್ ಇಂಡಿಯಾ ಅಡಿ ಈ-ಗ್ರಾಮ ಸೇವೆ ಒದಗಿಸಲಾಗುತ್ತದೆ. ಗುಜರಾತ್ನಲ್ಲಿ ಈಗಾಗಲೇ ಈ ಸೌಲಭ್ಯಗಳನ್ನು ಹಳ್ಳಿಗಳಿಗೆ ನೀಡಲಾಗಿದೆ. ಇದೇ ಮಾದರಿಯನ್ನು ಸ್ಮಾರ್ಟ್ಹಳ್ಳಿಗಳಿಗೆ ಬಳಸಲಾಗುತ್ತದೆ.
ಬಯಲು ಹಾಗೂ ಕರಾವಳಿ ಸೀಮೆಗಳಲ್ಲಿ 25 ಸಾವಿರದಿಂದ 50 ಸಾವಿರ ಜನಸಂಖ್ಯೆಗೆ ಒಂದರಂತೆ ಗ್ರಾಮ ಗುತ್ಛ ಆರಂಭಿಸಲಾಗುತ್ತದೆ. ಮರುಭೂಮಿ, ಪರ್ವತ ಅಥವಾ ಬುಡಕಟ್ಟು ಪ್ರದೇಶದಲ್ಲಿ ಜನಸಂಖ್ಯೆ ಪ್ರಮಾಣವನ್ನು 5 ಸಾವಿರದಿಂದ 15 ಸಾವಿರಕ್ಕೆ ಸೀಮಿತಗೊಳಿಸಿ ಗುತ್ಛ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.