BW News Bureau : ಶುಕ್ರವಾರ ನಡೆದ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಬಿ ಎನ್ ಮಂಜುನಾಥ ರೆಡ್ಡಿ ಬಹುಮತ ಗಳಿಸಿ ಮೇಯರ್ ಸ್ಥಾನಕ್ಕೆ ಆಯ್ಕೆ ಆಗಿದ್ದಾರೆ. ಈ ಮೂಲಕ ಬಿಬಿಎಂಪಿ ಆಡಳಿತ ಕಾಂಗ್ರೆಸ್ ಮೈತ್ರಿಕೂಟದ ಪಾಲಾಗಿದೆ.
ಬಿ ಎನ್ ಮಂಜುನಾಥ ರೆಡ್ಡಿ ಮಡಿವಾಳ ವಾರ್ಡ್ ಸದಸ್ಯ. ಮೊದಲ ಬಾರಿಗೆ ಮೇಯರ್ ಆಗಿ ಮಂಜುನಾಥ ರೆಡ್ಡಿ ಆಯ್ಕೆಯಾಗಿದ್ದಾರೆ. ಮೂರನೇ ಬಾರಿಗೆ ಕಾರ್ಪೋರೇಟರ್ ಆಗಿ ಆಯ್ಕೆಯಾಗಿದ್ದರು. ಬಿಎ ಪಧವೀಧರರಾಗಿರುವ ಮಂಜುನಾಥ ರೆಡ್ಡಿ ಈಗ ಬೆಂಗಳೂರಿನ ಪ್ರಥಮ ಪ್ರಜೆ.
ಬೆಂಗಳೂರು ನಗರ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ನಡೆದ ಈ ಚುನಾವಣೆಯಲ್ಲಿ, ಸದಸ್ಯರು ಕೈ ಎತ್ತಿ ಮತ ಚಲಾಯಿಸಿದರು. ಇದರಲ್ಲಿ ಕಾಂಗ್ರೆಸ್ ನ ಬಿ ಎನ್ ಮಂಜುನಾಥ ರೆಡ್ಡಿ 131 ಮತಗಳಿಸಿ, ಮೇಯರ್ ಸ್ಥಾನಕ್ಕೆ ಬೇಕಾದ ಬಹುಮತಗಳಿಸಿದರು. ಬಿಜೆಪಿ ಅಭ್ಯರ್ಥಿಯಾಗಿ ಮಂಜುನಾಥ ರಾಜು ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಮಂಜುನಾಥ ರಾಜು ಪರ 128 ಮತಗಳು ಚಲಾವಣೆಯಾಗೊಂಡು ಪರಾಭವಗೊಂಡರು. ಮಂಜುನಾಥ ರಾಜು ಕಾಡುಮಲ್ಲೇಶ್ವರ ವಾರ್ಡ್ ಸದಸ್ಯರಾಗಿದ್ದರು.
ಮೇಯರ್ ಆಯ್ಕೆಯ ನಂತರ ನಡೆದ ಉಪಮೇಯರ್ ಚುನಾವಣಾ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೆಡಿಎಸ್ ನ ಎಸ್ ಪಿ ಹೇಮಲತಾ 131 ಮತಗಳಿಸಿ, ಉಪಮೇಯರ್ ಆಗಿ ಆಯ್ಕೆಯಾದರು. ಹೇಮಲತಾ ಅವರು ವೃಷಭಾವತಿನಗರ ವಾರ್ಡ್ ನ ಸದಸ್ಯೆ. ಬಿಜೆಪಿಯಿಂದ ಎಚ್ ಸಿ ನಾಗರತ್ನ ರಾಮಮೂರ್ತಿ ಸ್ಪರ್ಥಿಸಿದ್ದರು. ಎಚ್ ಸಿ ನಾಗರತ್ನ ರಾಮಮೂರ್ತಿ ಪಟ್ಟಾಭಿರಾಮನಗರ ವಾರ್ಡ್ ಸದಸ್ಯೆ.
ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ 101 ಸ್ಥಾನಗಳಿಸಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರರು ಮಾಡಿಕೊಂಡ ಮೈತ್ರಿಯಿಂದ ಮೇಯರ್ - ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಸರಳ ಬಹುಮತಗಳಿಸಿ ಬಿಬಿಎಂಪಿ ಚುಕ್ಕಾಣಿ ಕಾಂಗ್ರೆಸ್ ಮೈತ್ರಿಕೂಟದ ಪಾಲಾಯಿತು.