ನವದೆಹಲಿ : ಜಾಗತಿಕ ಆರ್ಥಿಕ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಭಾರತ ಹೇಗೆ ನಿರ್ವಹಿಸಬಹುದು ಎನ್ನುವುದರ ಬಗ್ಗೆ ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಇಂಡಿಯಾ ಐ ಎನ್ ಸಿ ಯ ಸಭೆ ಕರೆದಿದ್ದರು. ಜೊತೆಗೆ ಚೀನಾದ ಮಾರುಕಟ್ಟೆ ಮತ್ತು ಅಭಿವೃದ್ಧಿ ಸಮಸ್ಯೆಗಳಿಂದ ಭಾರತದ ಮುಂದಿರುವ ಅವಕಾಶಗಳ ಬಗ್ಗೆ ಸಲಹೆ ಕೇಳಿದರು.
ಈ ಸಭೆಯಲ್ಲಿ ಮುಕೇಶ್ ಅಂಬಾನಿ, ಕೆ ಎಂ ಬಿರ್ಲಾ, ಸುನಿಲ್ ಮಿತ್ತಲ್, ಅರುಂಧತಿ ಭಟ್ಟಾಚಾರ್ಯ, ಆರ್ ಬಿ ಐ ಗವರ್ನರ್ ರಘುರಾಮ್ ರಾಜನ್, ಹಣಕಾಸು ರಾಜ್ಯ ಸಚಿವ, ವಿದ್ಯುತ್ ಸಚಿವ ಮತ್ತು ಪ್ರಮುಖ ಸರ್ಕಾರಿ ಅಧಿಕಾರಿಗಳು ಭಾಗವಹಿಸಿದ್ದರು.
ನೀತಿ ನಿರೂಪಿಸುವವರು ಜಾಗತಿಕ ಪ್ರಕ್ಷುಬ್ಧತೆಯಿಂದ ಭಾರತವನ್ನು ಬುಲೆಟ್ ಪ್ರೂಫ್ ಮಾಡಲು ಆದಷ್ಟು ಬೇಗ ಕಾರ್ಯಪ್ರವೃತ್ತರಾಗಬೇಕು. ಬಡ್ಡಿದರಗಳನ್ನು ಕಡಿತಗೊಳಿಸಬೇಕು ಮತ್ತು ಚೀನಾ ಉತ್ಪನ್ನಗಳನ್ನು ತಡೆಯಲು ಹೊಸ ಸುಂಕ ನೀತಿಯನ್ನು ತರಬೇಕೆಂದು ಸಭೆಯಲ್ಲಿ ಉದ್ಯಮಿಗಳ ಸಂಘ, ಅಸ್ಸೋಛಾಮ್ (ASSOCHAM) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿತು.
ಹೂಡಿಕೆ ಮತ್ತು ಬೆಳವಣಿಗೆ ಪುನಶ್ಚೇತನಕ್ಕೆ ಸಹಾಯವಾಗುವಂತೆ ಮಾರ್ಚ್ ವೇಳೆಗೆ ಬಡ್ಡಿದರಗಳನ್ನು ಶೇ. 1.25 ಅಂಕಗಳಷ್ಟು ಕಡಿತಗೊಳಿಸಬೇಕೆಂದು ಆರ್ ಬಿ ಐ ಮುಖ್ಯಸ್ಥ ರಘುರಾಮ್ ರಾಜನ್ ಗೆ ಅಸ್ಸೋಛಾಮ್ ಕರೆ ನೀಡಿತು.