ಬೆಂಗಳೂರು : ಕಳೆದ 40 ವರ್ಷಗಳಲ್ಲೇ ಭೀಕರ ಬರಗಾಲ ಎದುರಿಸುತ್ತಿರುವ ರಾಜ್ಯಕ್ಕೆ ಮತ್ತೆ ಮಳೆರಾಯನ ಆಗಮನವಾಗಿದ್ದು, ಬರದಿಂದ ಬಳಲಿ ಕಂಗಾಲಾಗಿದ್ದ ಜನತೆಯಲ್ಲಿ ಆಶಾಭಾವನೆ ಮೂಡಿದೆ.
ರಾಜ್ಯಾದ್ಯಂತ ಬಹುತೇಕ ಭಾಗಗಳಲ್ಲಿ ಶನಿವಾರದಿಂದ ವ್ಯಾಪಕ ಮಳೆಯಾಗುತ್ತಿದ್ದು, ಜನರಲ್ಲಿ ಸಂತಸ ಮೂಡಿಸಿದೆ. ಮಹಾರಾಷ್ಟ್ರದಿಂದ ಲಕ್ಷದ್ವೀಪದವರೆಗೆ ವಾಯುಭಾರ ಕುಸಿತದಿಂದ ಎಲ್ಲೆಡೆ ಮಳೆಯಾಗುತ್ತಿದೆ.
ಈ ವರ್ಷ ಮುಂಗಾರು ವಿಫಲವಾಗಿ ರಾಜ್ಯದ ಹೆಚ್ಚಿನ ಭಾಗ ಬರ ಪೀಡಿತವಾಗಿದೆ. ಕುಡಿಯಲು ಸಹ ನೀರಿಲ್ಲದೆ ಜನರು, ಜಾನುವಾರುಗಳು ತತ್ತರಿಸುವಂತಾಗಿದೆ. ಕಳೆದ ನಲುವತ್ತು ವರ್ಷಗಳಲ್ಲೇ ಇದು ಅತ್ಯಂತ ಭೀಕರ ಬರಗಾಲ ಎಂದು ಹೇಳಲಾಗುತ್ತಿದೆ.
ಕ್ಷೀಣಿಸಿದ ಮುಂಗಾರಿನಿಂದಾಗಿ ಒಳಹರಿವು ಕಡಿಮೆಯಾಗಿದ್ದು, ರಾಜ್ಯದ 13 ಪ್ರಮುಖ ಜಲಾಶಯಗಳಲ್ಲಿ ನೀರಿನಮಟ್ಟ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇದರಿಂದಾಗಿ ಕೃಷಿ ಚಟುವಟಿಕೆಗೆ ಹೊಡೆತ ಬಿದ್ದಿದೆ. ಕುಡಿಯುವ ನೀರಿಗೂ ಎಲ್ಲೆಡೆ ಹಾಹಾಕಾರವಿದ್ದು, ವಿದ್ಯುತ್ ಕ್ಷಾಮ ಆವರಿಸಿದೆ. ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಈಗಾಗಲೇ ದಿನಂಪ್ರತಿ ಹಲವಾರು ಗಂಟೆಗಳ ಕಾಲ ಲೋಡ್ ಶೆಡ್ಡಿಂಗ್ ಆರಂಭವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಕಳೆದೆರಡು ದಿನಗಳಲ್ಲಿ ಮಳೆಯಾಗುತ್ತಿರುವುದು ಜನರಲ್ಲಿ ನೆಮ್ಮದಿ ಮೂಡಲು ಕಾರಣವಾಗಿದೆ.
ಬೆಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ಮಳೆಯಾಗಿತ್ತಿದೆ. ಮಂಗಳವಾರ ಹಾಗೂ ಬುಧವಾರ ಸಹ ಇನ್ನಷ್ಟು ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಕರಾವಳಿ ಪ್ರದೇಶದಲ್ಲಿ ಈ ವಾರವಿಡೀ ಮಳೆಯಾಗುವ ಸಂಭವವಿದೆ. ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಮುಂದಿನ ಕೆಲವು ದಿನಗಳಲ್ಲಿ ಅಲ್ಲಲ್ಲಿ ಮಳೆಯಾಗಲಿದೆ. ಅಲ್ಲದೆ, ರಾಜ್ಯ ದಕ್ಷಿಣ ಒಳನಾಡಿನಲ್ಲಿ ಮೇಲ್ಮೈ ಸುಳಿಗಾಳಿ ಇರುವುದರಿಂದಲೂ ಕಳೆದೆರಡು ದಿನಗಳಿಂದ ಮಳೆಯ ಅಬ್ಬರ ಹೆಚ್ಚಾಗಿದೆ. ಇನ್ನೂ ಕೆಲ ದಿನ ಹೀಗೇ ಮುಂದುವರಿಯಲಿದೆ.
ಮುಂಗಾರು ಆರಂಭವಾದಾಗಿನಿಂದ, ಅಂದರೆ, ಜೂನ್ನಿಂದ ಈವರೆಗೆ ರಾಜ್ಯದಲ್ಲಿ ಶೇ.26ರಷ್ಟು ಮಳೆ ಕೊರತೆ ಉಂಟಾಗಿದೆ. ಆದರೆ, ಸೆಪ್ಟೆಂಬರ್ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗುವ ಹಾಗೂ ವಿದ್ಯುತ್ ಅಭಾವ ಕಡಿಮೆಯಾಗುವ ಭರವಸೆ ಮೂಡಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಮುಂಗಾರು ಮತ್ತೆ ಚೇತರಿಸುವ ಸಾದ್ಯತೆ ಇರುವುದರಿಂದ ಬರ ಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದು. ಹವಾಮಾನ ಇಲಾಖೆಯ ವರದಿಯಂತೆ ರಾಜ್ಯದಲ್ಲಿ ಈ ವರ್ಷ ಸರಾಸರಿ ಶೇ.88ರಷ್ಟು ಮಳೆಯಾಗುವ ನಿರೀಕ್ಷೆಯಿದೆ.