ನವದೆಹಲಿ : ಪಾಕಿಸ್ತಾನ ಸೇನೆ ಪದೇ ಪದೇ ಗಡಿ ಭಾಗದಲ್ಲಿ ಕದನ ವಿರಾಮವನ್ನು ಉಲ್ಲಂಘಿಸುತ್ತಿರುವ ಹಾಗೂ ಭಾರತಕ್ಕೆ ಉಗ್ರರು ನುಸುಳಲು ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತ ಭಾರತೀಯ ಸೇನೆಯ ಮುಖ್ಯಸ್ಥ ಜ.ದಲ್ಬೀರ್ ಸಿಂಗ್ ಸುಹಾಗ್, ಭಾರತೀಯ ಸೇನೆ ಕ್ಷಿಪ್ರ, ಕಡಿಮೆ ಅವಧಿಯ ಸಂಗ್ರಾಮಕ್ಕೆ ಸದಾ ಸನ್ನದ್ಧವಾಗಿರಬೇಕು ಎಂದು ಎಚ್ಚರಿಸಿದರು.
1965ರಲ್ಲಿ ನಡೆದ ಭಾರತ-ಪಾಕಿಸ್ತಾನ ಯುದ್ಧದ ಬಗ್ಗೆ ಸೆಮಿನಾರ್ ಒಂದರಲ್ಲಿ ಮಾತನಾಡುತ್ತ ಜ.ಸಿಂಗ್, 'ಭವಿಷ್ಯದಲ್ಲಿ ಕಡಿಮೆ ಅವಧಿಯ ಯುದ್ಧಗಳ ಬಗ್ಗೆ ನಮಗೆ ಸಂಪೂರ್ಣವಾಗಿ ಅರಿವಿದೆ. ಹಾಗೂ ಅಂಥ ಯುದ್ಧಗಳಿಗೆ ಅತ್ಯಂತ ಕಡಿಮೆ ಮುನ್ಸೂಚನೆ ಸಿಗುತ್ತವೆ. ಆದ್ದರಿಂದ ಇಂಥ ಯುದ್ಧಗಳಿಗೆ ಅತ್ಯಂತ ಉನ್ನತ ಮಟ್ಟದ ಯುದ್ಧಸಿದ್ಧತೆಯೊಂದಿಗೆ ಸೇನೆ ಸದಾ ಸನ್ನದ್ಧವಾಗಿರಬೇಕು. ಇದು ನಮ್ಮ ರಣನೀತಿಗೆ ಅತ್ಯಂತ ಮಹತ್ವದ ವಿಚಾರವಾಗಿದೆ' ಎಂದು ಹೇಳಿದರು.
ಇತ್ತೀಚೆಗೆ ಪಾಕಿಸ್ತಾನ ಸೇನೆ ನಿರಂತರವಾಗಿ ಮಾಡುತ್ತಿರುವ ಕದನ ವಿರಾಮ ಉಲ್ಲಂಘನೆಯಿಂದಾಗಿ ಭಾರತೀಯ ಸೇನೆ ಬಹಳ ಜಾಗೃತವಾಗಿದೆ ಎಂದು ಸಿಂಗ್ ಈ ಸಂದರ್ಭದಲ್ಲಿ ಹೇಳಿದರು.
'ನಮಗಿರುವ ಬೆದರಿಕೆ ಹಾಗೂ ಸವಾಲುಗಳು ಕ್ಲಿಷ್ಠಕರವಾಗುತ್ತಿವೆ. ಭಾರತೀಯ ಸೇನೆಯ ತೀವ್ರತೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿದೆ. ನಮ್ಮ ಪಶ್ಚಿಮದ ನೆರೆಯವರಿಂದ (ಪಾಕಿಸ್ತಾನ) ಆಗಿತ್ತಿರುವ ನಿರಂತರ ಕದನ ವಿರಾಮ ಉಲ್ಲಂಘನೆ ಮತ್ತು ಗಡಿ ನುಸುಳುವಿಕೆಯಿಂದಾಗಿ ಗಡಿ ಭಾಗ ಸದಾ ಎಚ್ಚರದಿಂದ ಹಾಗೂ ಚಟುವಟಿಕೆಯಿಂದ ಇರುತ್ತದೆ. ಜಮ್ಮು ಕಾಶ್ಮೀರದಲ್ಲಿ ಅಶಾಂತಿ ಉಂಟುಮಾಡಲು ಹೊಸ ವಿಧಾನಗಳನ್ನು ಪ್ರಯೋಗಿಸಲಾಗುತ್ತಿದೆ. ಇತ್ತೀಚಿನ ಭಯೋತ್ಪಾದಕ ಚಟುವಟಿಕೆಗಳು ಹಿಂಸೆಯನ್ನು ಇನ್ನಷ್ಟು ಪ್ರದೇಶಗಳಿಗೆ ವಿಸ್ತರಿಸುವ ಯೋಜನೆಗೆ ನಿದರ್ಶನವಾಗಿದೆ' ಎಂದು ಜ.ಸಿಂಗ್ ಹೇಳಿದರು.
ಈ ಸಂದರ್ಭದಲ್ಲಿ ಜ.ಸಿಂಗ್, ತಾಯ್ನಾಡನ್ನು ರಕ್ಷಿಸಲು ಪ್ರಾಣತ್ಯಾಗ ಮಾಡಿದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
'1965ರ ಯುದ್ಧ ಭಾರತೀಯ ಸೇನೆಯ ಅದ್ವಿತೀಯ ಶೌರ್ಯ, ಅದ್ಭುತ ಶ್ರೇಷ್ಠತೆ ಹಾಗೂ ಅಚಲ ವಿಶ್ವಾಸದ ಸಾಹಸಗಾಥೆಯಾಗಿದೆ. ಅತ್ಯಂತ ಪ್ರಮುಖವಾಗಿ ಭಾರತೀಯ ಸೇನೆ ಪಶ್ಚಿಮ ಭಾಗದಲ್ಲಿ ಪಾಕಿಸ್ತಾನಕ್ಕೆ ಬಲವಾದ ಹೊಡೆತವನ್ನು ಕೊಟ್ಟಿತು. ಈ ಯುದ್ಧ ಕೆಲವೊಂದು ಋಣಾತ್ಮಕ ಮಿಥ್ಯೆಗಳನ್ನು ಅಳಿಸಿಹಾಕಿತು, ಆತ್ಮ ವಿಶ್ವಾಸವನ್ನು ಹೆಚ್ಚಿಸಿತು, ಅಲ್ಲದೆ, ಆರು ವರ್ಷಗಳ ನಂತರ 1971ರ ಯುದ್ಧಕ್ಕೆ ಅಡಿಪಾಯ ಹಾಕಿತು' ಎಂದು ಜ.ಸುಹಾಗ್ ನುಡಿದರು.
ಯುದ್ಧದ ಸಂದರ್ಭದಲ್ಲಿ ಸಾರ್ವಜನಿಕರ ಸಹಾಯ ಎಷ್ಟು ಅಗತ್ಯ ಎಂಬುದರ ಬಗ್ಗೆ ಮಾತನಾಡಿದ ಸಿಂಗ್ ಕಳೆದ ಯುದ್ಧಗಳ ಸಂದರ್ಭದಲ್ಲಿ ಸೇನೆಗೆ ಜನರು ನೀಡಿದ ಕೊಡುಗೆ, ಸಹಾಯವನ್ನು ಕೊಂಡಾಡಿದರು.