ಬೆಂಗಳೂರು : ಹಲವು ವರ್ಷಗಳ ನಂತರ ಕರ್ನಾಟಕ ರಾಜ್ಯ ತೀವ್ರ ಬರಗಾಲದ ಪರಿಸ್ಥಿಯನ್ನು ಎದುರಿಸುತ್ತಿದೆ. 1986ರಲ್ಲಿ ದಾರುಣ ಕ್ಷಾಮವನ್ನು ಕಂಡ ರಾಜ್ಯ ಈ ವರ್ಷ ಮತ್ತೆ ಜಲಕ್ಷಾಮದಿಂದ ಬರವನ್ನು ಬರಮಾಡಿಕೊಂಡಿದೆ.
ಗುರುವಾರ 9 ತಾಲೂಕುಗಳನ್ನು ರಾಜ್ಯ ಸರಕಾರ ಬರಗಾಲ ಪೀಡಿತ ಪ್ರದೇಶ ಪಟ್ಟಿಗೆ ಸೇರಿಸಿದೆ. ಇದರಿಂದಾಗಿ ಮಳೆಯ ಅಭಾವದಿಂದಾಗಿ ಬರದ ದವಡೆಗೆ ಸಿಲುಕಿದ ತಾಲೂಕುಗಳ ಸಂಖ್ಯೆ 135ಕ್ಕೆ ಏರಿದಂತಾಗಿದೆ. ಜಲಕ್ಷಾಮದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬರದ ಪಟ್ಟಿಗೆ ಇನ್ನೂ ಹಲವು ತಾಲೂಕುಗಳು ಸೇರ್ಪಡೆಯಾಗುವ ಸಂಭವವಿದೆ.
ಗುರುವಾರ ಬರದ ಪಟ್ಟಿಗೆ ಸೇರಿದ ತಾಲೂಕುಗಳೆಂದರೆ, ಅರಕಲಗೂಡು, ಚನ್ನಗಿರಿ, ತಿಪಟೂರು, ಪಿರಿಯಾಪಟ್ಟಣ, ಹುಣಸೂರು, ತರೀಕೆರೆ, ಹಿರೇಕೆರೂರು ದೊಡ್ಡಬಳ್ಳಾಪುರ ಮತ್ತು ಹೊಸಕೋಟೆ.
ಈ ಮೊದಲು 1986ರಲ್ಲಿ ರಾಜ್ಯ ಭೀಕರ ಬರಗಾಲವನ್ನು ಎದುರಿಸಿತ್ತು.
ಕುಡಿಯುವ ನೀರಿಗೇ ತತ್ವಾರವಾಗಿರುವ ಹಿನ್ನಲೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ತಲಾ ಒಂದು ಕೋಟಿ ರೂ. ಬಿಡುಗಡೆ ಮಾಡಲು ಸರಕಾರ ನಿರ್ಧರಿಸಿದೆ. ಉಳಿದೆ ಜಿಲ್ಲೆಗಳಿಗೆ ಹಂತ ಹಂತವಾಗಿ ಹಣ ಬಿಡುಗಡೆಯಾಗಲಿದೆ.
ಬರ ಪರಿಸ್ಥಿಯ ಬಗ್ಗೆ ಕಂದಾಯ ಸಚಿವ ವಿ.ಶ್ರೀನಿವಾಸಪ್ರಸಾದ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಂಪುಟ ಉಪ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದ್ದು, ಬರ ಪೀಡಿತ ಪ್ರದೇಶಗಳಲ್ಲಿ ಸಮರೋಪಾದಿಯಲ್ಲಿ ಪರಿಹಾರ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.
ಬರದಿಂದಾಗಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಿದ್ದು, ಜಿಲ್ಲೆಗಳ್ ಮಧುಯೆ ಮೇವು ಸಾಗಾಣಿಕೆಗೆ ತಗಲುವ ವೆಚ್ಚವನ್ನು ಸರಕಾರದ ವತಿಯಿಂದಲೇ ಭರಿಸುವ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಯಿತು.
ಬರಗಾಲದಿಂದಾಗಿ ರಾಜ್ಯಕ್ಕೆ ಈವರೆಗೆ ಸುಮಾರು 11 ಸಾವಿರ ಕೋಟಿ ರೂ. ನಷ್ಟವಾಗಿದ್ದು, ಕೇಂದ್ರ ಸರ್ಕಾರಕ್ಕೆ 3 ಸಾವಿರ ಕೋಟಿ ರೂ. ಪರಿಹಾರ ನೆರವು ಕೇಳಲಾಗಿದೆ. ಸೆ.1ರಂದು ಸಿಎಂ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಮತ್ತೊಮ್ಮೆ ಬರದ ಪರಿಸ್ಥಿತಿ ಪರಿಶೀಲಿಸಿ ಕೇಂದ್ರಕ್ಕೆ ಹೆಚ್ಚಿನ ನೆರವು ಕೇಳಲು ಸಮಿತಿ ನಿರ್ಧರಿಸಿದೆ.
ಅಲ್ಲದೆ, ಕುಡಿಯುವ ನೀರಿನ ಯೋಜನೆಗಳಿಗೆ ವಿದ್ಯುತ್ ಪೂರೈಕೆ ಮಾಡಲು ಪ್ರತ್ಯೇಕವಾಗಿ 1500 ಮೆಗಾವಾಟ್ ವಿದ್ಯುತ್ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ತೀರ್ವನಿಸಲಾಗಿದೆ.
ಸಭೆಯಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಪಶುಸಂಗೋಪನಾ ಸಚಿವ ಟಿ.ಬಿ.ಜಯಚಂದ್ರ, ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಹಾಗೂ ಕೃಷಿ ಸಚಿವ ಕೃಷ್ಣ ಭೈರೇಗೌಡ ಪಾಲ್ಗೊಂಡಿದ್ದರು.