ಬೆಂಗಳೂರು : ಬಿಬಿಎಂಪಿ ಚುನಾವಣೆಯಲ್ಲಿ ನಾವು ನಿರೀಕ್ಷಿಸಿದಷ್ಟು ಫಲಿತಾಂಶ ಬಂದಿಲ್ಲ. ಆದರೂ ಜನರ ತೀರ್ಪನ್ನು ನಾವು ಒಪ್ಪಿಕೊಳ್ಳುತ್ತೇವೆ. ಬೆಂಗಳೂರು ನಗರದ ಜನರ ಮನ ಗೆಲ್ಲಲು ನಮಗೆ ಆಗಲಿಲ್ಲ. ಹಾಗಾಗಿ ಈ ಸೋಲಿನ ಹೊಣೆಯನ್ನು ನಾನು ಹೊರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳವಾರ, ಬಿಬಿಎಂಪಿ ಚುನಾವಣಾ ಫಲಿತಾಂಶ ಪ್ರಕಟಗೊಂಡ ನಂತರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸುದ್ದಿಗೋಷ್ಠಿಯ ಸಂದರ್ಭದಲ್ಲಿ ಅವರು ಈ ಮಾತು ಹೇಳಿದರು.
ಬಿಜೆಪಿ 5 ವರ್ಷದಲ್ಲಿ ಯಾವುದೇ ಕೆಲಸವನ್ನು ಮಾಡಿರಲಿಲ್ಲ. ಆದರೆ ನಾವು ಬೆಂಗಳೂರಿಗೆ ಏನು ಮಾಡಬೇಕು, ಏನು ಮಾಡುತ್ತೇವೆ ಎಂಬುದನ್ನು ತಿಳಿಸಿದ್ದೇವು. ಆದರೂ ನಮಗೆ ಸೋಲಾಗಿದೆ. ಹಾಗಂತ ಇದು ಸರ್ಕಾರಕ್ಕೆ ಸಿಕ್ಕ ಜನಾಭಿಪ್ರಾಯವಲ್ಲ. ಇದೇನು ರಾಷ್ಟ್ರವನ್ನೇ ಬದಲಿಸುವ ಫಲಿತಾಂಶವಲ್ಲ ಎಂದು ಸಿದ್ದರಾಮಯ್ಯ ವಿಶ್ಲೇಷಿಸಿದರು.
ಸೋಲಿನ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇವೆ. ಸರಳ ಬಹುಮತ ಬರುತ್ತೆ ಅಂತ ಭಾವಿಸಿದ್ದೆವು. ಆದರೆ ಬಹುಮತ ಪಡೆಯುವಲ್ಲಿ ಸೋತಿದ್ದೇವೆ ಎಂದು ಹೇಳಿದರು.