BW News Bureau : ತೀವ್ರ ಕುತೂಹಲ ಕೆರಳಿಸಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಸರಳ ಬಹುಮತದತ್ತ ಸಾಗುತ್ತಿದೆ. ಆದರೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಗೆ ಇದು ತೀವ್ರ ಹಿನ್ನಡೆಯ ಫಲಿತಾಂಶವಾಗಿದೆ.
ಚುನಾವಣೆ ನಡೆದ 198 ವಾರ್ಡ್ ಗಳ ಪೈಕಿ ಬಿಜೆಪಿ 101 ಸ್ಥಾನಗಳಲ್ಲಿ ಜಯಭೇರಿ ಸಾಧಿಸಿದರೆ, ಕಾಂಗ್ರೆಸ್ 75 ಸೀಟುಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಯಾಗಬೇಕಾಯಿತು. ಜೆಡಿಎಸ್ ಕೇವಲ 14 ವಾರ್ಡ್ ಗಳಲ್ಲಿ ವಿಜಯಿಯಾಗಿ ಮೂರನೇ ಸ್ಥಾನದಲ್ಲಿದೆ. ಪಕ್ಷೇತರರು 8 ಸ್ಥಾನಗಳಲ್ಲಿ ಗೆದ್ದಿದ್ದಾರೆ.
ಸರಳ ಬಹುಮತ ಪಡೆಯಲು 105 ಸ್ಥಾನಗಳನ್ನು ಪಡೆಯಬೇಕಾಗಿದ್ದು, ಬಿಜೆಪಿ ಅಧಿಕಾರದ ಚುಕ್ಕಾಣಿ ಮತ್ತೊಮ್ಮೆ ಹಿಡಿಯಲು ತಯಾರಾಗಿದೆ. ಬಹುಮತಕ್ಕೆ ಕೆಲವು ಸ್ಥಾನಗಳು ಕೊರತೆಯಾದರೂ ಪಕ್ಷೇತರರ ಸಹಾಯ ಪಡೆಯುವ ಸಾಧ್ಯತೆ ಇದೆ.
ರಾಜ್ಯ ಬಿಜೆಪಿಯ ಈ ಉತ್ತಮ ಪ್ರದರ್ಶನಕ್ಕೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅಭಿನಂದನೆ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪ್ರಿಯತೆ ಮತ್ತು ಆಡಳಿತದ ವಿರುದ್ಧ ಇದು ಜನಾದೇಶ ಎಂದು ರಾಜಕೀಯ ಪಂಡಿತರು ವಿಶ್ಲೇಶಿಸಿದ್ದಾರೆ. ಆದರೆ ಸೋಲಿನ ಸುಳಿವು ಮೊದಲೇ ಸಿಕ್ಕ ಕಾಂಗ್ರೆಸ್ಸಿಗರು ಇದು ಸರಕಾರದ ವಿರುದ್ಧ ಜನಾದೇಶವಲ್ಲ ಎಂದು ಹೇಳುತ್ತಾ ಬಂದಿದ್ದರು.
ಬಿಬಿಎಂಪಿ ಚುನಾವಣೆಯಲ್ಲಿ ಶತಾಯ ಗತಾಯ ಗೆಲುವು ಸಾಧಿಸಲೇಬೇಕೆಂದು ಹಠತೊಟ್ಟಿದ್ದ ಸಿದ್ದರಾಮಯ್ಯನವರಿಗಂತೂ ಇದು ಪರೀಕ್ಷಾ ಕಾಲ ಎನ್ನುವುದು ಸತ್ಯ. ಅವರ ವಿರುದ್ಧ ಬಂಡಾಯವೆದ್ದ ಶಾಸಕರ ಮುಂದಿನ ನಡೆ ಹೇಗೆ ಎನ್ನುವುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ. ಸಿದ್ದರಾಮಯ್ಯನವರ ಕಾರ್ಯಶೈಲಿ ಬಗ್ಗೆ ತೀವ್ರ ಅಸಮಾಧಾನ ಹೊಂದಿದ ಕಾಂಗ್ರೆಸ್ ನಾಯಕರು, ಶಾಸಕರ ಬಂಡಾಯಕ್ಕೆ ಇನ್ನಷ್ಟು ಕಾವು ಸಿಗುವ ಸಾಧ್ಯತೆಯೇ ಹೆಚ್ಚಾಗಿದೆ.