ನವದೆಹಲಿ : ಭೂಗತ ಪಾತಕಿ, ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ದಾವೂದ್ ಇಬ್ರಾಹಿಂ ತನ್ನ್ ಪರಿವಾರದೊಂದಿಗೆ ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿರುವ ಬಗ್ಗೆ ಮಹತ್ವದ ಸಾಕ್ಷ್ಯಗಳನ್ನು ಭಾರತ ಬಹಿರಂಗಗೊಳಿಸಿರುವ ಹಿನ್ನಲೆಯೆಲ್ಲಿ ಭಯಗೊಂಡ ಪಾಕಿಸ್ತಾನದ ಸೇನೆ ಮತ್ತು ಐ.ಎಸ್.ಐ ಪಾತಕಿಯನ್ನು ಪರಿವಾರ ಸಮೇತ ಉತ್ತರ ಪಾಕಿಸ್ತಾನದ ಮುರ್ರೆ ಎಂಬ ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಿದೆ.
1993ರ ಮುಂಬೈ ಸರಣಿ ಸ್ಪೋಟಗಳ ರೂವಾರಿ ದಾವೂದ್ ಹಾಗೂ ಆತನ ಸಹೋದರ ಅನೀಸ್ ನ ಕುಟುಂಬಗಳನ್ನು ಸಹ ಮುರ್ರೆ ಯ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.
ದಾವೂದ್ ಹಾಗೂ ಆತನ ಪರಿವಾರ ಕರಾಚಿಯಲ್ಲಿ ನೆಲೆಸಿರುವ ಬಗ್ಗೆ ಆತನ ಮನೆಯ ವಿಳಾಸ, ಪಾಸ್ ಪೋರ್ಟ್, ಟೆಲಿಫೋನ್ ಬಿಲ್ ಮುಂತಾದ ಮಹತ್ವದ ದಾಖಲೆಗಳನ್ನು ಭಾರತ ಕಳೆದೆರಡು ದಿನಗಳಲ್ಲಿ ಬಹಿರಂಗಗೊಳಿಸಿತ್ತು. ದಾವೂದ್ ತನ್ನ ನೆಲದಲ್ಲಿ ಇಲ್ಲವೇ ಇಲ್ಲ ಎಂದು ಸದಾ ಸುಳ್ಳು ಹೇಳಿ ಜಾರಿಕೊಳ್ಳುತ್ತಿದ್ದ ಪಾಕಿಸ್ತಾನಕ್ಕೆ ಇದು ನುಂಗಲಾರದ ತುತ್ತಾಗಿದೆ. ಮಾತ್ರವಲ್ಲ, ದಾವೂದ್ ನನ್ನು ಸೆರೆಹಿಡಿಯಲು ಅಥವಾ 'ಮುಗಿಸಿಬಿಡಲು' ಭಾರತ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದೆ ಎಂದರಿತ ಪಾಕಿಸ್ತಾನ ಸೇನೆ ಮತ್ತು ಆತನಿಗೆ ರಕ್ಷಣೆ ಒದಗಿಸುತ್ತಿರುವ ಐ.ಎಸ್.ಐ. ತಕ್ಷಣ ಅವನನ್ನು 'ಸುರಕ್ಷಿತ' ತಾಣಕ್ಕೆ ವರ್ಗಾಯಿಸಿದೆ. ಮುರ್ರೆ ಐ.ಎಸ್.ಐ ಹಿಡಿತದಲ್ಲಿದ್ದು, ಪಾತಕಿಗೆ ಸುರಕ್ಷಿತವಾದ ಸ್ಥಳ ಎನ್ನಲಾಗಿದೆ.
ಹಿಂದೂಸ್ತಾನ್ ಟೈಮ್ಸ್ ಶನಿವಾರ ವರದಿ ಮಾಡಿದಂತೆ, ದಾವೂದ್ ಇಬ್ರಾಹಿಂ, ಪತ್ನಿ ಮೆಹ್ಜಾಬೀನ್ ಶೇಖ್, ಪುತ್ರ ಮೊಯೀನ್ ನವಾಜ್, ಪುತ್ರಿಯರಾದ ಮಾಹ್ರುಖ್, ಮೆಹ್ರೀನ್ ಮತ್ತು ಮಾಝಿಯಾ ಕರಾಚಿಯ ಪ್ರತಿಷ್ಟಿತ ಕ್ಲಿೞ್ಟನ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ದಾವೂದ್ ನ ಪುತ್ರಿ ಮಹ್ರುಖ್ ಪಾಕಿಸ್ತಾನದ ಕ್ರಿಕೆಟ್ ತಂಡದ ಮಾಜಿ ನಾಯಕ ಜಾವೆದ್ ಮಿಯಾಂದಾದ್ ನ ಪುತ್ರ ಜುನೈದ್ ನನ್ನು ಮದುವೆಯಾಗಿದ್ದಳು.
ಈ ಮಧ್ಯೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭಾನುವಾರ, ದಾವೂದ್ ಪಾಕಿಸ್ತಾನದಲ್ಲಿ ನೆಲೆಸಿದ್ದಾನೆ, ಆದರೆ, ಆತ ಪಾಕಿಸ್ತಾನದಲ್ಲಿ ಆಗಾಗ ತನ್ನ ನೆಲೆ ಬದಲಿಸುವ ಸಾಧ್ಯತೆ ಇದೆ ಎಂದಿದ್ದಾರೆ.
'ಅಂಥ ವ್ಯಕ್ತಿಗಳು ತಮ್ಮ ನೆಲೆಗಳನ್ನು ಆಗಾಗ ಬದಲಿಸುತ್ತಿರುತ್ತಾರೆ. ಆದರೆ ಅವನು ಶಾಶ್ವತವಾಗಿ ಪಾಕಿಸ್ತಾನದಲ್ಲೇ ನೆಲೆಸಿದ್ದಾನೆ' ಎಂದು ಸಿಂಗ್ ಲಖ್ನೋದಲ್ಲಿ ವರದಿಗಾರರಿಗೆ ತಿಳಿಸಿದರು.
ದಾವೂದ್ ನ ಬಗ್ಗೆ ಭಾರತ ತಯಾರಿಸಿರುವ ಕಡತದಲ್ಲಿ ಆತ ಆಗಾಗ್ಗೆ ಪ್ರವಾಸ ಮಾಡಲು ಉಪಯೋಗಿಸುವ ಪಾಕಿಸ್ತಾನಿ ಪಾಸ್ ಪೋರ್ಟ್ ದಾಖಲೆಗಳನ್ನು ಕಲೆಹಾಕಲಾಗಿದೆ.
1993ರ ಮುಂಬೈ ಸರಣಿ ಸ್ಪೋಟ ದಾಳಿಯಲ್ಲಿ 257 ಅಮಾಯಕರು ಹತ್ಯೆಗೀಡಾಗಿದ್ದು, 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ದಾವೂದ್ ಈ ಸಂಚಿನ ಮುಖ್ಯ ಆರೋಪಿಯಾಗಿದ್ದು, ಭಾರತದಿಂದ ಪರಾರಿಯಾಗಿ ಪಾಕಿಸ್ತಾನದಲ್ಲಿ ನೆಲೆಯೂರಿದ್ದಾನೆ.
ಇಷ್ಟೇ ಅಲ್ಲದೆ, ದಾವೂದ್ ಇತರ ಭಯೋತ್ಪಾದಕ ಚಟುವಟಿಕೆ, ಹಫ್ತಾ ವಸೂಲಿ, ಡ್ರಗ್ಸ್ ಮತ್ತು ಕಳ್ಳ ಹಣ ಸಾಗಾಣಿಕೆ ಕಾರ್ಯಗಳಲ್ಲೂ ಆರೋಪಿಯಾಗಿದ್ದು, ಜಾಗತಿಕ ಭಯೋತ್ಪಾದಕ ಪಟ್ಟಿಯಲ್ಲಿ ಸೇರಿದ್ದಾನೆ.