ನವದೆಹಲಿ : ಭಾರತ ಮತ್ತು ಪಾಕಿಸ್ತಾನದ ನಡುವೆ ದೆಹಲಿಯಲ್ಲಿ ನಡೆಯಬೇಕಿದ್ದ ಮಾತುಕತೆಗೂ ಕೆಲವೇ ಗಂಟೆಗಳ ಮೊದಲು ಶನಿವಾರ ತಡರಾತ್ರಿ ಭಾರತ ಹೇಳಿದ ಎರಡು ನಿಯಮಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದೆ. ಇದರಿಂದ ಎರಡು ದೇಶದ ರಾಷ್ಟ್ರೀಯ ಭದ್ರತಾ ಸಲಹೆಗಾರರ ನಡುವೆ ನಡೆಯಬೇಕಿದ್ದ ಮಾತುಕತೆ ರದ್ದುಗೊಂಡಿದೆ.
ಭಾರತ ಹೇಳಿದ ನಿಯಮದಂತೆ ನಿಗದಿಯಾದ ಎನ್ ಎಸ್ ಎ ಮಾತುಕತೆ ನಡೆಯಲು ಸಾಧ್ಯವಿಲ್ಲ ಎಂದು ಶನಿವಾರ ಸಂಜೆ ಪಾಕಿಸ್ತಾನ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಪಾಕಿಸ್ತಾನದ ನಿರ್ಧಾರ ದುರದೃಷ್ಟಕರ. ಭಾರತ ಯಾವುದೇ ಮಾತುಕತೆ ಪೂರ್ವ ನಿಯಮಗಳನ್ನು ಹೇರಿರಲಿಲ್ಲ. ಪಾಕಿಸ್ತಾನ ಮೊದಲೇ ಒಪ್ಪಿಕೊಂಡ ಸಿಮ್ಲಾ ಮತ್ತು ಉಫಾ ಒಪ್ಪಂದವನ್ನು ಗೌರವಿಸಬೇಕೆಂದು ಪುನರುಚ್ಚಿಸಿದ್ದೇವೆ ಎಂದು ವಿದೇಶಾಂಗ ವಕ್ತಾರ ಹೇಳಿದ್ದಾರೆ.
ಮಾತುಕತೆಯಲ್ಲಿ ಕಾಶ್ಮೀರ ಸಮಸ್ಯೆಯನ್ನು ತರಬಾರದು ಮತ್ತು ಪಾಕಿಸ್ತಾನದ ಎನ್ ಎಸ್ ಎ ಸರ್ತಾಜ್ ಅಜೀಜ್ ಅವರು ದೆಹಲಿಯಲ್ಲಿ ಕಾಶ್ಮೀರ ಪ್ರತ್ಯೇಕತಾವಾದಿಗಳನ್ನು ಭೇಟಿ ಮಾಡಬಾರದು ಎನ್ನುವ ಭಾರತದ ನಿಲುವನ್ನು ಪಾಕಿಸ್ತಾನ ಒಪ್ಪಿಕೊೞಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಪಾಕಿಸ್ತಾನಕ್ಕೆ ಶನಿವಾರ ಮಧ್ಯರಾತ್ರೆಯ ವರೆಗೆ ಗಡುವು ನೀಡಿದ್ದರು.
ಕಳೆದ ತಿಂಗಳು ರಷ್ಯಾದ ಉಫಾದಲ್ಲಿ ನಡೆದ ಮಾತುಕತೆಯಂತೆ ಎನ್ ಎಸ್ ಎ ಮಾತುಕತೆ ಕೇವಲ ಭಯೋತ್ಪಾದನೆಗೆ ಮಾತ್ರ ಸೀಮಿತವಾಗಬೇಕು. ಹಾಗಿದ್ದರೆ ನಾವು ನಿಮ್ಮನ್ನು ಸ್ವಾಗತಿಸುತ್ತೇವೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದರು.
ಭಾರತದ ಸಚಿವರು ಹೇಳಿದ ಎರಡು ನಿಯಮದಂತೆ ಮಾತುಕತೆ ನಡೆದರೆ, ಎನ್ ಎಸ್ ಎ ಮಟ್ಟದ ಮಾತುಕತೆಯಲ್ಲಿ ಯಾವುದೇ ಉದ್ದೇಶ ಪೂರ್ಣವಾಗುವುದಿಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ.
ಕೆಲವು ಭಯೋತ್ಪಾದನಾ ಘಟನೆಗಳಿಗೆ ಪಾಕಿಸ್ತಾನವೇ ಕಾರಣ ಎನ್ನುವ ಭಾರತದ ಆರೋಪ ನಕಲಿ ಎಂದಾಗಿದೆ. ಈ ಕೆಲವು ಕಾರಣಗಳಿಗಾಗಿ ಮಾತುಕತೆಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಆಪಾದನೆ ಮಾಡಿದೆ.
ಉಫಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಅವರ ನಡುವೆ ನಡೆದ ಮಾತುಕತೆಯಲ್ಲಿ ಆ. 23 ರಂದು ಭಾರತ-ಪಾಕಿಸ್ತಾನದ ರಾಷ್ಟ್ರೀಯ ಭಧ್ರತಾ ಸಲಹೆಗಾರರ ನಡುವೆ ಮಾತುಕತೆ ನಡೆಯಬೇಕೆಂಬ ಒಪ್ಪಂದಕ್ಕೆ ಬರಲಾಗಿತ್ತು.