ಪಾಟ್ನಾ : ಬಿಹಾರಕ್ಕೆ 'ಅಛ್ಚೇ ದಿನ್' ಆಗಮನವಾಗುತ್ತಿದೆ. ಬಿಹಾರದ ಅರ್ರ್ಹಾದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದ ಅಭಿವೃದ್ಧಿಗಾಗಿ ಕೇಂದ್ರದಿಂದ 1.25 ಲಕ್ಷ ಕೋಟಿ ರೂ. ವಿಶೇಷ ಅನುದಾನ ಘೋಷಿಸಿದ್ದಾರೆ.
ಇಂದು ನಾನು ಬಿಹಾರ್ ಗೆ ಅನುದಾನ ಘೋಷಣೆ ಮಾಡುತ್ತೇನೆ. 50,000 ಕೋಟಿ, 60,0000.. 70,000.. 80,000 ? ಎಂದು ಸಭಿಕರನ್ನು ಕೇಳಿದ ಪ್ರಧಾನಿ ಮೋದಿ ನಂತರ ನಾನು 1.25 ಲಕ್ಷ ಕೋಟಿ ರೂ ಭರವಸೆ ನೀಡುತ್ತೇನೆ ಎಂದರು.
ಇದುವರೆಗೆ ಬಿಹಾರಕ್ಕಾಗಿ ಮೀಸಲಿಟ್ಟ ಅನುದಾನ ಎಲ್ಲಾ ಸೇರಿಸಿ ಈಗ ಕೇಂದ್ರ ನಿಧಿಯಲ್ಲಿ 1.65 ಕೋಟಿ ರೂ ಇದೆ ಎಂದು ತಿಳಿಸಿದರು. ಇದಕ್ಕೂ ಮೊದಲು ಪ್ರಧಾನಿ ಮೋದಿ ಅವರು ಬಿಹಾರ್ ಗೆ 50,000 ಕೋಟಿ ರೂ ಘೋಷಿಸಿದ್ದರು.
ರಸ್ತೆ ಉದ್ಘಾಟನೆಯ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಈ ವಿಷಯ ತಿಳಿಸಿದರು. ಇದು ಸರ್ಕಾರೀ ಕಾರ್ಯಕ್ರಮವಾಗಿದ್ದರೂ, ನೆರೆದಿದ್ದ ಸಭಿಕರೆಲ್ಲ ಮೋದಿ ಮಂತ್ರ ಜಪಿಸುತ್ತಿದ್ದು, ಚುನಾವಣಾ ಸಭೆಯಂತೆ ಕಂಡುಬಂದಿತು.
ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ನಮ್ಮ ಮುಖ್ಯಮಂತ್ರಿ ಅಧಿಕಾರಿಗಳ ಹತ್ತಿರ ಬಿಹಾರ ಬಿಮಾರು(ಕಾಯಿಲೆ) ರಾಜ್ಯ ಅಲ್ಲ ಎಂದು ಹೇಳುತ್ತಾರೆ. ಇದು ನಿಜವಾಗಿದ್ದರೆ ನನಗೆ ಅತ್ಯಂತ ಸಂತೋಷವಾಗುತ್ತದೆ. ನೀವೇ ಹೇಳಿ, ಯಾರಾದರೂ ಹುಷಾರಾಗಿದ್ದರೆ ವೈದ್ಯರ ಹತ್ತಿರ ಹೋಗುತ್ತಾರೆಯೇ?. ನನಗೆ ಆಶ್ಚರ್ಯವಾಗುತ್ತದೆ, ಒಂದು ಕಡೆ ಬಿಹಾರ ಬಿಮಾರು ರಾಜ್ಯ ಅಲ್ಲ ಎಂದು ಹೇಳುತ್ತಾರೆ, ಅದೇ ಇನ್ನೊಂದೆಡೆ ಯಾವಾಗಲೂ ಏನಾದರೂ (ಆರ್ಥಿಕ ಸಹಾಯ) ಕೇಳುತ್ತಲೇ ಇರುತ್ತಾರೆ ಎಂದು ಕುಟುಕಿದರು.
ಯಾವಾಗಲೂ ಬಿಹಾರಕ್ಕೆ ವಿಶೇಷ ಸ್ಥಾನಮಾನ ಬೇಕೆಂದು ಬೇಡಿಕೆ ಇಡುತ್ತಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಟ್ವೀಟ್ ಮಾಡಿ, ಮೋದಿಜಿ ಘೋಷಣೆ ಮಾಡಿದ ಅನುದಾನದ ವಿವರ ಕೇಳಲು ಕಾಯುತ್ತೇನೆ. ವಿಶೇಷ ನೆರವು ನಮ್ಮ ಹಕ್ಕು, ಅದು ಸಹಾಯವಲ್ಲ ಎಂಬುದನ್ನು ಒತ್ತಿ ಹೇಳುತ್ತೇನೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿನ ಕಾಂಗ್ರೆಸ್ ನ ಯುಪಿಎ ಸರ್ಕಾರದ ವಿರುದ್ಧ ದಾಳಿ ನಡೆಸಿ, ಹಿಂದುಳಿದ ರಾಜ್ಯವಾದ ಬಿಹಾರಕ್ಕೆ ಕೇವಲ 12,000 ಕೋಟಿ ರೂ ಅನುಮೋದನೆ ನೀಡಿ ಅವಮಾನ ಮಾಡಿದೆ ಎಂದು ಆರೋಪಿಸಿದರು. ಇದನ್ನು ಮಕ್ಕಳನ್ನು ಶಾಂತಗೊಳಿಸಲು ನೀಡುವ ಚಾಕಲೇಟ್ ಅಥವಾ ಬಿಸ್ಕೇಟ್ ಇದ್ದ ಹಾಗೆ ಎಂದು ಹೋಲಿಕೆ ಮಾಡಿದರು.