BW News Bureau : ಭಾನುವಾರ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿಯ ರೈಫಲ್ ಕಸಿದುಕೊಂಡು ಮನಬಂದಂತೆ ಗುಂಡಿನ ದಾಳಿ ನಡೆಸಿದ ವಿಚಾರಣಾಧೀನ ಕೈದಿ ರೌಡಿಶೀಟರ್ ವಿಶ್ವ ಮೃತಪಟ್ಟಿದ್ದಾನೆ.
ರೌಡಿಶೀಟರ್ ವಿಶ್ವ ಎಂಬಾತನನ್ನು ಬಂಧಿಸಿದ್ದ ಪೊಲೀಸರು ಆತನ ಮಾನಸಿಕ ಸ್ಥಿತಿ ಪರೀಕ್ಷೆಗಾಗಿ ಭಾನುವಾರ ನಿಮ್ಹಾನ್ಸ್ಗೆ ಕರೆತಂದಿದ್ದರು. ಶೌಚಕ್ಕೆ ಹೋಗಲು ಪೊಲೀಸರಲ್ಲಿ ಮನವಿ ಮಾಡಿದಾಗ ಸ್ಪಂದಿಸಿದ ಸಿಬ್ಬಂದಿ ಆತನಿಗೆ ಹಾಕಲಾಗಿದ್ದ ಕೈಕೋಳ ತೆಗೆದು ಕಳುಹಿಸಿದ್ದರು. ಶೌಚಾಲಯದಿಂದ ಹೊರಬಂದವನೇ ಬಾಗಿಲಿನಲ್ಲಿ ರೈಫಲ್ ಹಿಡಿದು ನಿಂತಿದ್ದ ಕಾನ್ಸ್ಟೇಬಲ್ ನಿಂದ ಬಲವಂತವಾಗಿ ರೈಫಲ್ ಕಸಿದುಕೊಂಡಿದ್ದಾನೆ. ಅನಿರೀಕ್ಷಿತ ಘಟನೆಯಿಂದ ಆತಂಕಗೊಂಡ ಕಾನ್ಸ್ಟೇಬಲ್ ರಕ್ಷಣೆಗೆ ಕೂಗಿಕೊಂಡಿದ್ದಾನೆ. ಅಲ್ಲೇ ವಾರ್ಡ್ನಲ್ಲಿದ್ದ ಇತರೆ ನಾಲ್ವರು ಪೊಲೀಸರು ಹಾಗೂ ಮೂವರು ರೋಗಿಗಳು ಹೊರಬಂದು ಆತನಿಂದ ರೈಫಲ್ ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಕಾನ್ಸ್ಟೇಬಲ್ ನನ್ನು ಬಲವಾಗಿ ತಳ್ಳಿ, ರೈಫಲ್ನಿಂದ ಗುಂಡು ಹಾರಿಸುವುದಾಗಿ ಬೆದರಿಸಿದ್ದಾನೆ. ಆದರೂ ಪೊಲೀಸರು ಆತನನ್ನು ಹಿಡಿಯಲು ಮುಂದಾದಾಗ ಗೋಡೆಗೆ ಗುಂಡು ಹಾರಿಸಿ ಶೌಚಾಲಯದ ಪಕ್ಕದಲ್ಲೇ ಇದ್ದ ಭದ್ರತಾ ಸಿಬ್ಬಂದಿ ಕೊಠಡಿಗೆ ಹೋಗಿದ್ದಾನೆ. ಇದರಿಂದ ಭಯಗೊಂಡ ಸಿಬ್ಬಂದಿ ಕೂಡಲೇ ಆತನನ್ನು ಭದ್ರತಾ ಕೊಠಡಿಯಲ್ಲಿ ಹಾಕಿ ಹೊರಗಿನಿಂದ ಬೀಗ ಹಾಕಿದ್ದಾರೆ. ಆ ಕೊಠಡಿಯಲ್ಲಿ 303 ಮಾದರಿಯ ನಾಲ್ಕು ರೈಫಲ್ಗಳು ಹಾಗೂ 100ಕ್ಕೂ ಅಧಿಕ ಗುಂಡುಗಳಿದ್ದವು.
ಮಧ್ಯಾಹ್ನ 3.20ರಿಂದ ಪ್ರತಿ 10ರಿಂದ 15 ನಿಮಿಷಕ್ಕೆ ಆತ ಗೋಡೆ, ನೆಲಕ್ಕೆ 23 ಬಾರಿ ಗುಂಡು ಹಾರಿಸಿ ಆತಂಕ ಸೃಷ್ಟಿಸಿದ್ದಾನೆ. ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ಪೊಲೀಸ್ ಆಯುಕ್ತ ಎನ್ ಎಸ್ ಮೇಘರಿಕ್ ಸೇರಿದಂತೆ ಹಿರಿಯ ಅಧಿಕಾರಿಗಳು ದೌಡಾಯಿಸಿದ್ದಾರೆ. ಅಷ್ಟರಲ್ಲಿ ಆಂತರಿಕ ಭದ್ರತಾ ವಿಭಾಗದ ಗರುಡಾ (ಭಯೋತ್ಪಾದಕ ನಿಗ್ರಹ ಪಡೆ) ಪಡೆಯ 29 ಕಮಾಂಡೋಗಳು ಬಂದಿಳಿದಿದ್ದರು.
ಯಾವುದೇ ರೀತಿಯ ಮನವೊಲಿಸುವ ಕಾರ್ಯ ವಿಫಲವಾದ ಹಿನ್ನಲೆಯಲ್ಲಿ ಕಮಾಂಡೋಗಳು ಸಂಜೆ ಭದ್ರತಾ ಸಿಬ್ಬಂದಿಯ ಕೊಠಡಿ ಬಾಗಿಲು ತೆರೆದು ಒಳ ನುಗ್ಗಿ ಆತನನ್ನು ಹಿಡಿಯಲು ಪ್ರಯತ್ನಿಸಿದ್ದರು. ಆದರೆ, ಅವರ ಮೇಲೂ ವಿಶ್ವನಾಥ್ ಗುಂಡು ಹಾರಿಸಲು ಮುಂದಾದಾಗ ಕಮಾಂಡೋಗಳು ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಆಗ ವಿಶ್ವನಾಥ್ನ ಹಣೆ ಹಾಗೂ ಕುತ್ತಿಗೆ ಭಾಗಕ್ಕೆ ಗುಂಡು ಹೊಕ್ಕಿದ್ದು, ಆತ ನೆಲಕ್ಕುರುಳಿದ್ದಾನೆ. ಕೂಡಲೇ ಆತನನ್ನು ಚಿಕಿತ್ಸೆಗೆ ತುರ್ತು ಚಿಕಿತ್ಸಾ ಘಟಕಕ್ಕೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.