ಮುಂಬೈ : ಕಳೆದ ಒಂಭತ್ತು ತಿಂಗಳುಗಳಿಂದ ಸತತವಾಗಿ ಕೆಳಗಿಳಿಯುತ್ತಿರುವ ಹಣದುಬ್ಬರ ಜುಲೈ ತಿಂಗಳಲ್ಲಿ ಐತಿಹಾಸಿಕ ಕೆಳಮಟ್ಟವನ್ನು ತಲುಪಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ (ಆರ್.ಬಿ.ಐ) ಸದ್ಯದಲ್ಲೇ ಬಡ್ಡಿ ದರವನ್ನು ಇಳಿಸುವ ಬಗ್ಗೆ ನಿರ್ಧಾರ ಕೈಗೊೞಬಹುದು ಎಂಬ ನಿರೀಕ್ಷೆ ಗರಿಗೆದರಿದೆ.
ತರಕಾರಿ ಮತ್ತು ಇಂಧನದ ಬೆಲೆ ಸತತವಾಗಿ ಇಳಿಯುತ್ತಿರುವುದು ಹಣದುಬ್ಬರ ಶೇ. (-)4.05ಕ್ಕೆ ಇಳಿಯಲು ಕಾರಣವಾಗಿದೆ. ಈ ಕಾರಣದಿಂದಾಗಿ ಆರ್.ಬಿ.ಐ ಸೆಪ್ಟೆಂಬರ್ 29ರ ತನ್ನ ನೀತಿ ಸಭೆಗೂ ಮುನ್ನ ಬಡ್ದಿ ದರ ಇಳಿಕೆ ಮಾಡಬಹುದು ಎನ್ನಲಾಗುತ್ತಿದೆ.
ಸಗಟು ದರ ಸೂಚ್ಯಂಕ (ಸಿಪಿಐ) ಚಿಲ್ಲರೆ ದರ ಸೂಚ್ಯಂಕವನ್ನು ಆಧರಿಸಿದ್ದು, ಇದು ಜುಲೈ ತಿಂಗಳಲ್ಲಿ ದಾಖಲೆ ಶೇ.3.78 ಕ್ಕೆ ಕುಸಿದಿದೆ.
ಸರಕಾರದ ಮಾಹಿತಿ ಪ್ರಕಾರ ಜೂನ್ ನಲ್ಲಿ ಸಗಟು ದರ ಸೂಚ್ಯಂಕ (-)2.40 ಇತ್ತು. ಇದು 2014 ನವೆಂಬರ್ ನಿಂದ ಸತತವಾಗಿ ಇಳಿಮುಖ ಕಾಣುತ್ತಿದೆ. ಜುಲೈ 2014ರಲ್ಲಿ ಸಿ.ಪಿ.ಐ ಸೂಚ್ಯಂಕ ಶೇ.5.41 ಇತ್ತು.
ಕಳೆದ ಆಗಸ್ಟ್ 4ರಂದು ವಿತ್ತ ನೀತಿಯನ್ನು ಪ್ರಕಟಿಸಿ ಮಾತನಾಡುತ್ತ ಆರ್.ಬಿ.ಐ ಗವರ್ನರ್ ರಘುರಾಮ್ ರಾಜನ್, ಒಟ್ಟಾರೆ ಆರ್ಥಿಕ ಪರಿಸ್ಥಿತಿಯನ್ನು ಅಧರಿಸಿ, ಮುಂದಿನ ನೀತಿ ಸಭೆಗೂ ಮುಂಚೆ ಬಡ್ಡಿ ದರವನ್ನು ಕಡಿತಗೊಳಿಸುವ ಸಾಧ್ಯತೆ ಇದೆ ಎಂದಿದ್ದರು.
ಆರ್.ಬಿ.ಐ ಸಾಮಾನ್ಯವಾಗಿ ತನ್ನ ನೀತಿ ನಿರ್ಧಾರಕ್ಕೆ ಗ್ರಾಹಕ ದರ ಹಣದುಬ್ಬರವನ್ನು ಗಣನೆಗೆ ತೆಗೆದುಕೊೞುತ್ತದೆ.
ಕಳೆದ ತಿಂಗಳು ಆಹಾರ ಅಕ್ಕಿ, ತರಕಾರಿ, ಹಣ್ಣು ಮುಂತಾದ ಆಹಾರ ಪದಾರ್ಥಗಳ ಬೆಲೆಗಳು ಸಗಟು ಮಾರುಕಟ್ಟೆಗಳಲ್ಲಿ ಕುಸಿತ ಕಂಡಿತ್ತು.
ಈ ವರದಿಗೆ ಶೇರು ಮಾರುಕಟ್ಟೆ ಧನಾತ್ಮಕವಾಗಿ ಸ್ಪಂದಿಸಿದ್ದು, ಮುಂಬೈ ಸೂಚ್ಯಂಕ 517.78 ಅಂಕ ಏರಿಕೆ ಕಂಡಿತು. ದಿನದ ವಹಿವಾಟು ಅಂತ್ಯದ ವೇಳೆಗೆ ಬಿ.ಎಸ್.ಸಿ. ಮುಂಬೈ ಸೂಚ್ಯಂಕ 28,067.31ಕ್ಕೆ ಏರಿತ್ತು. ನಿಫ್ಟಿ 162.70 ಅಂಕಗಳ ಏರಿಕೆಯಾಗಿ 8,518.55ರಲ್ಲಿ ಕೊನೆಗೊಂಡಿತು.