ಲಖ್ನೌ : ಮುಂಗಾರು ಅಧಿವೇಶನ ಕಾಂಗ್ರೆಸ್ ಸದಸ್ಯರ ನಿರಂತರ ಪ್ರತಿಭಟನೆಯಿಂದಾಗಿ ಕಲಾಪ ನಡೆಸದೆ ನೀರುಪಾಲಾದ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದ ಕೇಂದ್ರ್ ಸರಕಾರ, ಸರಕು ಮತ್ತು ಸೇವಾ ತೆರಿಗೆ ಮಸೂದೆಗೆ ನಿಶ್ಚಿತವಾಗಿ ಅನುಮೋದನೆ ಪಡೆದೇ ಪಡೆಯುತ್ತೇವೆ ಎಂದು ಹೇಳಿದೆ.
ಗುರುವಾರ ಲೋಕಸಭೆ ಹಾಗೂ ರಾಜ್ಯಸಭೆ ಅನಿರ್ಧಿಷ್ಠಾವಧಿಗೆ ಮುಂದೂಡಲ್ಪಟ್ಟ ನಂತರ ಅಧಿವೇಶನಕ್ಕೆ ನಿರಂತರ ಅಡ್ದಿಪಡಿಸಿದ ಕಾಂಗ್ರೆಸ್ ಧೋರಣೆ ಬಗ್ಗೆ ಜನರಿಗೆ ಮನದಟ್ಟು ಮಾಡುವ ಕಾರ್ಯಕ್ರಮವನ್ನು ಸರಕಾರ ಹಮ್ಮಿಕೊಂಡಿದೆ. ಅಧಿವೇಶನ ಸಂಪೂರ್ಣ ವಿಫಲವಾಗಲು ಕಾರಣವಾದ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಪ್ರಕಾಶ್ ಜಾವ್ಡೇಕರ್, ಜಿ.ಎಸ್.ಟಿ. ಮಸೂದೆಯನ್ನು ನಿಸ್ಸಂದೇಹವಾಗಿ ಅಂಗೀಕಾರ ಮಾಡಿಯೇ ಮಾಡಿಸುತ್ತೇವೆ ಎಂದು ಹೇಳಿದ್ದಾರೆ.
'ನಾನು ನಿಮಗೆ ಹೇಳುತ್ತಿದ್ದೇನೆ, ಜಿ.ಎಸ್.ಟಿ. ಮಸೂದೆ ಖಂಡಿತವಾಗಿ ಪಾಸ್ ಆಗುತ್ತದೆ. ನೀವಿದನ್ನು ಬರೆದುಕೊೞಿ. ರಾಜ್ಯಸಭೆಯಲ್ಲೂ (ಬಿಜೆಪಿಗೆ ರಾಜ್ಯಸಭೆಯಲ್ಲಿ ಬಹುಮತವಿಲ್ಲ) ಸಹ ಜಿ.ಎಸ್.ಟಿ. ಗೆ ನಮಗೆ ಬಹುಮತವಿದೆ' ಎಂದು ಜಾವ್ಡೇಕರ್ ಮಾಧ್ಯಮ ವರದಿಗಾರೊಂದಿಗೆ ಮಾತನಾಡುತ್ತ ಹೇಳಿದರು.
ಮಸೂದೆ ಪಾಸ್ ಮಾಡುವ ಸಲುವಾಗಿ ವಿಶೇಷ ಸಂಸತ್ತಿನ ಅಧಿವೇಶನವನ್ನು ಕರೆಯುವ ಸಾಧ್ಯತೆಯ ಸುಳಿವನ್ನೂ ಜಾವ್ಡೇಕರ್ ಈ ಸಂದರ್ಭದಲ್ಲಿ ಕೊಟ್ಟರು.