ನವದೆಹಲಿ : ಕಾಂಗ್ರೆಸ್ ಪ್ರತಿಭಟನೆಯಿಂದ ಮುಂಗಾರು ಅಧಿವೇಶನದಲ್ಲಿ ಯಾವುದೇ ಮಸೂದೆಯನ್ನು ಮಂಡಿಸಲೂ ಸಾಧ್ಯವಾಗದ ಹಿನ್ನಲೆಯಲ್ಲಿ, ಬಿಹಾರ ವಿಧಾನಸಭಾ ಚುನಾವಣೆಗೂ ಮೊದಲು ಸರಕು ಮತ್ತು ಸೇವಾ ತೆರಿಗೆ ಮಸೂದೆ (ಜಿ ಎಸ್ ಟಿ) ಅನುಮೋದನೆ ಪಡೆಯಲು ಸೆಪ್ಟಂಬರ್ ನಲ್ಲಿ ಕೇಂದ್ರ ಸರ್ಕಾರ ಎರಡು ದಿನಗಳ ಸಂಸತ್ ಅಧಿವೇಶನ ಕರೆಯುವ ಸಾಧ್ಯತೆ ಇದೆ.
ವ್ಯಾಪಾರ ವಹಿವಾಟು ಸುಲಭಗೊಳಿಸಲು ಮತ್ತು ಆದಾಯ ವೃದ್ಧಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಜಿ.ಎಸ್.ಟಿ ಮಸೂದೆ ತುಂಬಾ ಪ್ರಾಮುಖ್ಯತೆ ಪಡೆದಿದೆ.
ಸರ್ಕಾರದ ಈ ಆಲೋಚನೆಗಳನ್ನು ಸೂಚಿಸುತ್ತ, ಮಾತನಾಡಿದ ವಿತ್ತ ಸಚಿವ ಅರುಣ್ ಜೇಟ್ಲಿ, ಸಂಸತ್ತಿನ ಸಭೆಯನ್ನು ಮುಂದಕ್ಕೆ ಹಾಕಬಾರದು, ನವಂಬರ್ ನಲ್ಲಿ ಪ್ರಾರಂಭವಾಗುವ ಚಳಿಗಾಲದ ಅಧಿವೇಶನಕ್ಕೂ ಮೊದಲು ಆದಷ್ಟು ಬೇಗ ಎರಡೂ ಸದನಗಳು ಸೇರಬೇಕೆಂದು ಗುರುವಾರ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ನಿರ್ಧರಿಸಿದೆ ಎಂದು ಹೇಳಿದರು.
ಸರ್ಕಾರದ ಮುಂದಿರುವ ಆಯ್ಕೆಗಳ ಕುರಿತು ಚರ್ಚೆ ನಡೆಸಿದ ಸಂಪುಟ ಸಮಿತಿ, ಕಾಂಗ್ರೆಸ್ ಹೊರತುಪಡಿಸಿ, ರಾಜ್ಯ ಸಭೆಯಲ್ಲಿ ಸಾಕಷ್ಟು ಬೆಂಬಲವಿದ್ದರೆ ಅಧಿವೇಶನ ಕರೆಯಬಹುದೆಂದು ತೀರ್ಮಾನಿಸಿತು. ಸರಕು ಮತ್ತು ಸೇವಾ ತೆರಿಗೆ ಮಸೂದೆ ಸಾಂವಿಧಾನಿಕ ತಿದ್ದುಪಡಿಯಾದ್ದರಿಂದ, ರಾಜ್ಯಸಭೆಯಲ್ಲಿ ಅನುಮೋದನೆಗೆ ಮೂರನೇ ಎರಡರಷ್ಟು ಬಹುಮತ ಬೇಕಾಗುತ್ತದೆ. ಆದರ ಬಿಜೆಪಿಗೆ ರಾಜ್ಯಸಭೆಯಲ್ಲಿ ಬಹುಮತ ಇಲ್ಲದ ಕಾರಣ ಎಲ್ಲಾ ಪ್ರಮುಖ ವಿಪಕ್ಷಗಳ ಬೆಂಬಲ ಬೇಕಾಗುತ್ತದೆ ಅಥವಾ ಕಾಂಗ್ರೆಸ್ ಸದಸ್ಯರು ಗೈರುಹಾಜರಾಗಬೇಕಾಗುತ್ತದೆ.
ಈ ಕಾನೂನಿಗೆ ಶೇಕಡಾ 50ರಷ್ಟು ರಾಜ್ಯ ಸರ್ಕಾರಗಳ ಅಧಿವೇಶನದಲ್ಲಿ ಅನುಮೋದನೆ ದೊರೆಯಬೇಕು ಹಾಗೂ ಕೇಂದ್ರ ಮತ್ತು ಎರಡು ರಾಜ್ಯ ಸರ್ಕಾರಗಳ ಒಟ್ಟು ಮೂರು ಅನುವು ಶಾಸನಗಳಿಂದ ಅಂಗೀಕಾರವಾಗಬೇಕು. ಆದ್ದರಿಂದ ಆದಷ್ಟು ಬೇಗ ಜಿ.ಎಸ್.ಟಿ ಅನುಮೋದನೆಯ ಅಗತ್ಯ ಇದೆ ಎಂದು ಜೇಟ್ಲಿ ತಿಳಿಸಿದರು.
'ಕಾರ್ಯವಿಧಾನಗಳ ದೃಷ್ಟಿಯಿಂದ ನೋಡಿದರೆ, ಸಂಸತ್ತಿನಲ್ಲಿ ಅನುಮೋದನೆ ವಿಳಂಬವಾದಷ್ಟು, ಮುಂದಿನ ವರ್ಷದಿಂದ ಜಾರಿಗೆ ತರಲು ನಿರ್ಧರಿಸಿರುವ ತೆರಿಗೆ ಸುಧಾರಣೆಯ ಮೇಲೆ ಪರಿಣಾಮ ಬೀರಲಿದೆ. ನಾವು ನಿರ್ಧರಿಸಿದ್ದಂತೆ, ಏಪ್ರಿಲ್ 1, 2016 ರಿಂದ ಜಿ.ಎಸ್.ಟಿ ಅನ್ನು ಜಾರಿಗೆ ತರುವ ಪ್ರಯತ್ನವಾಗಬೇಕು ಎಂದು ನಾನು ಸ್ಪಷ್ಟಪಡಿಸುತ್ತೇನೆ' ಎಂದು ಅರುಣ್ ಜೇಟ್ಲಿ ಹೇಳಿದರು.