ನವದೆಹಲಿ : ಮುಂಗಾರು ಅಧಿವೇಶನ ಆರಂಭವಾದ ದಿನದಿಂದ ಕಲಾಪಕ್ಕೆ ನಿರಂತರವಾಗಿ ಅಡ್ಡಿಪಡಿಸಿದ ಕಾಂಗ್ರೆಸ್ ಸದಸ್ಯರು ಕೊನೆಗೂ ದೇಶದ ಪ್ರಗತಿಗೆ ಅವಶ್ಯಕವಾದ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಅಂಗೀಕಾರವಾಗದಂತೆ ನೋಡಿಕೊಂಡರು.
ಪ್ರಜಾಪ್ರಭುತ್ವದ ಹೆಸರಲ್ಲಿ ತೆರಿಗೆದಾರರ ನೂರಾರು ಕೋಟಿ ರೂ. ವ್ಯರ್ಥವಾದರೂ ಕ್ಯಾರೇ ಅನ್ನದ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ತಮ್ಮ ರಾಜಕೀಯ ಉದ್ದೇಶಗಳಿಗೆ ದೇಶದ ಅಭಿವೃದ್ಧಿಯನ್ನೇ ಒತ್ತೆಯಾಗಿಟ್ಟು ಸಂಸತ್ ತನ್ನ ಕಾರ್ಯ ನಿರ್ವಹಿಸದಂತೆ ಮಾಡುವಲ್ಲಿ ಯಶಸ್ವಿಯಾದವು.
ಮುಂಗಾರು ಅಧಿವೇಶನದ ಕೊನೆಯ ದಿನವಾದ ಗುರುವಾರ ಸಂಸತ್ತು ಅನಿರ್ಧಿಷ್ಠಾವಧಿಗೆ ಮುಂದೂಡಲ್ಪಟ್ಟಿತು. ಅಲ್ಲಿಗೆ ಬಹಳ ನಿರೀಕ್ಷೆಯಿಂದ ಕಾದಿದ್ದ ಜಿ.ಎಸ್.ಟಿ. (ಸರಕು ಮತ್ತು ಸೇವಾ ತೆರಿಗೆ) ಮಸೂದೆ ಅಂಗೀಕಾರವಾಗುವ ಅವಕಾಶ ತಪ್ಪಿತು.
ಸುಷ್ಮಾ ಸ್ವರಾಜ್, ವಸುಂಧರ ರಾಜೇ ಹಾಗೂ ಶಿವರಾಜ್ ಸಿಂಗ್ ಚೌಹಾನ್ ಅವರುಗಳ ರಾಜೀನಾಮೆಗೆ ಒತ್ತಾಯಿಸಿ ಕಾಂಗೆಸ್ ಸಂಸದರು ನಡೆಸಿದ ಪ್ರತಿಭಟನೆಗೆ ಸರಕಾರ ಸೊಪ್ಪು ಹಾಕಲಿಲ್ಲ. ಪ್ರತಿಭಟನೆ ತೀವ್ರ ಸ್ವರೂಪ ತೆಗೆದುಕೊಂಡು ಸಂಸತ್ತಿನ ಒಳಗೆ ಅಶಿಸ್ತು ಮೆರೆದ 25 ಕಾಂಗ್ರೆಸ್ ಸದಸ್ಯರನ್ನು ಸ್ಪೀಕರ್ ಸುಮಿತ್ರಾ ಮಹಾಜನ್ 5 ದಿನಗಳಿಗೆ ಅಮಾನತ್ತು ಮಾಡಿದ್ದರು. ಪ್ರತಿಭಟನೆ ಇನ್ನೂ ಮುಂದುವರಿದು ಯಾವುದೇ ಕಲಾಪವೂ ನಡೆಯದಂತೆ ಕಾಂಗ್ರೆಸ್ ನಿರಂತರವಾಗಿ ಅಡ್ಡಿಪಡಿಸಿತು.
ಏತನ್ಮಧ್ಯೆ ಈಗಾಗಲೇ ಲೋಕಸಭೆಯಲ್ಲಿ ಪಾಸಾಗಿದ್ದ ಜಿ.ಎಸ್.ಟಿ. ಮಸೂದೆಯನ್ನು ಸರಕಾರ ಮಂಗಳವಾರ ರಾಜ್ಯಸಭೆಯಲ್ಲಿ ಮಂಡನೆ ಮಾಡಿತು. ಆದರೆ ಕಾಂಗ್ರೆಸ್ ಸದಸ್ಯರ ತೀವ್ರ ಕೋಲಾಹಲದಿಂದ ಮಸೂದೆಯ ಮೇಲೆ ಚರ್ಚೆಯಾಗಲೂ ಅವಕಾಶವಾಗಲಿಲ್ಲ. ಗುರುವಾರ ಅಧಿವೇಶನದ ಕೊನೆಯ ದಿನವಾಗಿದ್ದು, ಲೋಕಸಭೆ ಹಾಗೂ ರಾಜ್ಯಸಭೆಯನ್ನು ಅನಿರ್ಧಿಷ್ಠಾವಧಿಗೆ ಮುಂದೂಡಲಾಯಿತು.
ಕಾಂಗ್ರೆಸ್ ಸದಸ್ಯರ ನಿರಂತರ ಅಡ್ದಿಪಡಿಸುವಿಕೆ ವಿಪಕ್ಷದ ನಾಯಕತ್ವದ ಬಗ್ಗೆ ಜನರಲ್ಲಿ, ಮುಖ್ಯವಾಗಿ ಬಹುತೇಕ ಎಲ್ಲಾ ಕೈಗಾರಿಕೋದ್ಯಮಿಗಳಲ್ಲಿ ತೀವ್ರ ಅಸಮಾಧಾನ ಉಂಟುಮಾಡಿದೆ. ದೇಶದ, ಆರ್ಥಿಕ ಪ್ರಗತಿಗೆ ಕ್ರಾಂತಿಕಾರಿಯಾಗಬಲ್ಲ ಜಿ.ಎಸ್.ಟಿ. ಮಸೂದೆ ಕೇವಲ 50-60 ಸಂಸದರ ರಾಜಕೀಯ ಉದ್ದೇಶಗಳಿಗೆ ಬಲಿಯಾಗಿರುವುದು ಒಂದು ವಿಪರ್ಯಾಸ.
ಕಾಂಗ್ರೆಸ್ ಸಂಸದರ ವರ್ತನೆ ದೇಶಾದ್ಯಂತ ತೀವ್ರ ಟೀಕೆಗೆ ಒಳಗಾಗಿದ್ದು, ಇದು ಯುವ ಜನರಲ್ಲಿ ಪಾರ್ಲಿಮೆಂಟ್ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಳ್ಳುವ ಹಾಗೆ ಮಾಡಬಹುದು ಎಂದು ಅನೇಕ ಹಿರಿಯರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಎಂಬ ಗರಿಮೆಗೆ ಪಾತ್ರವಾದ ಭಾರತದ ಗೌರವಕ್ಕೆ ಈ ಘಟನೆಗಳು ಕುಂದುಂಟುಮಾಡಿರುವುದು ಅತ್ಯಂತ ಬೇಸರದ ವಿಚಾರ.
ಈ ಮಧ್ಯೆ ಗುರುವಾರ ಪೂರ್ವಾಹ್ನ್ನ ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಸಭೆ ನಡೆಸಿ ಸರಕಾರದ ಮುಂದಿನ ನಡೆಯ ಬಗ್ಗೆ ಚರ್ಚಿಸಿತು. ಈ ಸಭೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಗೃಹ ಸಚಿವ ರಾಜನಾಥ್ ಸಿಂಗ್, ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಮುಂತಾದವರು ಭಾಗವಹಿಸಿದ್ದರು.