ನವದೆಹಲಿ : ನರೇಂದ್ರ ಮೋದಿ ಸರಕಾರ ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ.) ಮಸೂದೆಯನ್ನು ಮಂಗಳವಾರ ರಾಜ್ಯಸಭೆಯಲ್ಲಿ ಮಂಡಿಸಿದೆ. ಲೋಕಸಭೆಯಲ್ಲಿ ಈ ಮಸೂದೆ ಈಗಾಗಲೇ ಒಪ್ಪಿಗೆ ಪಡೆದಿದ್ದು, ರಾಜ್ಯಸಭೆಯಲ್ಲಿ ವಿಪಕ್ಷ ಕಾಂಗ್ರೆಸ್ ಸಂಸದರ ನಿರಂತರ ಪ್ರತಿಭಟನೆಯಿಂದ ಈವರೆಗೆ ಮಸೂದೆ ಮಂಡನೆಗೆ ಅವಕಾಶವಾಗಿರಲಿಲ್ಲ.
ಮಂಗಳವಾರ ಕಾಂಗ್ರೆಸ್ ಸಂಸದರ ವಿರೋಧ, ಗದ್ದಲದ ನಡುವೆಯೂ ಬಿಜೆಪಿ ಸರಕಾರ್ ಮಸೂದೆಯನ್ನು ಮಂಡಿಸಿತು. ಮಸೂದೆ ಮಂಡನೆಯಾದ ಕೂಡಲೇ ಕಾಂಗ್ರೆಸ್ ಸದಸ್ಯರ ಕೋಲಾಹಲದಿಂಡಾಗಿ ರಾಜ್ಯಸಭೆ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ಮಸೂದೆ ಮಂಡನೆಗೆ ಕಾಲಾವಕಾಶ ಕೊಡಲಿಲ್ಲ ಎಂಬ ನೆಪವೊಡ್ಡಿ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು.
ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, 'ದೇಶದ ಪ್ರಗತಿಯನ್ನು ತಡೆಯುವುದಕ್ಕೋಸ್ಕರ ಕಾಂಗ್ರೆಸ್ ಸದಸ್ಯರು ಜಿ.ಎಸ್.ಟಿ. ಮಸೂದೆಯನ್ನು ವಿರೋಧಿಸುತ್ತಿದ್ದಾರೆ' ಎಂದರು.
'ಎಲ್ಲಾ ರಾಜ್ಯಗಳೊಂದಿಗೆ ಇದರಲ್ಲಿರುವ ವಿಷಯಗಳ ಬಗ್ಗೆ ಮೋದಿ ನೇತೃತ್ವದ ಎನ್.ಡಿ.ಎ ಸರಕಾರ ಚರ್ಚಿಸಿ ಒಮ್ಮತ ಮೂಡಿದ ಮೇಲೆಯಷ್ಟೆ ಈ ಮಸೂದೆಯನ್ನು ತರಲಾಗಿದೆ' ಎಂದು ಹೇಳಿದ ಜೇಟ್ಲಿ, ದುರದೃಷ್ಟವಶಾತ್ ಕಾಂಗ್ರೆಸ್ ಸ್ವಯಂ ವಿನಾಶಕಾರಿ ಪಥದಲ್ಲಿದೆ' ಎಂದು ಹೇಳಿದರು.
ಸರಕು ಮತ್ತು ಸೇವಾ ತೆರಿಗೆ ಕಾಯ್ದೆ 1947ರ ನಂತರದ ಬಹಳ ದೊಡ್ಡ ಆದಾಯ ಆಧರಿತ ಆಮೂಲಾಗ್ರ ಬದಲಾವಣೆಯ ಕಾಯ್ದೆ ಎನ್ನಲಾಗಿದೆ.
ಈ ಕಾಯ್ದೆಯನ್ನು ಬೆಂಬಲಿಸುವವರು ಇದು ದೇಶದ ಆರ್ಥಿಕ ಪ್ರಗತಿಗೆ ಕನಿಷ್ಠ ಎರಡು ಶೇ. ದಷ್ಟು ಹೆಚ್ಚಳ ತರಲಿದೆ ಎನ್ನುತ್ತಾರೆ. ಅದ್ದರಿಂದ ಮೋದಿ ಸರಕಾರ ಈ ಕಾಯ್ದೆಯ ಶೀಘ್ರ ಜ್ಯಾರಿಗೆ ಅತ್ಯಂತ ಉತ್ಸುಕವಾಗಿದೆ.
ಹಣಕಾಸು ರಾಜ್ಯ ಸಚಿವ ಜಯಂತ್ ಸಿನ್ಹಾ ಅವರು 'ಸಂಸತ್ತು ಕನಿಷ್ಠ ಈ ಮಹತ್ವದ ಮಸೂದೆಯನ್ನು ಪಾಸ್ ಮಾಡುವ ಸಲುವಾಗಿ ಒಂದು ದಿನಕ್ಕಾದರೂ ನಡೆಯಲು ಅವಕಾಶ ಮಾಡಿ' ಎಂದು ಕಾಂಗ್ರೆಸ್ ಸದಸ್ಯರಿಗೆ ವಿನಂತಿ ಮಾಡುತ್ತ, ಕಾಂಗ್ರೆಸ್ ದೇಶದ ಆರ್ಥಿಕ ಪ್ರಗತಿಯನ್ನು ತಡೆಯುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.
'ಈ ಮಸೂದೆಯನ್ನು ಯಾವುದೇ ರೀತಿಯಲ್ಲಾದರೂ ಪಾಸ್ ಮಾಡಲು ನಾವು ಪ್ರಯತ್ನಿಸಲೇಬೇಕು. ಇದು (ಕಾಂಗೆಸ್ ಸಂಸದರ ವಿರೋಧ) ಅತ್ಯಂತ ಅಬದ್ಧ' ಎಂದರು.
ಮೂಲತಃ ಕಾಂಗ್ರೆಸ್ ಸರಕಾರದ ಕೂಸಾದ ಜಿ.ಎಸ್.ಟಿ ಮಸೂದೆಯನ್ನು ಬಿಜೆಪಿ ಸರಕಾರ ಜಾರಿಗೆ ತರಲು ಕಾಂಗ್ರೆಸ್ ವಿರೋಧಿಸುತ್ತಿದೆ. ರಾಜ್ಯಗಳ ಬೆಂಬಲ ಪಡೆಯಲು ಈ ಮಸೂದೆಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಕಾಂಗ್ರೆಸ್ ಅರೋಪಿಸುತ್ತಿದೆ.
ದೇಶದ ಆರ್ಥಿಕ ಪ್ರಗತಿಗೆ ಅತ್ಯಂತ ಅಗತ್ಯವಾದ ಈ ಮಸೂದೆಯನ್ನು 2016ರ ವಿತ್ತ ವರ್ಷದಲ್ಲಿ ಜಾರಿಗೆ ತರುವ ಗುರಿಯನ್ನು ಮೋದಿ ಸರಕಾರ ಹೊಂದಿದ್ದು, ಇದರಲ್ಲಿ ವಿಳಂಬವಾದರೆ ವಿತ್ತ ಮಾರುಕಟ್ಟೇಯ ಮೇಲೆ ಋಣಾತ್ಮಕ ಪರಿಣಾಮವಾಗಬಹುದು ಹಾಗೂ ಇದರಿಂದ ದೇಶದ ಆರ್ಥಿಕ ಚೇತರಿಕೆ ಇನ್ನಷ್ಟು ವಿಳಂಬವಾಗಬಹುದು ಎಂದು ಡಿ.ಬಿ.ಎಸ್ ಬ್ಯಾಂಕ್ ತನ್ನ ಸಂಶೋಧನಾ ವರದಿಯಲ್ಲಿ ತಿಳಿಸಿದೆ.
ಆದರೂ ಭಾರತ ವಿಶ್ವ ಆರ್ಥಿಕತೆಯಲ್ಲೇ ಒಂದು ಅತ್ಯಂತ ಪ್ರಕಾಶಮಾನವಾದ ಬಿಂದು ಎಂದು ಬಂಡವಾಳ ಹೂಡಿಕೆದಾರರು ಅಭಿಪ್ರಾಯಪಡುತ್ತಾರೆ. ಜಿ.ಎಸ್.ಟಿ ಮಸೂದೆ ಜಾರಿಗೆ ಬಂದರೆ ಬಂಡವಾಳ ಹೂಡಿಕೆಗೆ ಇನ್ನಷ್ಟು ಉತ್ತೇಜನ ನೀಡಿದಂತಾಗುತ್ತದೆ.
ರಾಜ್ಯಸಭೆಯಲ್ಲಿ ಈ ಮಸೂದೆ ಒಪ್ಪಿಗೆ ಪಡೆಯಲು ಆಢಳಿತಾರೂಢ ಬಿಜೆಪಿ ಸರಕಾರಕ್ಕೆ ಮೂರನೇ ಎರಡು ನಹುಮತ ಅಗತ್ಯವಿದೆ. ಆದರ ಕೊರತೆಯಿರುವ ಕಾರಣ ಬಿಜೆಪಿಗೆ ಎಲ್ಲಾ ಪ್ರಮುಖ ವಿಪಕ್ಷಗಳ ಬೆಂಬಲ ಬೇಕಾಗುತ್ತದೆ ಅಥವಾ ಕಾಂಗ್ರೆಸ್ ಸದಸ್ಯರು ಗೈರುಹಾಜರಾಗಬೇಕಾಗುತ್ತದೆ.
ಕಾಂಗ್ರೆಸ್ ವಿರೋಧವನ್ನು ದೇಶಾದ್ಯಂತ ಎಲ್ಲ ಪ್ರಮುಖ ಕೈಗಾರಿಕೋದ್ಯಮಿಗಳು ಖಂಡಿಸಿದ್ದಾರೆ. ಇದು ದೇಶದ ಆರ್ಥಿಕ ಪ್ರಗತಿಗೆ ಮಾರಕ ಎಂದು ಇಂಡಿಯಾ ಐ.ಎನ್.ಸಿ ಹೇಳಿದೆ.
ಮಸೂದೆಗೆ ಅಂಕಿತ ಬೀಳುತ್ತದೆಯೇ, ಇಲ್ಲವೇ ಎಂದುದು ಕುತೂಹಲದ ಹಾಗೂ ಆತಂಕದ ವಿಷಯವಾಗಿದೆ.