ನವದೆಹಲಿ : 'ಪ್ರತಿಭಟನೆ ನಿಲ್ಲಿಸಿ, ಇಲ್ಲವಾದರೆ ನಿಮ್ಮ ಜೊತೆ ನಾವಿಲ್ಲ' - ಇದು ಕಾಂಗ್ರೆಸ್ ಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ನೀಡಿದ ಎಚ್ಚರಿಕೆ.
ಮುಂಗಾರು ಅಧಿವೇಶನ ಆರಂಬವಾದಂದಿನಿಂದ ಒಂದೇ ಒಂದು ದಿನ ಕಲಾಪ ನಡೆಸಲು ಬಿಡದೆ ನೂರಾರು ಕೋಟಿ ರೂ. ತೆರಿಗೆದಾರರ ಹಣ ಪೋಲು ಮಾಡುವ ಮತ್ತು ದೇಶದ ಪ್ರಗತಿಗೆ ಅತ್ಯಗತ್ಯವಾದ ಜಿ.ಎಸ್.ಟಿ, ಭೂ ಕಾಯ್ದೆ ಮುಂತಾದ ಮಸೂದೆಗಳ ಬಗ್ಗೆ ಚರ್ಚೆ ನಡೆಸಲೂ ಬಿಡದೆ ಕ್ಷುಲ್ಲಕ ಕಾರಣಕ್ಕಾಗಿ ಪ್ರತಿಭಟನೆ ಮಾಡುತ್ತ ಕಾಲಹರಣ ಮಾಡುತ್ತಿರುವ ಕಾಂಗ್ರೆಸ್ ಸಂಸದರ ವರ್ತನೆಗೆ ದೇಶಾದ್ಯಂತ ತೀವ್ರ ಟೀಕೆ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ಮಿತ್ರ ಪಕ್ಷವಾದ ಎಸ್.ಪಿ ಕೊನೆಗೂ ಎಚ್ಚರಗೊಂಡಿದೆ.
ಮುಂಗಾರು ಅಧಿವೇಶನ ಕೊನೆಗೊಳ್ಳಲು ಇನ್ನು ನಾಲ್ಕು ದಿನಗಳು ಮಾತ್ರ ಬಾಕಿ ಇದ್ದು, ಸೋಮವಾರವೂ ಪಾರ್ಲಿಮೆಂಟ್ ನಲ್ಲಿ ತನ್ನ ಪ್ರತಿಭಟನೆ ಮುಂದುವರಿಸಿ ಕಲಾಪಗಳಿಗೆ ಅಡ್ಡಿ ಪಡಿಸುತ್ತಿರುವ ಕಾಂಗ್ರೆಸ್ಸಿಗೆ ನೀಡಿದ ಸ್ಪಷ್ಟ ಸಂದೇಶದಲ್ಲಿ ಮುಲಾಯಂ ಸಿಂಗ್, 'ಪ್ರತಿಭಟನೆ ನಿಲ್ಲಿಸಿ, ಇದು ಸಾಕಷ್ಟಾಯಿತು. ಕಲಾಪಕ್ಕೆ ಅಡ್ಡಿಪಡಿಸಿದರೆ ನಿಮಗೆ ನಮ್ಮ ಬೆಂಬಲ ಇಲ್ಲ. ಇಲ್ಲವಾದರೆ ನಿಮ್ಮಷ್ಟಕ್ಕೆ ನೀವು ಇರಬೇಕಾಗುತ್ತದೆ' ಎಂದು ಹೇಳಿದ್ದಾರೆ.
ಅಧಿವೇಶನ ಆರಂಭವಾದ ದಿನದಿಂದಲೂ ಕಲಾಪಕ್ಕೆ ಅಡ್ಡಿ ಪಡಿಸುತ್ತಿದ್ದ 25 ಸಂಸದರನ್ನು ಅಶಿಸ್ತಿನ ಹಿನ್ನಲೆಯಲ್ಲಿ ಕಳೆದ ವಾರ 5 ದಿನಗಳ ಮಟ್ಟಿಗೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಸಂಸತ್ತಿನಿಂದ ಅಮಾನತ್ತುಗೊಳಿಸಿದ್ದರು. ಇದರಿಂದ ಕುಪಿತಗೊಂಡ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಪಾರ್ಲಿಮೆಂಟ್ ಬಹಿಷ್ಕರಿಸಿ ಸಂಸತ್ತಿನ ಹೊರಗೆ ಪ್ರತಿಭಟನೆ ಮಾಡಲಾರಂಭಿಸಿದ್ದವು.
ಪ್ರತಿಭಟನೆಗೆ ಮುಲಾಯಂ ಸಿಂಗ್ ಪಕ್ಷವಾದ ಎಸ್.ಪಿ ಸಹ ಬೆಂಬಲ ವ್ಯಕ್ತಪಡಿಸಿತ್ತು. ಆದರೆ ಸರಕಾರದ ನಿರಂತರ ಪ್ರಯತ್ನಗಳ ಹೊರತಾಗಿಯೂ ಕಾಂಗ್ರೆಸ್ ಸಂಸದರು ಸೋಮವಾರ ಸಂಸತ್ತಿನ ಒಳಗೆ ಕೋಲಾಹಲ ನಡೆಸಿ ಕಲಾಪಕ್ಕೆ ಅಡ್ಡಿಪಡಿಸಲಾರಂಭಿಸಿದರು. ಕಾಂಗ್ರೆಸ್ಸಿನ ವರ್ತನೆಯಿಂದ ಬೇಸರಗೊಂಡ 75 ವರ್ಷ ವಯಸ್ಸಿನ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಈಗ ಕಾಂಗ್ರೆಸ್ ನಾಯಕತ್ವಕ್ಕೆ ನೇರ ಸಂದೇಶ ನೀಡಿದ್ದಾರೆ.
ಮುಂಗಾರು ಅಧಿವೇಶನ ಆರಂಬದ ದಿನದಿಂದ ಕಾಂಗ್ರೆಸ್ ಸಂಸದರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ರಾಜಸ್ತಾನದ ಮುಖ್ಯಮಂತ್ರಿ ವಸುಂಧರ ರಾಜೇ ಹಾಗೂ ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ರಾಜೀನಾಮೆಗೆ ಒತ್ತಾಯಿಸಿ ಸಂಸತ್ ಕಲಾಪಗಳಿಗೆ ಅಡ್ದಿಪಡಿಸುತ್ತಿದ್ದರು. ಈ ವಿಚಾರಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸಲು ಸಿದ್ದ ಎಂದು ಬಿಜೆಪಿ ನೇತೃತ್ವದ ಸರಕಾರ ಪದೇ ಪದೇ ಮನವಿ ಮಾಡಿದರೂ ಒಪ್ಪದ ಕಾಂಗ್ರೆಸ್ ಒಂದು ದಿನದ ಕಲಾಪವೂ ನಡೆಯದಂತೆ ನೋಡಿಕೊಂಡಿತು.
ಈ ಸಲದ ಅಧಿವೇಶನದಲ್ಲಿ ದೇಶದ ಅಭಿವೃದ್ಧಿಗೆ ಅಗತ್ಯವಾದ ಅನೇಕ ಮಸೂದೆಗಳು ಚಚೆಯಾಗಿ ಒಪ್ಪಿಗೆ ಪಡೆಯಬೇಕಾಗಿದ್ದು, ಕಾಂಗ್ರೆಸ್ಸಿನ ಹಠಮಾರಿ ವರ್ತನೆಗೆ ದೇಶಾದ್ಯಂತ ಬಹಳ ಟೀಕೆ ವ್ಯಕ್ತವಾಗಿತ್ತು.
ಭಾನುವಾರ ಬಿಹಾರದ ಗಯಾದಲ್ಲಿ ಸಾರ್ವಜನಿಕ ಚುನಾವಣಾ ಪ್ರಚಾರ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ವಸುಂಧರ ಹಾಗೂ ಶಿವರಾಜ್ ಸಿಂಗ್ ಅವರ ಬಗ್ಗೆ ಮಾತನಾಡಿ, ಹಿಂದುಳಿದ ರಾಜ್ಯಗಳ ಅಭಿವೃದ್ಧಿಗಾಗಿ ಅವರು ಮಾಡುತ್ತಿರುವ ಕೆಲಸಗಳನ್ನು ಶ್ಲಾಘಿಸಿದ್ದರು.
ಪ್ರಮುಖ ಮಿತ್ರ ಪಕ್ಷವಾದ ಎಸ್.ಪಿ ನೀಡಿದ ಎಚ್ಚರಿಕೆಯನ್ನು ಪರಿಗಣಿಸಿ ಕಾಂಗ್ರೆಸ್ ತನ್ನ ಪ್ರೆತಿಭಟನೆಯನ್ನು ಹಿಂತೆಗೆಯುವುದೇ ಅಥವಾ ಮುಂದುವರಿಸುವುದೇ ಎನ್ನುವುದನ್ನು ಕುತೂಹಲದಿಂದ ಕಾದು ನೋಡಲಾಗುತ್ತಿದೆ.