ಬೆಂಗಳೂರು : ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವವನ್ನು ಅದ್ಧೂರಿಯಾಗಿ ವರ್ಷಪೂರ್ತಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಸೋಮವಾರ, ಆ.3ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಅರಸು ಶತಮಾನೋತ್ಸವ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಜನ್ಮ ಶತಮಾನೋತ್ಸವದ ಆಚರಣೆ ಆ.20 ರಂದು ಮೈಸೂರು ಜಿಲ್ಲೆಯಲ್ಲಿರುವ ಅರಸು ಅವರ ಹುಟ್ಟೂರು ಕಲ್ಲಹಳ್ಳಿ ಗ್ರಾಮದಲ್ಲಿ ಆರಂಭವಾಗಲಿದ್ದು, ಕಲ್ಲಹಳ್ಳಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಹುಣಸೂರಿನಲ್ಲಿ ದೇವರಾಜ ಅರಸು ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆಯಲಿದೆ. ಅಲ್ಲದೆ, ಅದೇ ದಿನ ದೇವರಾಜು ಅರಸು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ದೇವರಾಜ್ ಅರಸು ಅವರ ಜೀವ ರಕ್ಷಣೆಗೆ ಕಾರಣರಾದ ಧೀರ ಅಧಿಕಾರಿ, ನಿವೃತ್ತ ಡಿವೈಎಸ್ಪಿ ಸದಾನಂದ ಅವರಿಗೆ ಸನ್ಮಾನ ಪತ್ರ ಸಮರ್ಪಣೆಯೂ ನಡೆಯಲಿದೆ. ಕನ್ನಡ ರಾಜ್ಯೋತ್ಸವದಂದು ದೇವರಾಜ ಅರಸು ಅಂಚೆಚೀಟಿ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ದಿ.ದೇವರಾಜ್ ಅರಸ್ ಅವರ ಸ್ಮರಣಾರ್ಥ ಎಸ್.ಎಸ್.ಎಲ್.ಸಿ. ನಂತರದ ವ್ಯಾಸಂಗ ಮಾಡುವ ಬಾಲಕಿಯರಿಗೆ 100 ಹೊಸ ವಿದ್ಯಾರ್ಥಿನಿ ನಿಲಯಗಳನ್ನು ತೆರೆಯುವ ನಿರ್ಧಾರವನ್ನು ಸಹ ಸಭೆ ಕೈಗೊಂಡಿತು. ಇದಲ್ಲದೆ, ಪಿ.ಎಚ್.ಡಿ ವ್ಯಾಸಂಗ ಮಾದುವ ವಿದ್ಯಾರ್ಥಿನಿಯರಿಗೆ ಮಾಸಿಕ ವಿದ್ಯಾರ್ಥಿ ವೇತನ, ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳುವವರಿಗೆ ವಿದ್ಯಾರ್ಥಿ ವೇತನ ಹಾಗೂ ದೇವರಾಜ್ ಅರಸ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಡೆಸುವ ಬಗ್ಗೆ ತೀರ್ಮಾನವಾಯಿತು.
ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ತೀರ್ಮಾನಿಸಿದ್ದು, ಇದಕ್ಕಾಗಿ ಕರ್ನಾಟಕ ರತ್ನ ಪ್ರಶಸ್ತಿಯ ಮಾರ್ಗಸೂಚಿಗಳ ತಿದ್ದುಪಡಿಗೂ ಸಭೆ ನಿರ್ಧಾರ ಕೈಗೊಂಡಿತು. ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಅವಕಾಶ ಇಲ್ಲದ ಕಾರಣ ನಿಯಮಕ್ಕೆ ತಿದ್ದುಪಡಿ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಲಹೆ ನೀಡಲಾಗಿದೆ. ಹಲವು ವರ್ಷ ಅರಸುರವರ ಅಧಿಕೃತ ನಿವಾಸವಾಗಿದ್ದ ಬಾಲಬ್ರೂಯಿ ಕಟ್ಟಡವನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಿ, ಅರಸುರವರ ಪ್ರಮುಖ ಸಾಧನೆಗಳನ್ನು ಬಿಂಬಿಸುವ ನಿರ್ಧಾರವನ್ನು ಸಭೆ ತೆಗೆದುಕೊಂಡಿತು.
ಅರಸು ಜನ್ಮ ಶತಮಾನೋತ್ಸವ ಕಾರ್ಯಕ್ರಮಕ್ಕೆ ಸುಮಾರು 100 ಕೋಟಿ ರೂ. ವೆಚ್ಚ ತಗಲಲಿದೆ. ಅರಸು ಅವರ ಜೀವನ ಹಾಗೂ ಸಾಧನೆಗಳ ಬಗ್ಗೆ ಸಂಕ್ಷಿಪ್ತವಾಗಿ 100 ಪುಟಗಳ ಕನ್ನಡ ಹಾಗೂ ಇಂಗ್ಲಿಷ್ ಆವೃತ್ತಿಯ ಪುಸ್ತಕಗಳನ್ನು ಪ್ರಕಟಿಸಿ ನಂತರ ಅದನ್ನು ಹಿಂದಿ, ಉರ್ದು, ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಬೆಂಗಾಲಿ ಭಾಷೆಗಳಲ್ಲಿ ಭಾಷಾಂತರಗೊಳಿಸಲಾಗುವುದು.
ಬೆಂಗಳೂರು ವಿಶ್ವ ವಿದ್ಯಾಲಯವು ತ್ರಿಭಜನೆಗೊಂಡ ನಂತರ ಅದರಲ್ಲಿ ಒಂದು ವಿವಿಗೆ ದೇವರಾಜ್ ಅರಸು ಹೆಸರನ್ನು ಇಡುವ ಪ್ರಸ್ಥಾಪವನ್ನು ಸಭೆ ಮಾಡಿದ್ದು, ಈ ಬಗ್ಗೆ ಅಂತಿಮ ತೀರ್ಮಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಲಿದ್ದಾರೆ.
ಅರಸು ಅವರ ಯೋಜನೆಗಳು ಸರ್ಕಾರದ ಸಾಧನೆಗಳು ಮತ್ತು ಶತಮಾನೋತ್ಸವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು 4 ರಥಯಾತ್ರೆಗಳನ್ನು ರಾಜ್ಯಾದ್ಯಂತ ನಡೆಸುವ ತೀರ್ವನ ಮಾಡಲಾಗಿದೆ. ನವದೆಹಲಿಯಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ನಡೆಸಲಾಗುತ್ತದೆ. 2016ರ ಆ.20ಕ್ಕೆ ಬೆಂಗಳೂರಿನಲ್ಲಿ ಬೃಹತ್ ರಾಷ್ಟ್ರೀಯ ಸಮಾವೇಶ ಏರ್ಪಡಿಸುವ ಮೂಲಕ ಶತಮಾನೋತ್ಸವ ಆಚರಣೆ ಮುಕ್ತಾಯವಾಗುತ್ತದೆ.
ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಧರಮ್ ಸಿಂಗ್, ಸಚಿವರುಗಳಾದ ಕೆ.ಜೆ.ಜಾರ್ಜ್,ರೋಷನ್ ಬೇಗ್, ಎಚ್.ಆಂಜನೇಯ, ಮಹಾದೇವ್ ಪ್ರಸಾದ್ ಮತ್ತು ಕಾಂಗ್ರೆಸ್ ಮುಖಂಡರಾದ ಡಿ.ಬಿ. ಚಂದ್ರೇಗೌಡ, ಎಚ್. ವಿಶ್ವನಾಥ್, ಶಾಸಕ ರಮೇಶ್ ಕುಮಾರ್, ದೇವರಾಜ ಅರಸು ಅವರ ಪುತ್ರಿ ಭಾರತಿ ಅರಸ್ ಮುಂತಾದವರು ಭಾಗವಹಿಸಿದ್ದರು.