Untitled Document
Sign Up | Login    
Dynamic website and Portals
  
July 30, 2015

ಡಾ.ಅಬ್ದುಲ್ ಕಲಾಂ ಇಹಲೋಕ ಯಾತ್ರೆ ಅಂತ್ಯ, ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ

ತಮಿಳುನಾಡಿನ ರಾಮೇಶ್ವರಂ ನಲ್ಲಿ ನಡೆದ ಅಂತ್ಯಕಾರ್ಯ । ಸಹಸ್ರಾರು ಅಭಿಮಾನಿಗಳಿಂದ ಅಶ್ರುತರ್ಪಣ

ಅಗಲಿದ ಮಾಜಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಂತಿಮ ಗೌರವ ಸಲ್ಲಿಸುತ್ತಿರುವುದು.. (ಕೃಪೆಃಪಿಎಂಇಂಡಿಯ.ಗವ್.ಇನ್) ಅಗಲಿದ ಮಾಜಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಂತಿಮ ಗೌರವ ಸಲ್ಲಿಸುತ್ತಿರುವುದು.. (ಕೃಪೆಃಪಿಎಂಇಂಡಿಯ.ಗವ್.ಇನ್)

ರಾಮೇಶ್ವರಂ : ಪ್ರಧಾನಿ ನರೇಂದ್ರ ಮೋದಿ ಹಾಗೂ ನೂರಾರು ಗಣ್ಯರು ಇಹ ಲೋಕ ಯಾತ್ರೆ ಮುಗಿಸಿದ ಡಾ.ಅಬ್ದುಲ್ ಕಲಾಂ ಅವರಿಗೆ ತಮ್ಮ ಅಂತಿಮ ಗೌರವ ಸಲ್ಲಿಸಿದರು.

ಗುರುವಾರ ಬೆಳಗ್ಗೆ ಸಹಸ್ರಾರು ಜನರು ರಾಮೇಶ್ವರಂನ ಬೀದಿಗಳ ಇಕ್ಕೆಲಗಳಲ್ಲಿ ನಿಂತು ಅಗಲಿದ ಮಾಜಿ ರಾಷ್ಟ್ರಪತಿ ಭಾರತ ರತ್ನ ಡಾ.ಅಬ್ದುಲ್ ಕಲಾಂ ಅವರಿಗೆ ತಮ್ಮ ಅಂತಿಮ ನಮನಗಳನ್ನು ಅರ್ಪಿಸಿದರು.

ಸಕಲ ಸರ್ಕಾರಿ ಮರ್ಯಾದೆಗಳೊಂದಿಗೆ ಡಾ.ಕಲಾಂ ಅವರ ಪಾರ್ಥಿವ ಶರೀರವನ್ನು ಅವರ ಹುಟ್ಟೂರಾದ ರಾಮೇಶ್ವರಂ ನ ಪೀಕರುಂಬುವಿನ ಸಾರ್ವಜನಿಕ ಮೈದಾನದಲ್ಲಿ ಹೂಳಲಾಯಿತು.

ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಬುಧವಾರವೇ ರಾಮೇಶ್ವರಂ ತಲುಪಿದ್ದು ಡಾ.ಕಲಾಂ ಅಂತಿಮ ಯಾತ್ರೆಗೆ ಬೇಕಾದ ಸಿದ್ಧತೆಗಳನ್ನು ಪರಿಶೀಲಿಸಿದರು.

ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅನಾರೋಗ್ಯದ ನಿಮಿತ್ತ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿಲ್ಲ. ಸೀಮಾಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಹಿತ ಅನೇಕ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಹಸ್ರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ದರ್ಶನ ಪಡೆಯಲು ರಾಮೇಶ್ವರಂ ಗೆ ಬುಧವಾರದಿಂದಲೇ ಬರುತ್ತಿದ್ದು, ರಾಜರಸ್ತೆಯಲ್ಲಿ ನಡೆದುಕೊಂಡೇ ರಾಮೇಶ್ವರಂ ತಲುಪಿದರು. ಬಸ್ಸು, ರೈಲು, ದೋಣಿಗಳ ಸಹಾಯ ಪಡೆದು ಬಂದ ಅವರಲ್ಲಿ ಬಹುತೇಕರು ರಸ್ತೆಗಳಲ್ಲೇ ಕಳೆದ ರಾತ್ರಿಯನ್ನು ಕಳೆದರು.

ಮೂರೂ ಸೇನೆಗಳ ಅಧಿಕಾರಿಗಳು ಗುರುವಾರ ಬೆಳಗ್ಗೆ ಡಾ.ಕಲಾಂ ಅವರ ಪಾರ್ಥಿವ ಶರೀರವನ್ನು ಇರಿಸಿದ್ದ ಶವಪೆಟ್ಟಿಗೆಯನ್ನು ಅಂತ್ಯಸಂಸ್ಕಾರದ ಸ್ಥಳಕ್ಕೆ ಹೊತ್ತುಕೊಂಡು ಬಂದರು. ಕಲಾಂ ಅವರ ಶರೀರವನ್ನು ರಾಷ್ಟ್ರೀಯ ಧ್ವಜದಿಂದ ಸುತ್ತಲಾಗಿತ್ತು ಹಾಗೂ ಅವರ ಶವಪೆಟ್ಟಿಗೆಗೆ ಹಸಿರು ಶಾಲನ್ನು ಹೊದಿಸಲಾಗಿತ್ತು.

ಡಾ.ಕಲಾಂ ಅವರ ಹಿರಿಯ ಸಹೋದರ 99 ವರ್ಷ ಪ್ರಾಯದ ಮೊಹಮ್ಮದ್ ಮುತ್ತು ಮೀರ ಲೆಬ್ಬಾಯ್ ಮರೈಕರ್ ಅವರು ಸೇರಿದಂತೆ ಕುಟುಂಬದ ಸದಸ್ಯರು ಪಾರ್ಥಿವ ಶರೀರವನ್ನು ಸಾಗಿಸುವಾಗ ಹಾಜರಿದ್ದರು.

ಪುಷ್ಪಗಳಿಂದ ಅಲಂಕರಿಸಿದ್ದ ಶವ ವಾಹನದಲ್ಲಿ ಶರೀರವನ್ನು ದಫನ್ ಸ್ಥಳಕ್ಕೆ ಕೊಂಡೊಯ್ಯುವಾಗ ಕಲಾಂ ಅವರ ಅಭಿಮಾನಿಗಳು 'ಭಾರತ್ ಮಾತಾ ಕಿ ಜೈ' ಘೋಷಣೆಯನ್ನು ಕೂಗಿದರು.

ಬೀದಿಗಳ ಇಕ್ಕೆಲಗಳಲ್ಲಿ ಕಿಕ್ಕಿರಿದು ನಿಂತಿದ್ದ ಜನರು ತ್ರಿವರ್ಣ ಧ್ವಜವನ್ನು ಹಿಡಿದು ತಮ್ಮ ನೆಚ್ಚಿನ ನಾಯಕನ ಕೊನೆಯ ದರ್ಶನಕ್ಕೆ ಹಾತೊರೆಯುತ್ತಿದ್ದರು. ರಸ್ತೆ ಬದಿಯ ಕಟ್ಟಡಗಳ ಮಹಡಿಗಳಲ್ಲಿ ನಿಂತು ಜನರು ಡಾ.ಕಲಾಂ ಅವರನ್ನು ನೋಡುವ ಪ್ರಯತ್ನ ಮಾಡುತ್ತಿರುವುದೂ ಕಂಡು ಬಂತು.

ಕಳೆದ ಸೋಮವಾರ ಶಿಲಾಂಗ್ ನ ಐಐಎಂ ಸಂಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಉಪನ್ಯಾಸ ಮಾಡುತ್ತಿದ್ದಾಗ 83 ವರ್ಷದ ಡಾ.ಕಲಾಂ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಅವರನ್ನು ಹತ್ತಿರದ ಬೆಹೆನಿ ಆಸ್ಪತ್ರೆಗೆ ಸೇರಿಸಿ ತುರ್ತು ಚಿಕಿತ್ಸೆ ನೀಡಲಾಯಿತಾದರೂ ಅದು ಫಲಕಾರಿಯಾಗಲಿಲ್ಲ.

ಮಿಸ್ಸೈಲ್ ಮ್ಯಾನ್ ಎಂದೇ ಪ್ರಸಿದ್ಧರಾಗಿದ್ದ ಡಾ.ಅಬ್ದುಲ್ ಕಲಾಂ 1998ರಲ್ಲಿ ನಡೆದ ಪೋಖ್ರಾನ್-೨ ಪರಮಾಣು ಪರೀಕ್ಷೆಯಲ್ಲಿ ಪ್ರಮುಖವಾದ ಪಾತ್ರ ವಹಿಸಿದ್ದರು. ಅಲ್ಲದೆ ಭಾರತದ ಕ್ಷಿಪಣಿ ತಯಾರಿಕೆ ಯೋಜನೆಗಳಲ್ಲೂ ಅವರು ಮಹತ್ತರವಾದ ಸಾಧನೆ ಮಾದಿದ್ದರು.

ಡಾ.ಕಲಾಂ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited