ನವದೆಹಲಿ : ಶಿಲ್ಲಾಂಗ್ ನಲ್ಲಿ ಸೋಮವಾರ ರಾತ್ರಿ ನಿಧನರಾದ ಮಾಜಿ ರಾಷ್ಟ್ರಪತಿ, ಮಿಸ್ಸೈಲ್ ಮ್ಯಾನ್, ಡಾ.ಎಪಿಜೆ ಅಬ್ದುಲ್ ಕಲಾಂ ಅವರಿಗೆ ದೇಶಾದ್ಯಂತ ಕಂಬನಿಯ ಮಹಾಪೂರವೇ ಹರಿದಿದೆ.
ಡಾ. ಕಲಾಂ ಅವರು ಶಿಲಾಂಗ್ ನ ಐಐಎಂ ಕಾರ್ಯಕ್ರಮವೊಂದರಲ್ಲಿ ಉಪನ್ಯಾಸ ನೀಡುತ್ತಿದ್ದ ವೇಳೆ ಹೃದಯಾಘಾತದಿಂದ ಸ್ಥಳದಲ್ಲೇ ಕುಸಿದಿದ್ದರು. ಅವರನ್ನು ನಗರದ ಬೆತೆನಿ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಯಿತಾದರೂ ಅದು ಫಲಕಾರಿಯಾಗಲಿಲ್ಲ.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ನರೇಂದ್ರ ಮೋದಿ, ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತಿತರ ಗಣ್ಯರು, ರಾಜಕೀಯ ಮುಖಂಡರು, ಚಿತ್ರ ತಾರೆಯರು ಸೇರಿದಂತೆ ಇಡೀ ದೇಶ ಕಲಾಂ ನಿಧನಕ್ಕೆ ಕಂಬನಿ ಮಿಡಿದಿದೆ.
ಡಾ.ಅಬ್ದುಲ್ ಕಲಾಂ ನಿಧನಕ್ಕೆ ಸಂತಾಪ ಸೂಚಿಸುತ್ತ ಪ್ರಧಾನಿ ನರೇಂದ್ರ ಮೋದಿ, ನನ್ನ ಮನಸ್ಸಿನಲ್ಲಿ ಅವರ ಸಾಕಷ್ಟು ನೆನಪುಗಳಿವೆ. ಪರಸ್ಪರ ಸಾಕಷ್ಟು ಸಲ ಭೇಟಿಯಾಗಿ ಮಾತುಕತೆ ನಡೆಸಿದ್ದೇವೆ. ಅವರ ಬುದ್ಧಿಶಕ್ತಿಯನ್ನು ಮೆಚ್ಚುತ್ತೇನೆ. ಅವರಿಂದ ತುಂಬಾ ಕಲಿತಿದ್ದೇನೆ ಎಂದು ಹೇಳಿದ್ದಾರೆ.
ಡಾ ಕಲಾಂ ಅವರ ಪಾರ್ಥಿವ ಶರೀರವನ್ನು ವಿಶೇಷ ವಿಮಾನದಲ್ಲಿ ದೆಹಲಿಗೆ ತರಲಾಗುತ್ತಿದ್ದು, ಇತ್ತೀಚಿನ ಬೆಳವಣಿಗೆಗಳು ಈ ಕೆಳಗಿನಂತಿವೆಃ
* ಗಣ್ಯರಿಂದ ಅಂತಿಮ ನಮನ
* ರಾಮೇಶ್ವರಂ ನಲ್ಲಿ ಅಂತಿಮ ವಿಧಿ ವಿಧಾನ ಗುರುವಾರ ಬೆಳಗ್ಗೆ 11 ಕ್ಕೆ .
* ಲೋಕಸಭೆಯಲ್ಲಿ ಡಾ ಕಲಾಂ ನಿಧನಕ್ಕೆ ಸಂತಾಪ ಸೂಚಿಸಿ, ಕಲಾಪವನ್ನು ಜು. 30 ರವರೆಗೆ ಮುಂದೂಡಲಾಯಿತು. ರಾಜ್ಯ ಸಭೆಯನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಯಿತು.
* ರಾಷ್ಟ್ರೀಯ ಆವಿಷ್ಕಾರ್ ಅಭಿಯಾನವನ್ನು ಎಪಿಜೆ ಅಬ್ದುಲ್ ಕಲಾಂ ರಾಷ್ಟ್ರೀಯ ಆವಿಷ್ಕಾರ್ ಅಭಿಯಾನ ಎಂದು ಮರುನಾಮಕರಣ ಮಾಡಲಾಗುವುದು - ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ
* ಸಾರ್ವಜನಿಕರು ಮಧ್ಯಾಹ್ನ 4 ಗಂಟೆಯಿಂದ ದೆಹಲಿಯ 10 ರಾಜಾಜಿ ಮಾರ್ಗದಲ್ಲಿ ತಮ್ಮ ಅಂತಿಮ ಗೌರವ ಸಲ್ಲಿಸಬಹುದು.
* ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಅವರು ಪಾಲಂ ವಿಮಾನ ನಿಲ್ದಾಣದಲ್ಲಿ ಡಾ ಅಬ್ದುಲ್ ಕಲಾಂ ಅವರ ಪಾರ್ಥಿವ ಶರೀರವನ್ನು ಬರಮಾಡಿಕೊಳ್ಳಲಿದ್ದಾರೆ.
* ಗುವಾಹಟಿಯಿಂದ ಹೊರಟ ಪಾರ್ಥಿವ ಶರೀರ ಹೊತ್ತ ವಿಮಾನ, ಮಧ್ಯಾಹ್ನ 12:30 ಕ್ಕೆ ದೆಹಲಿಯ ಪಾಲಂ ವಿಮಾನ ನಿಲ್ದಾಣ ತಲುಪುವ ನಿರೀಕ್ಷೆ.
* ಗುವಾಹಟಿಯಲ್ಲಿ ಅಂತಿಮ ನಮನ್ ಸಲ್ಲಿಸಲಾಯಿತು
* 7 ದಿನ ರಾಷ್ಟ್ರೀಯ ಶೋಕಾಚರಣೆ, ಆದರೆ ರಜೆ ಇಲ್ಲ