ಶಿಲ್ಲಾಂಗ್ : ಮಾಜಿ ರಾಷ್ಟ್ರಪತಿ ಮಿಸ್ಸೈಲ್ ಮ್ಯಾನ್ ಡಾ ಅಬ್ದುಲ್ ಕಲಾಂ ಅವರು ಸೋಮವಾರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಶಿಲ್ಲಾಂಗ್ ನ ಐಐಎಂನ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದ 83 ವರ್ಷದ ಡಾ ಅಬ್ದುಲ್ ಕಲಾಂ ಉಪನ್ಯಾಸ ನೀಡುತ್ತಿದ್ದ ವೇಳೆಯೇ ವೇದಿಕೆಯಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಸ್ಪತೆಗೆ ದಾಖಲಿಸುವ ವೇಳೆಗೆ ಅವರು ಕೊನೆಯುಸಿರೆಳೆದಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
ಅಕ್ಟೋಬರ್ 15, 1931 ರಲ್ಲಿ ತಮಿಳುನಾಡಿನ ರಾಮೇಶ್ವರಂನಲ್ಲಿ ಹುಟ್ಟಿದ ಅಬ್ದುಲ್ ಕಲಾಂ ಅವರು 11 ನೇ ರಾಷ್ಟ್ರಪತಿಯಾಗಿ ಜುಲೈ 25, 2002 ರಿಂದ ಜುಲೈ 27, 2007 ವರೆಗೆ ಕಾರ್ಯನಿರ್ವಹಿಸಿದ್ದರು. ತಮಿಳುನಾಡು ಮೂಲದವರಾದ ಅಬ್ದುಲ್ ಕಲಾಂ, ಇಸ್ರೋ ವೈಮಾನಿಕ ವಿಜ್ಞಾನಿಯಾಗಿ ವಿಶ್ವ ಪ್ರಸಿದ್ದರಾಗಿದ್ದರು. ಯುವಕ-ಯುವತಿಯರಿಗೆ ಪ್ರೇರಣೆಯಾಗಿದ್ದರು. 1998ರಲ್ಲಿ ನಡೆದ ಪೋಖ್ರಾನ್-II ಪರೀಕ್ಷೆಯಲ್ಲಿ ಕಲಾಂ ಅವರು ಪ್ರಮುಖ ಪಾತ್ರವಹಿಸಿದ್ದರು. ಅವರನ್ನು ಭಾರತದ ಮಿಸ್ಸೈಲ್ ಮ್ಯಾನ್ (ಕ್ಷಿಪಣಿ ಮನುಷ್ಯ)ಎಂದು ಕರೆಯುತ್ತಿದ್ದರು. ಡಾ ಅಬ್ದುಲ್ ಕಲಾಂ ಅವರ ಸಾಧನೆಗಾಗಿ ಅವರಿಗೆ ಪದ್ಮ ಭೂಷಣ ಮತ್ತು ಭಾರತ ರತ್ನ ಪ್ರಶಸ್ತಿಯಿಂದ ಗೌರವಿಸಲಾಗಿತ್ತು.
ಡಾ ಅಬ್ದುಲ್ ಕಲಾಂ ಅವರ ನಿಧನದ ಕುರಿತು ಟ್ವೀಟ್ ಮಾಡಿದ ಗೃಹ ಸಚಿವ ರಾಜನಾಥ್ ಸಿಂಗ್, ಡಾ ಅಬ್ದುಲ್ ಕಲಾಂ ಅವರ ನಿಧನದ ಸುದ್ದಿ ತಿಳಿದು ತುಂಬಾ ದುಃಖವಾಯಿತು, ಅವರು ಎಲ್ಲಾ ಪೀಳಿಗೆಯವರಿಗೂ ಸ್ಪೂರ್ತಿಯಾಗಿದ್ದರು ಎಂದು ಹೇಳಿದ್ದಾರೆ.
ಡಾ ಅಬ್ದುಲ್ ಕಲಾಂ ಪಾರ್ಥಿವ ಶರೀರವನ್ನು ಮಂಗಳವಾರ ಬೆಳಗ್ಗೆ ಮೇಘಾಲಯದಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ತರಲಾಗುವುದು.
ಡಾ ಕಲಾಂ ಅವರ ನಿಧನದ ಹಿನ್ನಲೆಯಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಸರ್ಕಾರ ಸರ್ಕಾರಿ ರಜೆ ಘೋಷಿಸಿತ್ತು. ಆದರೆ ನಂತರ ರಜೆಯನ್ನು ರದ್ದು ಪಡಿಸಲಾಗಿದೆ. ಈ ಕುರಿತು ಸಾರ್ವಜನಿಕ ಶಿಕ್ಷಣ ಆಯುಕ್ತ ಸತ್ಯಮೂರ್ತಿ ಸ್ಪಷ್ಟನೆ ನೀಡಿದ್ದಾರೆ. ತಮ್ಮ ನಿಧನದ ದಿನ ರಜೆ ಕೊಡಬಾರದು ಬದಲಿಗೆ ಒಂದು ದಿನ ಹೆಚ್ಚಿಗೆ ಕೆಲಸ ಮಾಡಬೇಕೆಂಬುದು ಡಾ ಕಲಾಂ ಅವರ ಆಶಯವಾಗಿತ್ತು.
ದೇಶ್ಯಾದ್ಯಂತ 7 ದಿನ ಶೋಕಾಚರಣೆ ಘೊಷಿಸಲಾಗಿದೆ.