ನವದೆಹಲಿ : ಸಂಸತ್ತಿನ ಉಭಯ ಸದನಗಳಲ್ಲೂ ಕಲಾಪಗಳನ್ನು ಗುರುವಾರ ಮಧ್ಯಾಹ್ನದವರೆಗೆ ಮುಂದೂಡಲಾಯಿತು. ಲಲಿತ್ ಮೋದಿ ಪ್ರಕರಣ ಮತ್ತು ವ್ಯಾಪಂ ಹಗರಣ ಕುರಿತು ಪ್ರತಿಪಕ್ಷಗಳ ಕೋಲಾಹಲದ ಮಧ್ಯೆ ಕಲಾಪಗಳನ್ನು ಮಧ್ಯಾಹ್ನದ ವರೆಗೆ ಮುಂದೂಡಲಾಯಿತು.
ಮುಂಗಾರು ಅಧಿವೇಶನದ ಮೊದಲೆರಡು ದಿನಗಳೂ ಸಹ ವ್ಯರ್ಥವಾಗಿ, ಪ್ರತಿಪಕ್ಷಗಳ ಕೋಲಾಹಲದಲ್ಲಿ ಮುಂದೂಡಲ್ಪಟ್ಟಿತ್ತು.
ರಾಹುಲ್ ಗಾಂಧಿ ಸಹಿತ ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಇಂದೂ ಸಹ ಕಪ್ಪುಪಟ್ಟಿಯನ್ನು ಧರಿಸಿ ಆಗಮಿಸಿದ್ದರು.
ಲಲಿತ್ ಗೇಟ್ ಹಗರಣದ ಸಂಬಂಧ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ವಸುಂಧರಾ ರಾಜೇ ಮತ್ತು ವ್ಯಾಪಂ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಶಿವರಾಜ್ ಸಿಂಗ್ ಚೌಹಾಣ್ ರಾಜೀನಾಮೆಯ ನಂತರ ಮಾತ್ರ ಚರ್ಚೆಗೆ ಸಿದ್ದ ಎಂದು ರಾಜ್ಯಸಭೆಯಲ್ಲಿ ಸೀತಾರಾಂ ಯೆಚೂರಿ ಹೇಳಿದರು.