ನವದೆಹಲಿ : ಸಂಸತ್ತಿನ ಮುಂಗಾರು ಅಧಿವೇಶನದ 2ನೇ ದಿನವಾದ ಬುಧವಾರವೂ ಲಲಿತ್ ಗೇಟ್ ಮತ್ತು ವ್ಯಾಪಂ ಹಗರಣದ ಕುರಿತಂತೆ ಲೋಕಸಭೆ, ರಾಜ್ಯಸಭೆ ಸೇರಿ ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ತೀವ್ರ ಗದ್ದಲ ಎಬ್ಬಿಸಿದವು.
ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಕಪ್ಪುಪಟ್ಟಿಯನ್ನು ಧರಿಸಿ ಆಗಮಿಸಿದ್ದರು. ಇದನ್ನು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಆಕ್ಷೇಪಿಸಿದರು. ಆದರೆ ತೀವ್ರ ಕೋಲಾಹಲದ ಹಿನ್ನೆಲೆಯಲ್ಲಿ ಕಲಾಪವನ್ನು ಮಧ್ಯಾಹ್ನ 2ಗಂಟೆವರೆಗೆ ಮುಂದೂಡಲಾಯಿತು.
ಸಂಸದರು ಶಿಸ್ತನ್ನು ಅನುಸರಿಸದಿದ್ದರೆ ಸಂಸದರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸ್ಪೀಕರ್ ಮಹಾಜನ್ ಎಚ್ಚರಿಕೆ ನೀಡಿದರು.
ಮಧ್ಯಾಹ್ನ ಪ್ರಾರಂಭವಾದ ಕಲಾಪದಲ್ಲೂ ಪ್ರತಿಪಕ್ಷಗಳ ಕೋಲಾಹಲ ಮುಂದುವರಿದುದ್ದರಿಂದ, ಇಂದಿನ ಕಲಾಪವನ್ನು ಮುಂದೂಡಲಾಯಿತು.
ರಾಜ್ಯಸಭೆಯಲ್ಲಿ ಅರುಣ್ ಜೇಟ್ಲಿ, ನಾವು ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಸಿದ್ದ ಎಂದು ಹೇಳಿದರೂ ವಿರೋಧ ಪಕ್ಷಗಳು ತೀವ್ರ ಗದ್ದಲ ನಡೆಸಿದವು. ಇದರಿಂದಾಗಿ ಕಲಾಪವನ್ನು 15 ನಿಮಿಷಗಳ ಕಾಲ ಮುಂದೂಡಲಾಯಿತು.
ಸುಷ್ಮಾ ಸ್ವರಾಜ್, ವಸುಂಧರಾ ರಾಜೇ, ಶಿವರಾಜ್ ಸಿಂಗ್ ಚೌಹಾಣ್ ರಾಜೀನಾಮೆ ಕೊಡಬೇಕೆಂದು ಕಾಂಗ್ರೆಸ್ ಸಂಸದರು ತಮ್ಮ ಪಟ್ಟು ಮುಂದುವರಿಸಿದರು. ವ್ಯಾಪಂ ಹಗರಣ ಕೇವಲ ರಾಜ್ಯಕ್ಕೆ ಸಂಬಂಧಿಸಿದ್ದಲ್ಲ, ಅದರಲ್ಲಿ ನಿಗೂಢವಾಗಿ ಸಾವನ್ನಪ್ಪಿದವರು ಬೇರೆ, ಬೇರೆ ರಾಜ್ಯಗಳಿಗೆ ಸಂಬಂಧಿಸಿದವರಿದ್ದಾರೆ. ಹಾಗಾಗಿ ರಾಜ್ಯಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಲೇಬೇಕು ಎಂದು ಬಿಎಸ್ಪಿ ವರಿಷ್ಠೆ ಮಾಯಾವತಿ ಆಗ್ರಹಿಸಿದರು.
ನಮ್ಮ ಸಚಿವರ ವಿರುದ್ಧ ಯಾವುದೇ ಭ್ರಷ್ಟಾಚಾರದ ಗಂಭೀರ ಆರೋಪಗಳಿಲ್ಲ. ಸುಷ್ಮಾ ಸ್ವರಾಜ್ ಅವರು ಚರ್ಚೆಗೆ ಸಿದ್ಧರಿದ್ದಾರೆ. ಆದರೆ ಕಾಂಗ್ರೆಸ್ ಓಡಿ ಹೋಗುತ್ತಿದೆ ಎಂದು ಬಿಜೆಪಿ ನಾಯಕ, ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಹೇಳಿದರು.