ನವದೆಹಲಿ : ಸುಮಾರು 80 ಕೋಟಿ ಜನಸಂಖ್ಯೆಯನ್ನು ತಲುಪುವ ಗುರಿ ಹೊಂದಿದ ಭಾರತ ಸರಕಾರದ ಬಹು ನಿರೀಕ್ಷಿತ ಆಹಾರ ಭದ್ರತಾ ಯೋಜನೆ 20 ಬಿಲಿಯನ್ ಡಾಲರ್ (ಸುಮಾರು 1,24,000 ಕೋಟಿ ರೂಪಾಯಿ) ವೆಚ್ಚದಲ್ಲಿ ಇದೇ ವರ್ಷ ಡಿಸೆಂಬರ್ ಒಳಗಾಗಿ ಅನುಷ್ಠಾನಗೊೞುತ್ತಿದೆ. ಈ ವಿಚಾರವನ್ನು ಕೇಂದ್ರ ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ತಿಳಿಸಿದ್ದಾರೆ.
2015-16ನೇ ವಿತ್ತ ವರ್ಷದ ಬಜೆಟ್ ನಲ್ಲಿ ಅಹಾರ ಕಲ್ಯಾಣ ಯೋಜನೆಗಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು 1.24 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದರು. 120 ಕೋಟಿ ಜನಸಂಖ್ಯೆಯ ಶೇ.67 ರಷ್ಟು ಜನರಿಗೆ ಕಡಿಮೆ ದರದಲ್ಲಿ ಅಕ್ಕಿ, ಗೋಧಿ ಮುಂತಾದ ಅಗತ್ಯ ಆಹಾರ ವಸ್ತುಗಳನ್ನು ಪೂರೈಸುವುದು ಆಹಾರ ಭದ್ರತಾ ಯೋಜನೆಯ ಗುರಿಯಾಗಿದೆ.
ಈ ಹಿಂದಿನ ಯುಪಿಯೆ ಸರಕಾರ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಕಾಯ್ದೆಯನ್ನು ಆಗಸ್ಟ್ 2013ರಲ್ಲಿ ಜ್ಯಾರಿಗೆ ತಂದಿತ್ತು. ಇದರ ಪ್ರಕಾರ ದೇಶದ 29 ರಾಜ್ಯಗಳು ಹಾಗೂ 7 ಕೇಂದ್ರಾಡಳಿತ ಪ್ರದೇಶಗಳು ಈ ಯೋಜನೆಯನ್ನು ಒಂದು ವರ್ಷದ ಒಳಗಾಗಿ ಅನುಷ್ಠಾನಗೊಳಿಸಬೇಕಾಗಿತ್ತು.
ಅನೇಕ ಕಾರಣಗಳಿಗಾಗಿ ಗಡುವು ಸಾಧಿಸಲು ವಿಫಲವಾಗಿ ಕೇವಲ 11 ರಾಜ್ಯಗಳಷ್ಟೇ ಈ ಯೋಜನೆಯನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿವೆ. ಉಳಿದ ರಾಜ್ಯಗಳು ಇನ್ನಷ್ಟು ಸಮಯ ಬೇಕೆಂದು ಕೇಂದ್ರವನ್ನು ವಿನಂತಿಸಿವೆ.
ಮಂಗಳವಾರ ರಾಜ್ಯಗಳ ಆಹಾರ ಸಚಿವರುಗಳನ್ನು ಭೇಟಿಯಾದ ನಂತರ ವರದಿಗಾರರೊಂದಿಗೆ ಮಾತನಾಡುತ್ತ, 'ಕೊನೆಗೂ ಬಹುತೇಕ ರಾಜ್ಯಗಳು ಈ ಯೋಜನೆಯನ್ನು ಡಿಸೆಂಬರ್ 2015ರ ಒಳಗಾಗಿ ಅನುಷ್ಟಾನಗೊಳಿಸಲು ಸಮ್ಮತಿಸಿವೆ. ಇದೇ ಸೆಪ್ಟೆಂಬರ್ ನಲ್ಲಿ ಕೊನೆಯ ಗಡುವನ್ನು ವಿಧಿಸಲಾಗಿತ್ತು' ಎಂದು ಪಾಸ್ವಾನ್ ತಿಳಿಸಿದ್ದಾರೆ.
ಬೇಕಾಬಿಟ್ಟಿಯಾಗಿದ್ದ ಸಬ್ಸಿಡಿಗಳನ್ನು ಹತೋಟಿಗೆ ತರುವತ್ತ ನರೇಂದ್ರ ಮೋದಿ ಸರಕಾರ ಪ್ರಯತ್ನ ಮಾಡುತ್ತಿದ್ದು, ಈಗಾಗಲೇ ಗ್ಯಾಸ್ ಸಬ್ಸಿಡಿ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವ ಯೋಜನೆ ಜಾರಿಗೆ ತಂದಿದೆ. ಇನ್ನು ಮುಂದೆ ಆಹಾರ ಮತ್ತು ಸೀಮೆ ಎಣ್ಣೆ ಸಬ್ಸಿಡಿ ಹಣವನ್ನು ಸಹ ಪಡಿತರ ಗ್ರಾಹಕರ ಖಾತೆಗಳಿಗೆ ನೇರವಾಗಿ ವರ್ಗಾಯಿಸುವ ಚಿಂತನೆ ಸರಾಕರದ ಮುಂದಿದೆ. ಇದರಿಂದ ಸುಮಾರು 25000 ಕೋಟಿ ರೂ. ಗೂ ಹೆಚ್ಚಿನ ಹಣವನ್ನು ಉಳಿಸಬಹುದು ಎಂದು ಅಂದಾಜಿಸಲಾಗಿದೆ.