BW News Bureau : ಸುಪ್ರೀಂಕೋರ್ಟ್ ಮುಖ್ಯನ್ಯಾಯಾಪೀಠ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯನ್ನು 8 ವಾರಗಳ ಕಾಲ ಮುಂದೂಡಲು ಆದೇಶ ನೀಡಿದೆ.
ಮಹಾನಗರ ಪಾಲಿಕೆಯ ಚುನಾವಣೆ ಮುಂದೂಡುವಂತೆ ಸುಪ್ರೀಂಕೋರ್ಟ್ ಗೆ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ನಡೆಸಿದ ಸುಪ್ರೀಂಕೋರ್ಟ್, ಬಿಬಿಎಂಪಿ ಚುನಾವಣೆ ನಡೆಸಲು 8 ವಾರಗಳ ಗಡವು ನೀಡಿದ್ದು, ಹಳೇ ಮೀಸಲಾತಿ ಅನ್ವಯದಂತೆ ಅಕ್ಟೋಬರ್ 5ರೊಳಗೆ ಚುನಾವಣೆ ನಡೆಸುವಂತೆ ಸೂಚಿಸಿದೆ.
ಕರ್ನಾಟಕ ಸರಕಾರದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಎಚ್.ಎಲ್.ದತ್ತು ಅವರು 2 ತಿಂಗಳು (8 ವಾರ) ಚುನಾವಣೆ ಮುಂದೂಡಲು ಆದೇಶ ನೀಡಿದ್ದಾರೆ.
ರಾಜ್ಯ ಚುನಾವಣಾ ಆಯೋಗ ಹಳೆ ಮೀಸಲಾತಿ ಅನ್ವಯದಂತೆ ಜುಲೈ 28 ರಂದು ಬಿಬಿಎಂಪಿ ಚುನಾವಣೆ, ಜು 31 ಕ್ಕೆ ಫಲಿತಾಂಶ ಪ್ರಕಟ ಎಂದು ಘೋಷಿಸಿತ್ತು. ಇದೀಗ ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ಅಕ್ಟೋಬರ್ ಒಳಗೆ ಬಿಬಿಎಂಪಿ ಚುನಾವಣೆಯನ್ನು ಪೂರ್ಣಗೊಳಿಸಬೇಕಾಗಿದೆ.
2011 ರ ಜನಗಣತಿ ಪ್ರಕಾರ ಮೀಸಲು ನಿಗದಿ, ಕ್ಷೇತ್ರ ಪುನರ್ ವಿಂಗಡಣೆಗೆ ಅವಕಾಶ ಕೊಡುವಂತೆ ಕೋರಿತ್ತು. ಕ್ಷೇತ್ರ ಪುನರ್ ವಿಂಗಡಣೆ, ಹೊಸ ಮೀಸಲಾತಿ ಕುರಿತ ವಾದ ಮಂಡನೆಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ.